ಉಡುಪಿ: ತುಳುಕೂಟದ 21ನೇ ವರ್ಷದ ಕೆಮ್ತೂರು ದೊಡ್ಡಣ್ಣ ಶೆಟ್ಟಿ ಸ್ಮಾರಕ ತುಳು ನಾಟಕ ಸ್ಪರ್ಧೆ (ಪರ್ಬ) ಜನವರಿ 8 ರಿಂದ 14ರ ವರೆಗೆ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ ಎಂದು ತುಳುಕೂಟದ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.8ರಂದು ಸಂಜೆ 5ಗಂಟೆಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಕೆಮೂರು ತುಳುನಾಟಕ ಪರ್ಬವನ್ನು ಉದ್ಘಾಟಿಸಲಿದ್ದಾರೆ. ಸಭಾಕಾರ್ಯಕ್ರಮದ ಬಳಿಕ ಪೆರ್ಡೂರು ರಂಗ ಸಿಂಧೂರ ತಂಡದ ರಮೇಶ್ ಆಚಾರ್ ನಿರ್ದೇಶನದ ಬಯ್ಯಮಲ್ಲಿಗೆ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ಜ.9ರಂದು ಸಂಜೆ 6.30ಕ್ಕೆ ಪಟ್ಲ ಭೂಮಿಗೀತ ಸಾಂಸ್ಕೃತಿಕ ವೇದಿಕೆಯ ಸಂತೋಷ್ ನಾಯಕ್ ಪಟ್ಲ ನಿರ್ದೇಶನದ ಹೇ ರಾಮ್ ನಾಟಕ ಪ್ರದರ್ಶನಗೊಳ್ಳಲಿದೆ. ಜ.10ರಂದು ಸಂಜೆ 6.30ಕ್ಕೆ ಮಲ್ಪೆ ಬಿಲ್ಲವ ಸಮಾಜ ಸೇವಾ ಸಂಘದ ಮಹಿಳಾ ಘಟಕದ ವತಿಯಿಂದ ನಾಗರಾಜ್ ವರ್ಕಾಡಿ ನಿರ್ದೇಶನದ ಮಹಿಮೆದ ಸಿರಿಕುಲು ನಾಟಕ ಪ್ರದರ್ಶನಗೊಳ್ಳಲಿದೆ. ಜ.11ರಂದು ಸಂಜೆ 6.30ಕ್ಕೆ ಕೊಡವೂರು ವನಸುಮ ರಂಗಮಂಚ ತಂಡದ ಬಾಲಕೃಷ್ಣ ಕೊಡವೂರು ನಿರ್ದೇಶನದ ‘ಸಮ್ಗಾರನ ಸೆಡಕ್ದ ಬುಡೆದಿ’ ನಾಟಕ ಪ್ರದರ್ಶನಗೊಳ್ಳಲಿದೆ. ಜ.12ರಂದು ಸಂಜೆ 6.30ಕ್ಕೆ ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ರಾಜೇಶ್ ಭಟ್ ಪಣಿಯಾಡಿ ನಿರ್ದೇಶನದ ಅಜ್ಜಯ್ಯನ ಕಥೆ ಕೇಣ್ದರಾ ನಾಟಕ ಪ್ರದರ್ಶನ ಗೊಳ್ಳಲಿದೆ. ಜ.13ರಂದು ಸಂಜೆ 6.30ಕ್ಕೆ ಅಮೋಘ ಹಿರಿಯಡ್ಕ ತಂಡದ ಪ್ರದೀಪ್ ಚಂದ್ರ ಕುತ್ಪಾಡಿ ನಿರ್ದೇಶನದ ರೈಲುಭೂತ ನಾಟಕ ಪ್ರದರ್ಶನಗೊಳ್ಳಲಿದೆ ಹಾಗೂ. ಜ.14ರಂದು ಸಂಜೆ 6.30ಕ್ಕೆ ಸುಮನಸಾ ಕೊಡವೂರು ಸಂಸ್ಥೆಯ ಜೋಸೆಫ್ ನೀನಾಸಂ ನಿರ್ದೇಶನದ ಸುಳಿಸುರುಳಿ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.
ಸಮಿತಿ ಸಂಚಾಲಕ ಬಿ. ಪ್ರಭಾಕರ ಭಂಡಾರಿ ಮಾತನಾಡಿ, ನಾಟಕ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಗಳಿಸುವ ತಂಡಗಳಿಗೆ ಕ್ರಮವಾಗಿ 20 ಸಾವಿರ, 15 ಸಾವಿರ ಹಾಗೂ 10 ಸಾವಿರ ನಗದು ಬಹುಮಾನದೊಂದೊಗೆ ಶಾಶ್ವತ ಫಲಕ ನೀಡಲಾಗುವುದು ಎಂದರು.
ಅಲ್ಲದೇ ನಿರ್ದೇಶನ, ಸಂಗೀತ, ರಂಗವಿನ್ಯಾಸ, ಬೆಳಕು, ನಟ, ನಟಿ ವಿಭಾಗಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ನೀಡಲಾಗುತ್ತದೆ. ಸ್ಪರ್ಧೆಗೆ ಆಯ್ಕೆಯಾದ ರಾಜ್ಯದೊಳಗಿನ ತಂಡಗಳಿಗೆ ರೂ. 5 ಸಾವಿರ ಹಾಗೂ ಹೊರರಾಜ್ಯದ ತಂಡಗಳಿಗೆ ರೂ. 10 ಸಾವಿರ ಭತ್ಯೆಯೊಂದಿಗೆ ಟ ಉಪಚಾರ ಮತ್ತು ಉತ್ತಮ ಸೌಕರ್ಯಗಳನ್ನು ಉಡುಪಿ ತುಳುಕೂಟದ ವತಿಯಿಂದ ಒದಗಿಸಲಾಗುವುದು. ಬಹುಮಾನ ವಿತರಣೆ ಕಾರ್ಯಕ್ರಮ ಫೆಬ್ರುವರಿ ತಿಂಗಳಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ತುಳುಕೂಟದ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಕಿದಿಯೂರು, ಉಪಾಧ್ಯಕ್ಷ ದಿವಾಕರ್ ಸನಿಲ್, ಪ್ರಕಾಶ್ ಸುವರ್ಣ ಕಟಪಾಡಿ ಇದ್ದರು.