ಕುಂದಾಪುರ: ಮೀನುಗಾರಿಕೆ ಮಾಡಲು ಬಹು ಮುಖ್ಯವಾಗಿ ಮೀನುಗಾರರಿಗೆ ಬೇಕಾಗಿರುವ ಸೀಮೆ ಎಣ್ಣೆ ಬಿಡುಗಡೆ ಮಾಡುವಂತೆ ಹಾಗೂ ದೋಣಿ ದುರಂತ ಮತ್ತು ಮೀನುಗಾರಿಕೆ ಮಾಡುತ್ತಿರುವ ಸಂದರ್ಭದಲ್ಲಿ ಅವಘಡ ಸಂಭವಿಸಿ ಮೃತಪಟ್ಟ ಮೀನುಗಾರರಿಗೆ ಬಾಕಿ ಇರುವ ಸಂಕಷ್ಟ ಪರಿಹಾರ ಯೋಜನೆಯ ಹಣ ಮತ್ತು ಉಳಿತಾಯ ಪರಿಹಾರ ಯೋಜನೆಯ ಹಣವನ್ನು ಬಿಡುಗಡೆ ಮಾಡುವಂತೆ, ಗಂಗೊಳ್ಳಿ ಜಟ್ಟಿ ದುರಸ್ತಿ ಕಾರ್ಯಕ್ಕೆ ವೇಗ ನೀಡುವಂತೆ ಆಗ್ರಹಿಸಿ ಮೀನುಗಾರರ ಮುಂಡರುಗಳು ಮೀನುಗಾರಿಕೆ ಮತ್ತು ಬಂದರು ಸಚಿವ ಎಸ್.ಅಂಗಾರ ಮತ್ತು ಬೈಂದೂರು ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅವರನ್ನು ಬೆಂಗಳೂರಿನಲ್ಲಿ ಸೋಮವಾರ ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಕುಂದಾಪುರ ಕ್ಷೇತ್ರದ ಶಾಸಕ ಶ್ರೀನಿವಾಸ ಶೆಟ್ಟಿ ಮತ್ತು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಹಾಗೂ ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ ಕಂಚುಗೋಡು,ಉಪಾಧ್ಯಕ್ಷ ಸೂರಜ್ ಖಾರ್ವಿ, ನಿರ್ದೇಶಕರಾದ ಚಂದ್ರ ಖಾರ್ವಿ,ಗಂಗೊಳ್ಳಿ ವಲಯ ಸಾಂಪ್ರದಾಯಿಕ ನಾಡದೋಣಿ ಸಂಘದ ಅಧ್ಯಕ್ಷ ಯಶವಂತ್ ಗಂಗೊಳ್ಳಿ ಉಪಸ್ಥಿತರಿದ್ದರು.
“ವಿಧಾನ ಪರಿಷತ್ ಅಧಿವೇಶನ ನಡೆಯುತ್ತಿರುವ ಈ ಸಂದರ್ಭದಲ್ಲಿ ಮೀನುಗಾರರ ನಾನಾ ಬೇಡಿಕೆಗಳನ್ನು ಈಡೇರಿಕೆ ಮಾಡುವಂತೆ ಆಗ್ರಹಿಸಿ ಮೀನುಗಾರಿಕೆ ಸಚಿವರು ಮತ್ತು ಕ್ಷೇತ್ರದ ಶಾಸಕರಿಗೆ ಮನವಿಯನ್ನು ನೀಡಲಾಗಿದೆ. ಬೇಡಿಕೆಯನ್ನು ಈಡೇರಿಕೆ ಮಾಡುವ ಕುರಿತು ಸಚಿವರು ಭರವಸೆಯನ್ನು ನೀಡಿದ್ದಾರೆ. ಮೀನುಗಾರರ ಸಂಕಷ್ಟಗಳಿಗೆ ಸರಕಾರ ಕೂಡಲೆ ಸ್ಪಂದನೆ ಮಾಡಬೇಕು” -ಸದಾಶಿವ ಖಾರ್ವಿ ಕಂಚುಗೋಡು ಅಧ್ಯಕ್ಷರು,ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರ ಸಂಘ