ಮಣಿಪಾಲ: ಮಣಿಪಾಲ – ಪೆರಂಪಳ್ಳಿ – ಶೀಂಬ್ರ ರಸ್ತೆ ಅಗಲೀಕರಣಗೊಳಿಸಿ ಅಭಿವೃದ್ಧಿ ಪಡಿಸಲು ಶಾಸಕ ಕೆ. ರಘುಪತಿ ಭಟ್ ಅವರ ಶಿಫಾರಸ್ಸಿನ ಮೇರೆಗೆ 7 ಕೋಟಿ ಅನುದಾನ ಮಂಜೂರಾಗಿದ್ದು, ಭಾಗಶಃ ಕಾಮಗಾರಿ ಪೂರ್ಣಗೊಂಡಿದೆ.
ಈ ರಸ್ತೆ ಹಾದುಹೋಗುವ ಪೆರಂಪಳ್ಳಿಯ ಶೀಂಬ್ರ ಬ್ರಿಡ್ಜ್ ಬಳಿ ರಸ್ತೆ ಅಗಲೀಕರಣಕ್ಕೆ ಖಾಸಗಿ ಜಾಗದ ಸಮಸ್ಯೆ ಉಂಟಾಗಿ ರಸ್ತೆ ಕಾಮಗಾರಿ ಸ್ಥಗಿತಗೊಂಡಿತ್ತು. ಇದರಿಂದ ಸಾರ್ವಜನಿಕರಿಗೆ ಸಂಚಾರಕ್ಕೆ ತೊಂದರೆಯಾಗುತ್ತಿದ್ದು ಸ್ಥಳೀಯರ ಮನವಿಯಂತೆ ಶಾಸಕ ಕೆ. ರಘುಪತಿ ಭಟ್ ಅವರು ಇಂದು ಇಲಾಖಾಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ರಸ್ತೆ ಅಗಲೀಕರಣಕ್ಕೆ ಭೂಸ್ವಾಧೀನ ಪಡಿಸಲು 50 ಲಕ್ಷ ರೂ. ಮಂಜೂರಾಗಿದ್ದು, ಭೂಸ್ವಾಧೀನ ಪ್ರಕ್ರಿಯೆ ಮೂಲಕ ಜಾಗ ಬಿಟ್ಟುಕೊಡುವ ಖಾಸಗಿ ಜಾಗದ ಮಾಲೀಕರಿಗೆ ಪರಿಹಾರ ನೀಡುವುದಾಗಿ ಶಾಸಕರು ತಿಳಿಸಿದರು. ಇದಕ್ಕೆ ಖಾಸಗಿ ಜಾಗದ ಮಾಲೀಕರು ಸಮ್ಮತಿ ಸೂಚಿಸಿದರು. ಶೀಘ್ರವೇ ರಸ್ತೆ ಕಾಮಗಾರಿಯನ್ನು ಆರಂಭಿಸುವಂತೆ ಶಾಸಕರು ಗುತ್ತಿಗೆದಾರರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ನಗರ ಸಭೆಯ ನಾಮ ನಿರ್ದೇಶಿತ ಸದಸ್ಯರಾದ ಅರುಣಾ ಪೂಜಾರಿ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ದಿನೇಶ್, ಸಹಾಯಕ ಅಭಿಯಂತರರಾದ ಗಿರೀಶ್, ಗುತ್ತಿಗೆದಾರರಾದ ಮಹೇಶ್, ಮತ್ತು ಸ್ಥಳೀಯರು ಉಪಸ್ಥಿತರಿದ್ದರು