ಉಡುಪಿ: ಮಣಿಪಾಲ, ಕುಂದಾಪುರ ಹಾಗೂ ಆನ್ ಲೈನ್ ದ ತ್ರಿವರ್ಣ ಕಲಾ ಕೇಂದ್ರದ ವತಿಯಿಂದ ‘ಸಂಸ್ಕಾರ’ ವಿಷಯದ ಕುರಿತ ಮೂರು ದಿನಗಳ ವರ್ಣ ಚಿತ್ರಕಲಾ ಪ್ರದರ್ಶನವು ಇದೇ ನ.18ರಿಂದ 20ರವರೆಗೆ ಮೂರು ದಿನಗಳ ಕಾಲ ಮಣಿಪಾಲದ ತ್ರಿವರ್ಣ ಆರ್ಟ್ ಗ್ಯಾಲರಿಯಲ್ಲಿ ನಡೆಯಲಿದೆ ಎಂದು ಕೇಂದ್ರದ ಕಲಾವಿದ ಹಾಗೂ ಮಾರ್ಗದರ್ಶಕ ಹರೀಶ್ ಸಾಗಾ ತಿಳಿಸಿದ್ದಾರೆ.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಣಿಪಾಲ, ಕುಂದಾಪುರ ತ್ರಿವರ್ಣ ಕಲಾ ಕೇಂದ್ರ ಹಾಗೂ ಆನ್ಲೈನ್ ಮೂಲಕ ಚಿತ್ರಕಲೆಯನ್ನು ಅಭ್ಯಸಿಸುತ್ತಿರುವ ಒಟ್ಟು 39 ಮಂದಿ ಕಿರಿಯರ ವಿಭಾಗದ ಕಲಾ ವಿದ್ಯಾರ್ಥಿಗಳು ರಚಿಸಿದ ವರ್ಣಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ ಎಂದರು.
ವಿದ್ಯಾರ್ಥಿಗಳು ಅಕ್ರಾಲಿಕ್, ಜಲವರ್ಣ, ಪೋಸ್ಟರ್ ಪೆನ್ಸಿಲ್, ಚಾರ್ಕೋಲ್ ಬಣ್ಣದ ಮೂಲಕ ತಮ್ಮ ಕಲೆಯನ್ನು ಪ್ರದರ್ಶಿಸಲಿದ್ದಾರೆ. 3 ದಿನಗಳ ಚಿತ್ರಕಲಾ ಪ್ರದರ್ಶನದಲ್ಲಿ ನೇಮ, ದೇವ ದರ್ಶನ, ಹೂ ಕಟ್ಟುವುದು, ಅಕ್ಷರಾಭ್ಯಾಸ, ಸಮುದ್ರ ಪೂಜೆ, ಗೃಹ ಪ್ರವೇಶ, ವಿಶು ಹಬ್ಬ, ಗೋ ಪೂಜೆ, ನಾಗ ಮಂಡಲ, ಸಂಕ್ರಾತಿ, ಎಲೆ ಭೋಜನ, ರಂಗೋಲಿ, ಚೌತಿ, ನವ ರಾತ್ರಿ, ತುಳಸಿಪೂಜೆಗಳೆಲ್ಲಾ ಕಲಾರೂಪ ತಳೆಯಲಿವೆ ಎಂದು ಸಾಗಾ ತಿಳಿಸಿದರು.
ಚಿತ್ರಕಲಾ ಪ್ರದರ್ಶನವನ್ನು ನ.18ರಂದು ಬೆಳಿಗ್ಗೆ 10ಗಂಟೆಗೆ ನಿವೃತ್ತ ಕನ್ನಡ ಪ್ರಾಧ್ಯಾಪಕ ಹಾಗೂ ಹಿರಿಯ ವಿದ್ವಾಂಸ ಡಾ.ಪಾದೆಕಲ್ಲು ವಿಷ್ಣು ಭಟ್ ಉದ್ಘಾಟಿಸಲಿದ್ದಾರೆ. ಪ್ರದರ್ಶನವು ನ.18ರಿಂದ 20ರವರೆಗೆ ಬೆಳಗ್ಗೆ 10ರಿಂದ ಸಂಜೆ 7:30ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕಲಾವಿದರ ಪೋಷಕರಾದ ಡಾ.ಶಿವರುದ್ರ ಸ್ವಾಮಿ, ಅರವಿಂದ ಪಂಡಿತ್, ಕವಿತಾ ನಾಯಕ್, ವಿನುತಾ, ವಿಜಯಲಕ್ಷ್ಮೀ ಹಾಗೂ ಪಲ್ಲವಿ ಉಪಸ್ಥಿತರಿದ್ದರು.