ಸಾಲಿಗ್ರಾಮ: ಮದ್ಯ ಸೇವನೆ ಮಾಡುವ ನೆಪದಲ್ಲಿ ಬಂದಿದ್ದ ಐದು ಮಂದಿ ದುಷ್ಕರ್ಮಿಗಳು ಅನಾವಶ್ಯಕವಾಗಿ ಗಲಾಟೆ ಎಬ್ಬಿಸಿ ಬಾರ್ ಮಾಲೀಕರನ್ನೇ ಕೊಲೆ ಮಾಡಲು ಯತ್ನಿಸಿದ ಘಟನೆ ಸಾಲಿಗ್ರಾಮದ ಚಿತ್ರಪಾಡಿ ಗ್ರಾಮದ ನರ್ತಕಿ ಬಾರ್ ನಲ್ಲಿ ಫೆ.1ರಂದು ರಾತ್ರಿ 10ಗಂಟೆಗೆ ನಡೆದಿದೆ.
ಆರೋಪಿಗಳನ್ನು ಸ್ಥಳೀಯರಾದ ರೋಹಿತ್, ರಂಜಿತ್, ಸುಚಿನ್, ಶಶಾಂಕ್ ಹಾಗೂ ವಿಘ್ನೇಶ್ ಎಂದು ಗುರುತಿಸಲಾಗಿದೆ. ಈ ಹಿಂದೆ ಬಾರ್ ನಲ್ಲಿ ಗಲಾಟೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ನರ್ತಕಿ ಬಾರ್ನ ಮಾಲೀಕ ರಿತೇಶ್ ಮತ್ತು ಅವರ ತಮ್ಮ ರಾಹುಲ್ ಶೆಟ್ಟಿ ಎಚ್ಚರಿಕೆ ನೀಡಿದ್ದರು. ಇದೇ ದ್ವೇಷವನ್ನು ಇಟ್ಟುಕೊಂಡು ಬಾರ್ ಮಾಲೀಕರನ್ನು ಕೊಲೆ ಮಾಡುವ ಉದ್ದೇಶದಿಂದ ನಿನ್ನೆ ರಾತ್ರಿ ಮತ್ತೆ ಈ ಐವರು ಬಾರ್ ಗೆ ಬಂದಿದ್ದರು. ಬಾರ್ ನಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ಇವರು ಸ್ವಲ್ಪ ಸಮಯದ ಬಳಿಕ ಅನಾವಶ್ಯಕವಾಗಿ ಗಲಾಟೆ ಎಬ್ಬಿಸಿದ್ದಾರೆ.
ಬಾರಿನ ಮಾಲೀಕರಾದ ರಿತೇಶ್ ಮತ್ತು ರಾಹುಲ್ ಬಂದು ಏನು ಗಲಾಟೆ ಎಂದು ಪ್ರಶ್ನಿಸಿದ್ದಾರೆ. ಆಗ ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿ ಬಿಯರ್ ಬಾಟಲಿಯಿಂದ ಹಾಗೂ ಕೈಯಿಂದ ಹೊಡೆದು ನೆಲಕ್ಕೆ ದೂಡಿ ಕಾಲಿನಿಂದ ತುಳಿದ್ದಾರೆ ಎನ್ನಲಾಗಿದೆ. ಇದರ ಪರಿಣಾಮ ರಾಹುಲ್ ಹಾಗೂ ರಿತೇಶ್ ಅವರಿಗೆ ಗಾಯವಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.