ಉಡುಪಿ: ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಶುರುವಾಗಿರುವ ಪರಶುರಾಮ ಪ್ರತಿಮೆ ಅಸಲಿಯೋ ಅಥವಾ ನಕಲಿಯೋ ಕುರಿತ ಚರ್ಚೆಗೆ ಪ್ರತಿಕ್ರಿಯೆ ನೀಡಿರುವ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು, ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ಗೋಮಾಳ ಜಾಗಕ್ಕೆ ಸೇರಿದ್ದು, ಅಲ್ಲಿ ನಿರ್ಮಿಸಿರುವ ಪಾರ್ಕ್ ಕೂಡ ಅಕ್ರಮ. ಅಲ್ಲದೆ, ಅಲ್ಲಿ ಪ್ರತಿಷ್ಠಾಪಿಸಿರುವ ಪ್ರತಿಮೆ ಕೂಡ ಫೇಕ್ ಎಂದು ಕಿಡಿಕಾರಿದ್ದಾರೆ.
ಕಾರ್ಕಳ ಶಾಸಕರು ಅಭಿವೃದ್ಧಿಗಾಗಿ ಪ್ರತಿಮೆ ನಿರ್ಮಾಣ ಮಾಡಿದ್ದೇನೆ ಎಂದು ಹೇಳುತ್ತಾರೆ. ಆದರೆ, ಅಕ್ರಮವಾಗಿ ಪ್ರತಿಮೆ ನಿರ್ಮಾಣ ಮಾಡಿದರೆ ಅಭಿವೃದ್ಧಿ ಹೇಗಾಗುತ್ತದೆ? ಅಭಿವೃದ್ಧಿ ಎಂದರೆ ಜನರಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಅನ್ನ ಮತ್ತು ಸೂರು ನೀಡುವುದಾಗಿದೆ ಎಂದರು.
ಅದು ಬಿಟ್ಟು ಕಂದಾಯ ಇಲಾಖೆ ಸಹಿತ ಎಲ್ಲ ಇಲಾಖೆಗಳು ಅನುಮತಿ ನೀಡದೇ ಇದ್ದರೂ ಪಾರ್ಕ್ ನಿರ್ಮಾಣ ಮಾಡಿರುವುದು ಅಭಿವೃದ್ಧಿ ಎನಿಸಿಕೊಳ್ಳುವುದಿಲ್ಲ. ಭ್ರಷ್ಟಾಚಾರದ ವಿರುದ್ಧ ಎಂದು ಹೇಳುತ್ತಿರುವ ಕಾಂಗ್ರೆಸ್ ಸರ್ಕಾರ ಇದರ ಬಗ್ಗೆ ತನಿಖೆ ನಡೆಸುವ ನೈತಿಕತೆ ಹೊಂದಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.