ಕುಂದಾಪುರ: ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಚಿಪ್ಸಿ ಐಟಿ ಸೆಲೂಶನ್ಸ್ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂಭವಿ ಭಂಡಾರ್ಕರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಯಲ್ಲಿ ಕೌಶಲಗಳ ಜತೆಗೆ ಉತ್ತಮ ಅಂಕ ತೆಗೆಯುವುದು ಮುಖ್ಯ.ಯಾವುದೇ ಸಂಸ್ಥೆಯಲ್ಲಿ ಉನ್ನತ ಹುದ್ದೆಗೆ ಭಡ್ತಿ ಪಡೆಯಲು ಸಂಸ್ಥೆಯ ಅಭಿವೃದ್ಧಿಗಾಗಿ ಮಾಡಿದ ನಿರಂತರ ಕೆಲಸವೇ ಮುಖ್ಯವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಐಎಂಜೆ ವಿದ್ಯಾಸಂಸ್ಥೆಗಳ ನಿರ್ದೇಶಕ ಪ್ರೊ.ದೋಮ ಚಂದ್ರಶೇಖರ್ ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ| ಅಬ್ದುಲ್ ಕರೀಂ ಶುಭಹಾರೈಸಿದರು.
ವಿದ್ಯಾರ್ಥಿಗಳ ಶೈಕ್ಷಣಿಕ, ಕ್ರೀಡಾ, ಸಾಂಸ್ಕೃತಿಕ ಸಾಧನೆ ಮಾಡಿದ ಸಾಧಕರಿಗೆ ಬಹುಮಾನ ವಿತರಿಸಲಾಯಿತು.ಬ್ರಾಂಡ್ಬಿಲ್ಡಿಂಗ್ ನಿರ್ದೇಶಕ ಡಾ| ರಾಮಕೃಷ್ಣ ಹೆಗಡೆ, ಡೀನ್ ಟಿಪಿಐಆರ್ ಪ್ರೊ. ಅಮೃತಮಾಲಾ,ವಿಭಾಗ ಮುಖ್ಯಸ್ಥರು, ಉಪನ್ಯಾಸಕರು ಮತ್ತು ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು.
ಉಪಪ್ರಾಂಶುಪಾಲ ಪ್ರೊ. ಮೆಲ್ವಿನ್ ಡಿಸೋಜಾ ವಾರ್ಷಿಕ ವರದಿ ವಾಚಿಸಿ, ಪ್ರೊ. ಅಕ್ಷತಾ ನಾಯಕ್ ಸ್ವಾಗತಿಸಿದರು. ಫಾತಿಮಾ ತಹಸಿರ್ ಕಾರ್ಯಕ್ರಮ ನಿರೂಪಿಸಿ, ಡಾ| ನಿಖಿಲಾ ಪೈ ವಂದಿಸಿದರು.