ನಂಜನಗೂಡು: ನಗರದ ಯಾತ್ರಿ ಭವನದಲ್ಲಿ ಬಿಜೆಪಿ ಪಕ್ಷದಿಂದ ಕೃತಜ್ಞತಾ ಹಾಗೂ ಅವಲೋಕನ ಸಭೆಯನ್ನು ಮಾಜಿ ಶಾಸಕ ಬಿ.ಹರ್ಷವರ್ಧನ್ ಉದ್ಘಾಟಿಸಿದರು. ಚುನಾವಣೆಯಲ್ಲಿ ಸೋತಿದ್ದೇನೆ ಆದರೆ ನಾನು ಸತ್ತಿಲ್ಲ. ಸಮಿಶ್ರ ಸರ್ಕಾರದಲ್ಲಿ ನುಗು ಏತ ನೀರಾವರಿ ಯೋಜನೆ ಜಾರಿಗೆ ತಂದಿದ್ದೆ. ರಸ್ತೆ, ಚರಂಡಿ, ಕುಡಿಯುವ ನೀರು, ಸಮುದಾಯ ಭವನಗಳ ನಿರ್ಮಾಣ ಮಾಡಿದ್ದೇನೆ.
ಅಭಿವೃದ್ಧಿ ಇಟ್ಟುಕೊಂಡು ಚುನಾವಣೆಗೆ ಹೋಗಿದ್ದೆ ನಾನು. ಇನ್ನೇನು ಮಾಡಬೇಕು ನಾನು? ಇಲ್ಲಿ ಹೊಗಳುವುದು ಟೀ ಅಂಗಡಿಲಿ ಉಗಿಯುವುದು. ನುಗು ಏತ ನೀರಾವರಿ ಯೋಜನೆ, ಬೆಳ್ಳಿ ರಥ ನಿರ್ಮಾಣ ಇತಿಹಾಸ , ನಾನು ಮಾಡಿರುವ ಕೆಲಸವನ್ನು ಈಗಿನ ಶಾಸಕರು ಮುಂದುವರಿಸಿ ಕೆಲಸ ಮುಗಿಸಲಿ. ನಾನು ಎಷ್ಟು ಅನುದಾನ ತಂದಿದ್ದೇನೆ ಅದಕ್ಕಿಂತ ಒಂದು ರೂಪಾಯಿ ಅನುದಾನ ಜಾಸ್ತಿ ತನ್ನಿ ನೋಡುತ್ತೇನೆ ಎಂದು ಹಾಲಿ ಶಾಸಕ ದರ್ಶನ್ ಧ್ರುವನಾರಾಯಣ್ ಗೆ ಸವಾಲು ಹಾಕಿದರು.
ಕಾಂಗ್ರೆಸ್ ನವರು ಸುಳ್ಳು ಗ್ಯಾರಂಟಿ ನೀಡಿದ್ದಾರೆ. ಕೆಎಸ್ಆರ್ಟಿಸಿ ಸಾರಿಗೆ ಬಸ್ ನಲ್ಲಿ ಉಚಿತ ಪ್ರಯಾಣದಿಂದ 3 ಸಾವಿರ ಕೋಟಿ ರೂ. ನಷ್ಟ ಆಗುತ್ತದೆ . ಐದು ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ನಂತರ ಜಾರಿಗೊಳಿಸುತ್ತೇವೆ ಎಂದವರು ಕಂಡಿಷನ್ಸ್ ಹಾಕುತ್ತಿದ್ದಾರೆ. ಗ್ಯಾರಂಟಿ ಮಾಡಿಸಲು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಒಂದೇ ತಿಂಗಳಲ್ಲಿ ಗ್ಯಾರೆಂಟಿ ಗಳ ಬಂಡವಾಳ ಗೊತ್ತಾಗುತ್ತೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಪಕ್ಷ ಸೋತಿದೆ, ಹರ್ಷವರ್ಧನ್ ಸೋತಿಲ್ಲ ಚುನಾವಣೆ ಗೆದ್ದು ಒಂದು ತಿಂಗಳಾಗಿಲ್ಲ, ಈಗಾಗಲೇ ಗಲಾಟೆ ಘರ್ಷಣೆಗಳು ಪ್ರಾರಂಭವಾಗಿವೆ. ಪಕ್ಷದ ಕಾರ್ಯಕರ್ತರು ಭಯ ಪಡುವ ಅಗತ್ಯವಿಲ್ಲ. ಇಲ್ಲಿಂದ ನಮ್ಮ ತಪ್ಪುಗಳನ್ನು ತಿದ್ದಿಕೊಂಡು ಮುಂದಿನ ಜಿಪಂ, ತಾಪಂ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳೋಣ.
ಪುಕ್ಸಟ್ಟೆ ಅಕ್ಕಿ, ಇಂದಿರಾ ಕ್ಯಾಂಟಿನ್ ನಲ್ಲಿ ಪುಕ್ಸಟ್ಟೆ ಅನ್ನ ಕೊಡ್ತಾರೆ ತಿಂದುಕೊಂಡು ಇರಿ. ತಾಪಂ ಮತ್ತು ಜಿಪಂ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸುತ್ತೇನೆ. ಪಕ್ಷವನ್ನು ಸಂಘಟನೆ ಮಾಡಿ ತಳಮಟ್ಟದಿಂದ ಕೆಲಸ ಮಾಡೋಣ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಕುಂಬ್ರಹಳ್ಳಿ ಸುಬ್ಬಣ್ಣ, ಬಿಜೆಪಿ ಪಕ್ಷದ ಅಧ್ಯಕ್ಷ ಮಹೇಶ್, ಮಾಜಿ ಜಿಪಂ ಸದಸ್ಯ ಚಿಕ್ಕರಂಗನಾಯಕ, ಮಾಜಿ ತಾಪಂ ಅಧ್ಯಕ್ಷ ಮಹದೇವಪ್ಪ, ನಗರಸಭಾ ಅಧ್ಯಕ್ಷ ಮಹದೇವಸ್ವಾಮಿ, ಉಪಾಧ್ಯಕ್ಷೆ ನಾಗಮಣಿ, ಬಿಜೆಪಿ ನಗರ ಅಧ್ಯಕ್ಷ ಶ್ರೀನಿವಾಸ ರೆಡ್ಡಿ ಸೇರಿದಂತೆ ಬಿಜೆಪಿ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.