ಉಡುಪಿ: ಅಧಿಕಾರದ ಅವಧಿ ಮುಗಿಯುತ್ತಾ ಬಂದಿರುವ ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದಲ್ಲಿ ಚುನಾವಣಾ ಸಂದರ್ಭದಲ್ಲಿ ನೀಡಿದ ಪೊಳ್ಳು ಭರವಸೆಯ ಗ್ಯಾರಂಟಿಯನ್ನು ಪೂರೈಸದೆ ಕೈ ಕೊಟ್ಟಿರುವ ಕಾಂಗ್ರೆಸ್ ಕರ್ನಾಟಕದಲ್ಲೂ ಅಧಿಕಾರದ ಹಗಲು ಕನಸಿನಿಂದ ನಕಲಿ ಗ್ಯಾರಂಟಿ ಕಾರ್ಡ್ ಹಂಚುತ್ತಾ ಜನರ ಕಿವಿಗೆ ಹೂ ಇಡಲು ಹೊರಟಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.
‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಸಬ್ಕಾ ವಿಶ್ವಾಸ್, ಸಬ್ಕಾ ಪ್ರಯಾಸ್’ ತತ್ವದಡಿಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರ ಚುನಾವಣಾ ಸಂದರ್ಭದಲ್ಲಿ ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸಿರುವ ಜೊತೆಗೆ ನೂರಾರು ವಿನೂತನ ಜನಪರ ಯೋಜನೆಗಳನ್ನು ಜಾರಿಗೆ ತಂದಿರುವುದು ಜಗಜ್ಜಾಹೀರಾಗಿದೆ. ಆಯುಷ್ಮಾನ್ ಭಾರತ್, ಕಿಸಾನ್ ಸಮ್ಮಾನ್, ಭಾಗ್ಯಲಕ್ಷ್ಮೀ, ಸಂಧ್ಯಾ ಸುರಕ್ಷಾ, ವಿದ್ಯಾಸಿರಿ, ಬೆಳಕು ಮುಂತಾದ ನೂರಾರು ಯೋಜನೆಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಜೀವನಮಟ್ಟ ಸುಧಾರಣೆಗೆ ವರದಾನವಾಗಿವೆ.
ಬಿಜೆಪಿ ದೇಶ ಹಿತ ಮತ್ತು ಜನ ಹಿತದ ಕೆಲಸ ಕಾರ್ಯಗಳಲ್ಲಿ ಮಗ್ನವಾಗಿರುವುದನ್ನು ಸಹಿಸದ ಕಾಂಗ್ರೆಸ್ ಪ್ರತಿಯೊಂದು ವಿಚಾರದಲ್ಲಿ ಮೂಗು ತೂರಿಸಿ ತನ್ನ ಸುಳ್ಳಿನ ಫ್ಯಾಕ್ಟರಿ ಮೂಲಕ ಅನಾವಶ್ಯಕ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ. ಪ್ರಜ್ಞಾವಂತ ಜನತೆ ಕಾಂಗ್ರೆಸ್ಸಿನ ಸುಳ್ಳು ಭರವಸೆಗಳ ನಕಲಿ ಗ್ಯಾರಂಟಿ ಕಾರ್ಡ್ ಹಾಗೂ ಅಪಪ್ರಚಾರದ ಬಗ್ಗೆ ಎಚ್ಚರವಹಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.
‘ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿಸಿದಂತೆ’ ಎಂಬಂತೆ ಇಷ್ಟು ದಿನ ತನ್ನನ್ನೇ ಮುಖ್ಯಮಂತ್ರಿ ಮಾಡಿ ಎಂದು ಗೋಗರೆಯುತ್ತಿದ್ದ ಡಿ.ಕೆ. ಶಿವಕುಮಾರ್ ಹಾಗೂ ಸಿದ್ಧರಾಮಯ್ಯನವರಿಗೆ ಈಗಾಗಲೇ ಕಾಂಗ್ರೆಸ್ಸಿನ ಹೀನಾಯ ಸೋಲಿನ ಸುಳಿವು ದೊರೆತಿರುವ ಕಾರಣಕ್ಕಾಗಿ ಸೋಲಿನ ಹೊಣೆ ಹೊರುವ ಸಲುವಾಗಿ ಖರ್ಗೆಯವರ ಹೆಸರನ್ನು ಸಿ.ಎಂ. ಸ್ಥಾನಕ್ಕೆ ಎಳೆದು ತರುತ್ತಿರುವುದು ಸ್ಪಷ್ಟವಾಗುತ್ತಿದೆ.
ರಾಜಸ್ಥಾನ, ಛತ್ತೀಸ್ಗಡ, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಅಧಿಕಾರದ ಅವಧಿ ಮುಗಿಯುತ್ತಾ ಬಂದರೂ ಕಾಂಗ್ರೆಸ್ ನೀಡಿರುವ ಬೋಗಸ್ ಗ್ಯಾರಂಟಿಗಳು ಮಾತ್ರ ಎಳ್ಳಷ್ಟೂ ಕಾರ್ಯಗತಗೊಳ್ಳಲಿಲ್ಲ ಎಂಬುದು ಸತ್ಯ. ಈ ಬಗ್ಗೆ ಸ್ವತಃ ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ರವರು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ರವರಿಗೆ ಪದೇ ಪದೇ ಬರೆದ ಪತ್ರವೂ ನಿಷ್ಪ್ರಯೋಜಕವಾಗಿರುವುದು ಜಗಜ್ಜಾಹೀರಾಗಿದೆ. ಕೇವಲ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ನಕಲಿ ಗಾಂಧಿ ಕುಟುಂಬದ ಉದ್ಧಾರದ ಗ್ಯಾರಂಟಿ ಹೊಂದಿರುವ ಮುಳುಗುತ್ತಿರುವ ಹಡಗು ಕಾಂಗ್ರೆಸ್ಸಿನ ಎಕ್ಸಫೈರಿ ಡೇಟ್ ನಿಕಟವಾಗುತ್ತಿರುವುದು ಮಾತ್ರ ನೈಜ ಗ್ಯಾರಂಟಿಯಾಗಿದೆ. ಪ್ರಬುದ್ಧ ಜನತೆ ಭ್ರಷ್ಟ ಕಾಂಗ್ರೆಸ್ಸಿನ ಗ್ಯಾರಂಟಿ ಕಾರ್ಡಿನ ಮೋಸ ಜಾಲಕ್ಕೆ ಬಲಿಯಾಗದೆ ದೇಶಹಿತ ಜನಹಿತದ ಸಹಿತ ಅಭಿವೃದ್ಧಿಯನ್ನೇ ಮೂಲಮಂತ್ರವನ್ನಾಗಿಸಿರುವ ಬಿಜೆಪಿಯನ್ನು ಬೆಂಬಲಿಸುವ ಮೂಲಕ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.