ಉಡುಪಿ: ಸಿದ್ದರಾಮಯ್ಯ ಹಾಗೂ ಡಿಕೆಶಿ ಒಬ್ಬರಿಗೊಬ್ಬರು ಕಿವಿಗೆ ಹೂ ಇಟ್ಟುಕೊಳ್ಳುವ ಮೂಲಕ ಕಾಂಗ್ರೆಸ್ಸನ್ನು ನಾಶ ಮಾಡಲು ಹೊರಟಿದ್ದಾರೆ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ವ್ಯಂಗ್ಯವಾಡಿದರು.
ಸಿದ್ದರಾಮಯ್ಯ, ಡಿಕೆಶಿ ಕಿವಿಗೆ ಹೂವಿಟ್ಟು ಸದನಕ್ಕೆ ಹೋದ ವಿಚಾರಕ್ಕೆ ಸಂಬಂಧಿಸಿ ಉಡುಪಿಯಲ್ಲಿಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಇಬ್ಬರು ನಾಯಕರು ಹಿಂದೆಯೇ ಕರ್ನಾಟಕದ ಜನತೆಯ ಕಿವಿಗೆ ಹೂವು ಇಟ್ಟಾಗಿದೆ. ಮುಂದಿನ ಚುನಾವಣೆಯಲ್ಲಿ ಇಡೀ ಕರ್ನಾಟಕದ ಜನತೆಯ ಕಿವಿಗೆ ಹೂವು ಇಡುತ್ತಾರೆ. ರಾಜ್ಯದ ಜನ ಪ್ರಬುದ್ಧರಾಗಿದ್ದಾರೆ- ಬಿಜೆಪಿಯನ್ನು ಬೆಂಬಲಿಸುತ್ತಾರೆ. ಕಾಂಗ್ರೆಸ್ ನ ಇಬ್ಬರು ಹಿರಿಯ ನಾಯಕರಿಗೆ ಇದು ಶೋಭೆ ತರುವುದಿಲ್ಲ. ಸದನದ ಗೌರವವನ್ನು ಇಬ್ಬರು ನಾಯಕರು ಕಾಪಾಡಬೇಕಿತ್ತು ಎಂದರು.