ಕುಂದಾಪುರ: ಮೀಸಲು ಅರಣ್ಯ ಪ್ರದೇಶದ ಸುತ್ತ 10 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಾ ಮಿಲ್ ಗಳನ್ನೂ ಸ್ಥಾಪಿಸಬಾರದೆಂಬ ಸುಪ್ರೀಂ ಕೋರ್ಟ್ನ ಸೂಚನೆ ಇದ್ದಾಗ್ಯೂ ಕರ್ನಾಟಕ ಸರ್ಕಾರ ಹಾಗೂ ಅರಣ್ಯ ಇಲಾಖೆ ಮರದ ಕಾರ್ಖಾನೆ ( ಸಾ ಮಿಲ್) ಸ್ಥಾಪನೆಗೆ ಮುಂದಾಗಿದ್ದು, ಸರ್ಕಾರದ ಈ ನಡೆಯನ್ನು ಪ್ರಶ್ನಿಸಿ, ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಉಚ್ಛ ನ್ಯಾಯಾಲಯ ಸರ್ಕಾರ ಹಾಗೂ ಅರಣ್ಯ ಇಲಾಖೆಯ ಈ ಕ್ರಮವನ್ನು ತರಾಟೆಗೆ ತೆಗೆದುಕೊಂಡಿದೆ.
ಕುಂದಾಪುರದ ವಿಶ್ವನಾಥ ಎಚ್ ಅವರು, ನ್ಯಾಯವಾದಿ ಆಕಾಶ್ ಬಿ ಶೆಟ್ಟಿ ಅವರ ಮೂಲಕ 2013 ರ ಮೇ.20 ರಂದು ಅರಣ್ಯ ಕಾಯಿದೆ 1969 ರ ನಿಯಮ 163 ಕ್ಕೆ ತಿದ್ದುಪಡಿ ತಂದು ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಯನ್ನು ರದ್ದು ಪಡಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಲೆ ಹಾಗೂ ನ್ಯಾಯಮೂರ್ತಿ ಅಶೋಕ ಕಿನ್ನಿಗಿ ಅವರಿದ್ದ ವಿಭಾಗೀಯ ಪೀಠ, ಜ.5 ರಂದು ನೀಡಿದ ಆದೇಶದಲ್ಲಿ ಮುಂದಿನ ನಾಲ್ಕು ವಾರಗಳ ಒಳಗೆ ಆಕ್ಷೇಪಣೆ ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರಾದ ಆಕಾಶ್ ಬಿ ಶೆಟ್ಟಿ ರವರು ಅರಣ್ಯ ಕಾಯ್ದೆ 1969 ಕ್ಕೆ ತಿದ್ದುಪಡಿ ತರುವ ಮುನ್ನ ಎರಡು ಸದನದಲ್ಲಿ ಅನುಮತಿ ಪಡೆಯಲಾಗಿಲ್ಲ ಎಂಬ ಅಂಶವನ್ನು ಹೈಕೋರ್ಟ್ ಗಮನಕ್ಕೆ ತಂದರು. ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಈ ಕುರಿತು ಸ್ವಷ್ಟನೆ ನೀಡುವಂತೆ ಸರ್ಕಾರಕ್ಕೆ ಸೂಚಿಸಿದೆ.
ಏನಿದು ಆರ್ಜಿ ?
ಯಾವುದೆ ಮರದ ಕಾರ್ಖಾನೆ ( ಸಾ ಮಿಲ್ ) ಆರಂಭಕ್ಕೆ ಮುನ್ನ ಅನುಮತಿ ನೀಡಬೇಕಾದರೆ ಕೇಂದ್ರ ಸರ್ಕಾರದ ಅನುಮತಿ ಅಗತ್ಯ ಎಂದು ಈ ಹಿಂದೆ ಸರ್ವೋಚ್ಛ ನ್ಯಾಯಾಲಯ ಹೇಳಿತ್ತು. ಜತೆಗೆ ಮೀಸಲು ಅರಣ್ಯ ಪ್ರದೇಶದ ಸುತ್ತ 10 ಕಿ.ಮೀ ವ್ಯಾಪ್ತಿಯಲ್ಲಿ ಮಿಲ್ ಸ್ಥಾಪನೆ ಕೂಡದು ಎಂದು ಸೂಚನೆ ನೀಡಿತ್ತು. ರಾಜ್ಯ ಸರ್ಕಾರ ತಿದ್ದುಪಡಿ ಮಾಡಿದ ಪ್ರಕಾರ ಮಿಲ್ ಸ್ಥಾಪನೆಗೆ ಕೇಂದ್ರ ಸರ್ಕಾರದ ಅನುಮತಿ ಅಗತ್ಯವಿಲ್ಲ, ಅಲ್ಲದೆ ಮಿಸಲು ಅರಣ್ಯ ಪ್ರದೇಶದ ಸುತ್ತ-ಮುತ್ತಲು ಅನುಮತಿ ನೀಡಲು ಮುಂದಾಗಿದೆ, ಇದರಿಂದ ಅರಣ್ಯ ಪ್ರದೇಶದ ಬೆಲೆ ಬಾಳುವ ಮರಗಳ ಕಳ್ಳಸಾಗಣಿಕೆಗೆ ಅನುಕೂಲವಾಗುತ್ತದೆ. ಅರಣ್ಯ ಪರಿಸರ, ಪ್ರಾಣಿ ಸಂಕುಲಗಳ ಮೇಲೆ ವ್ಯತಿರಿಕ್ತ ಪರಿಣಾಮಕ್ಕೆ ಕಾರಣವಾಗುತ್ತದೆ ಎನ್ನುವುದು ಅರ್ಜಿದಾರರ ವಾದವಾಗಿದೆ.
ಸರ್ವೋಚ್ಚ ನ್ಯಾಯಾಲಯದ ಸೂಚನೆಯನ್ನು ಮೀರಿ ಮೀಸಲು ಅರಣ್ಯ ಪ್ರದೇಶದ ಸುತ್ತ 10 ಕಿ.ಮೀ ವ್ಯಾಪ್ತಿಯಲ್ಲಿ, ಮುನ್ಸಿಪಲ್ ಹಾಗೂ ಕೈಗಾರಿಕಾ ಪ್ರದೇಶದಲ್ಲಿ ಮರದ ಕಾರ್ಖಾನೆ ( ಸಾ ಮಿಲ್ ) ಸ್ಥಾಪಿಸಲು ಅನುಮತಿ ನೀಡುತ್ತಿರುವುದರಿಂದ ಅನಗತ್ಯ ಗೊಂದಲಗಳುಂಟಾಗುತ್ತಿದ್ದು, 2013 ರ ಮೇ.20 ರಂದು ಅರಣ್ಯ ಕಾಯಿದೆ 1969 ರ ನಿಯಮ 163 ಕ್ಕೆ ತಿದ್ದುಪಡಿಗೆ ಮಧ್ಯಂತರ ತಡೆಯಾಜ್ಞೆ ನೀಡಬೇಕು ಹಾಗೂ ಕಾಯಿದೆ ತಿದ್ದುಪಡಿಯನ್ನು ರದ್ದು ಪಡಿಸುವಂತೆ ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದರು.