ಕಾರ್ಕಳ: ಕಾರ್ಕಳ ವಿಧಾನಸಭಾ ಕ್ಷೇತ್ರದ ಮತದಾನವು ಪೂರ್ಣ ಗರಿಷ್ಠ ಹಾಗೂ ಶಾಂತಿಯುತ ಮತದಾನಕ್ಕೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಅದಕ್ಕಾಗಿ ೨೩ ಸೆಕ್ಟರ್ಗಳನ್ನು ರೂಪಿಸಲಾಗಿದೆ. ಸಹಾಯ ಚುನಾವಣಾಧಿಕಾರಿಯಾಗಿ ಇಬ್ಬರನ್ನು ನಿಯೋಜಿಸಲಾಗಿದೆ. ನೋಡಲ್ ಅಧಿಕಾರಿಗಳಾಗಿ ಇಬ್ಬರನ್ನು ನಿಯೋಜಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಅಧಿಕಾರಿ ಮುಂದಾಗಲಿದ್ದಾರೆ. ೧೫ ಮತಗಟ್ಟೆಗಳಿಗೆ ಸೆಕ್ಟರ್ ಅಧಿಕಾರಿ ಇರುತ್ತಾರೆ. ಇವರೆಲ್ಲರ ಮೇಲ್ವಿಚಾರಣೆಯಲ್ಲಿ ಚುನಾವಣೆಯ ತಯಾರಿ ನಡೆಯಲಿದೆ ಎಂದು ಕಾರ್ಕಳ ವಿಧಾನ ಸಭಾ ಚುನಾವಣಾಧಿಕಾರಿ ಮದನ್ ಮೋಹನ್ ತಿಳಿಸಿದರು.
ಕಾರ್ಕಳ ತಹಶೀಲ್ದಾರ್ ಕಚೇರಿಯಲ್ಲಿ ಆಯೋಜಿಸಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ದಿನದ ೨೪ ಗಂಟೆ ಕಾರ್ಯ ನಿರ್ವಹಿಸುವ ಸಂಚಾರಿ ದಳವು ಕ್ಷೇತ್ರ ವ್ಯಾಪ್ತಿಯಲ್ಲಿ ತಿರುಗಾಡಲಿದೆ. ಒಂದು ತಂಡದಲ್ಲಿ ಮೂವರಂತೆ ಒಟ್ಟು ಒಂಭತ್ತು ಮಂದಿ ಕಾರ್ಯನಿರ್ವಹಿಸಲಿದ್ದಾರೆ. ಕ್ಷೇತ್ರದ ಸಾಣೂರು, ಮುಂಡ್ಕೂರು ಸಂಕಲಕರಿಯ, ಈದು. ಮಾಳ, ನಾಡ್ಪಾಲುನಲ್ಲಿ ಚೆಕ್ಪೋಸ್ಟ್ ಅಳವಡಿಸಲಾಗಿದೆ. ಮತಗಟ್ಟೆ ಬರಲು ಅಶಕ್ತರಾದ ಹಿರಿಯ ನಾಗರಿಕರಿಗೆ, ಅನಾರೋಗ್ಯ ಪೀಡಿತರಿಗೆ, ವಿಕಲಚೇತನರಿಗೆ ಅಂಚೆ ಮತದಾನ ಮಾಡಲು ಅವಕಾಶ ಒದಗಿಸಲಾಗಿದೆ. ಈಗಾಗಲೇ ಅಂತವರನ್ನು ಬೂತ ಮಟ್ಟದ ಅಧಿಕಾರಿಗಳು ಸಂಪರ್ಕಿಸುತ್ತಿದ್ದಾರೆ.
ಈ ಹಿಂದೆ ೨೭ ಮತಗಟ್ಟೆಗಳು ನಕ್ಸಲ್ ಪೀಡಿತ ಪ್ರದೇಶ ಗುರುತಿಸಲಾಗಿತ್ತು. ಪ್ರಸಕ್ತ ಕಾಲಘಟ್ಟದಲ್ಲಿ ೨ ರೀತಿಯ ಮತಗಟ್ಟೆಗಳನ್ನು ಮಾತ್ರ ಗುರುತಿಸಲಾಗುತ್ತಿದೆ. ಮತದಾನಕ್ಕೆ ಪ್ರಭಾವ ಹಾಗೂ ವಿರೋಧ ವ್ಯಕ್ತಪಡಿಸುವ ಪ್ರದೇಶಗಳನ್ನು ಗುರುತಿಸಲಾಗುತ್ತಿದೆ. ಚುನಾವಣಾ ಸಂದರ್ಭದಲ್ಲಿ ಚುನಾವಣಾ ವೀಕ್ಷಕರ ಭೇಟಿ ನೀಡಿ ಅಗತ್ಯ ಮಾಹಿತಿಯನ್ನು ಕ್ರೋಢೀಕರಿಸಲಿದ್ದಾರೆ ಎಂದರು.
ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು ೧೮೮೩೭೬ ಮತದಾರರು ಇದ್ದಾರೆ. ಅವರಲ್ಲಿ ೯೦೩೪೭ ಗಂಡು, ೯೮೦೨೮ ಹೆಣ್ಣು ಒಳಗೊಂಡಿದ್ದಾರೆ.
ಕಾರ್ಕಳ ತಹಶೀಲ್ದಾರ್ ಅನಂತಶಂಕರ್.ಬಿ., ಹೆಬ್ರಿ ತಹಶೀಲ್ದಾರ್ ಪುರಂದರ, ಕಾರ್ಕಳ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಪುರಂದರ, ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಮೊದಲಾದವರು ಉಪಸ್ಥಿತರಿದ್ದರು.