ಕಾರ್ಕಳ: ಕಲ್ಯಾ ಗ್ರಾಮದ ಉಷಾ ಜಗದೀಶ್ ಅಂಚನ್ ಎಂಬವರ ಮನೆಯ ಬಾಗಿಲು ಮುರಿದು ಗೋದ್ರೇಜ್ನಲ್ಲಿದ್ದ 9.75 ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಮಹಿಳೆ ಸಹಿತ ಇಬ್ಬರು ಆರೋಪಿಗಳನ್ನು ಕಾರ್ಕಳ ಗ್ರಾಮಾಂತರ ಠಾಣೆಯ ಪೊಲೀಸರು ಇಂದು ಬಂಧಿಸಿದ್ದಾರೆ.
ಬಂಟ್ವಾಳದ ಕಾಂತರಬೆಟ್ಟು ನಿವಾಸಿ 34ವರ್ಷದ ಪ್ರಸಾದ್ ಯಾನೆ ಪಚ್ಚು ಹಾಗೂ ಕಾರ್ಕಳ ಕಲ್ಯಾ ಗ್ರಾಮದ ನಿವಾಸಿ 39ವರ್ಷದ ಶಿಬಾ ಬಂಧಿತ ಆರೋಪಿಗಳು. ಆರೋಪಿ ಪ್ರಸಾದ್ ಎಂಬಾತನು ಎರಡನೇ ಆರೋಪಿ ಶಿಬಾ ಎಂಬಾಕೆ ನೀಡಿದ ಮಾಹಿತಿಯಂತೆ ಡಿ.3ರಂದು ರಾತ್ರಿ ಕಲ್ಯಾ ಗ್ರಾಮದ ಉಷಾ ಜಗದೀಶ್ ಅಂಚನ್ ಎಂಬವರ ಮನೆಯ ಬಾಗಿಲು ಮುರಿದು ಒಳನುಗ್ಗಿ, ಗೋದ್ರೇಜ್ನಲ್ಲಿದ್ದ 9.75 ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದನು.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಗೆ ಇಳಿದ ಪೊಲೀಸರು ಇಂದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 9.75 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.