ಕಾರ್ಕಳ: ರಾಷ್ಟ್ರಮಟ್ಟದಲ್ಲಿ ಬಿಜೆಪಿಯೂ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಹೊಸ ಪ್ರಯೋಗವನ್ನು ಕರ್ನಾಟದಲ್ಲಿ ನಡೆಸಿದೆ. ಅದು ಯಶಸ್ಸು ಪಡೆಯಲಿದೆ. ಕಾರ್ಯಕರ್ತರು, ಪದಾಧಿಕಾರಿ ಹಾಗೂ ಚುನಾವಣಾ ಸಮಿತಿ ನಡೆಸಿದ ಅಭಿಪ್ರಾಯ ಕ್ರೋಡೀಕರಣದಿಂದಾಗಿ ಅಭ್ಯರ್ಥಿಗಳ ಆಯ್ಕೆ ನಡೆದಿದೆ. ಇದು ಪಾರದರ್ಶಕವಾಗಿದ್ದು, ರಾಜಕೀಯ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಬಿಜೆಪಿ ಈ ಪ್ರಯೋಗ ನಡೆಸಿದೆ ಎಂದು ಕಾರ್ಕಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸುನೀಲ್ ಕುಮಾರ್ ಹೇಳಿದರು.
ವಿಕಾಸ ಕಚೇರಿಯಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಸ್ವಚ್ಛ ಕಾರ್ಕಳ, ಸ್ವರ್ಣ ಕಾರ್ಕಳ ಪರಿಕಲ್ಪನೆಯಡಿ ಕಾರ್ಕಳವನ್ನು ಸರ್ವತೋಮುಖ ಅಭಿವೃದ್ಧಿ ಪಡಿಸುವ ಪ್ರಯತ್ವಗಳು ಶಾಸಕ ಅವಧಿಯಲ್ಲಿ ನಡೆಸಿದ್ದೇನೆ. ಅದನ್ನು ಇನ್ನಷ್ಟು ಯಶಸ್ಸು ಗೊಳಿಸಲು ಕ್ಷೇತ್ರದ ಮತದಾರರ ಸಹಕಾರವು ಅಗತ್ಯವಾಗಿದೆ ಎಂದರು.
ಬಿಜೆಪಿ ಸರಕಾರವು ಡಬ್ಬಲ್ ಇಂಜಿನ್ ಸರಕಾರವಾಗಿದೆ. ಇದು ಅಭಿವೃದ್ಧಿಗೆ ಪೂರಕವಾಗಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಇರುವ ಹಾಗೆ ಕಾರ್ಕಳದಲ್ಲಿ ಕೂಡಾ ಬಿಜೆಪಿ ಶಾಸಕರೇ ಇದ್ದಾಗ ಅದೊಂದು ಅಭಿವೃದ್ಧಿಗೆ ಕೊಂಡಿಯಾಗಿ ಕಾರ್ಯನಿರ್ವಹಿಸಲು ಅವಕಾಶವಿದೆ. ಅದೇ ಕಾರಣದಿಂದ ಕಾರ್ಕಳದಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಬೆಂಬಲಿಸುವಂತೆ ಅವರು ಕರೆ ನೀಡಿದರು.
ಏಪ್ರಿಲ್ ೧೯ರಂದು ನಾಮಪತ್ರ ಸಲ್ಲಿಕೆ: ಏಪ್ರಿಲ್ ೧೯ರಂದು ಕಾರ್ಕಳದಲ್ಲಿ ಮತ್ತೊಂದು ಇತಿಹಾಸ ಬರೆಯಲಿದೆ. ಅಂದು ಬೆಳಿಗ್ಗೆ ೯.೩೦ಕ್ಕೆ ನಗರದ ಸ್ವರಾಜ್ ಮೈದಾನದಿಂದ ಪ್ರಮುಖ ರಸ್ತೆಯಾಗಿ ಕುಕ್ಕುಂದೂರು ಮೈದಾನದ ವರೆಗೆ ಬೃಹತ್ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆಯಲ್ಲಿ ಸಾರ್ವಜನಿಕರು, ಕಾರ್ಯಕರ್ತರು ನನ್ನೊಂದಿಗೆ ಹೆಜ್ಜೆ ಹಾಕಿ ನನಗೆ ಶಕ್ತಿ ತುಂಬ ಬೇಕು ಎಂದು ಇದೇ ಸಂದರ್ಭದಲ್ಲಿ ವಿನಂತಿಸಿದರು.
ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯೂ ಪಾರರದರ್ಶಕವಾಗಿ ನಡೆದಿದೆ. ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆಯಲ್ಲಿ ಹೆಸರಿಲ್ಲ ಎಂಬ ಒಂದೇ ಕಾರಣಕ್ಕಾಗಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬಾರದು, ಪಕ್ಷ ತೊರೆಯಬಾರದು. ಪಕ್ಷವು ಆರ್ಹ ಅಭ್ಯರ್ಥಿಗಳನ್ನು ಗುರುತಿಸಿ ಕಣಕ್ಕೆ ಇಳಿಸಿ ಯಶಸ್ಸು ಕಂಡಿದೆ. ಹೊಸ ಪ್ರಯೋಗಗಳು ಪ್ರತಿಯೊಂದು ಚುನಾವಣೆಯಲ್ಲಿ ನಡೆಯುತ್ತಾ ಬಂದಿದ್ದು, ಮುಂದೆಯೂ ನಡೆಯಲಿದೆ. ಯುವ ಸಮುದಾಯಕ್ಕೆ ಹೆಚ್ಚಿನ ರೀತಿಯಲ್ಲಿ ಒತ್ತು ನೀಡಿದೆ ಎಂದರು.
ಕಾರ್ಕಳದಲ್ಲಿ ನೇರ ಸ್ವರ್ಧೆ: ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಸ್ವರ್ಧೆ ನಡೆಯಲಿದೆ. ಮತದಾರರು ಅಭಿವೃದ್ಧಿಯನ್ನು ಗುರುತಿಸಿ ಗೌರವಿಸುತ್ತಾರೆ. ಸಂಕಷ್ಟದ ಕಾಲದಲ್ಲಿ ಜನತೆಯ ಸುಖ ಕಷ್ಟಗಳಿಗೆ ಸ್ಪಂದಿಸಿದ್ದೇನೆ. ಅದಕ್ಕೆ ಕಾರ್ಯಕರ್ತರ ಸಹಕಾರ ಇತ್ತೆಂಬುದನ್ನು ಇಲ್ಲಿ ಉಲ್ಲೇಖಿಸಿದರು.
ಸಾವಿರ ಸುಳ್ಳು ಒಂದು ಸತ್ಯವನ್ನಾಗಿಸುತ್ತದೆ: ಸಾವಿರ ಸುಳ್ಳು ಒಂದು ಸತ್ಯವನ್ನಾಗಿ ಮಾಡುತ್ತದೆ. ಕಳೆದ ಒಂದೂವರೆ ತಿಂಗಳ ಹಿಂದೆ ಕಾರ್ಕಳಕ್ಕೆ ಬಂದವರು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಅಪಪ್ರಚಾರದಲ್ಲಿ ತೊಡಗಿಸಿಕೊಳ್ಳುವವರಿಗೆ ಮತದಾರರೇ ತಕ್ಕ ಉತ್ತರ ನೀಡಲಿದ್ದಾರೆ ಎಂದರು.