ಕಾರ್ಕಳ: ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಬಿ ಸುನಿಲ್ ಕುಮಾರ್ ಅವರ ಚುನಾವಣಾ ಕಚೇರಿ ಕಾರ್ಕಳದ ವಿಕಾಸ ಜನಸೇವಾ ಕಚೇರಿಯ ಮೊದಲನೇ ಮಹಡಿಯಲ್ಲಿ ಏಪ್ರಿಲ್ 13 ಗುರುವಾರದಂದು ಬೆಳಿಗ್ಗೆ 9:30 ಗಂಟೆಗೆ ಉದ್ಘಾಟನೆಗೊಂಡಿತು.
ದೀಪ ಪ್ರಜ್ವಲನದ ಮೂಲಕ ಬಿಜೆಪಿ ಚುನಾವಣಾ ಕಚೇರಿಯನ್ನು ಉದ್ಘಾಟಿಸಿದ ಕಾರ್ಕಳ ಬಿಜೆಪಿಯ ಹಿರಿಯ ಮುಖಂಡರಾದ ಬೋಳ ಪ್ರಭಾಕರ್ ಕಾಮತ್ ರವರು ಮಾತನಾಡುತ್ತಾ, ವಿ. ಸುನಿಲ್ ಕುಮಾರ್ ಅವರು ಅಭ್ಯರ್ಥಿಯಾಗಿ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಐದನೇ ಚುನಾವಣೆಯನ್ನು ಎದುರಿಸುತ್ತಿದ್ದು, ರಾಜ್ಯದಲ್ಲಿಯೇ ದಾಖಲೆ ಮತಗಳ ಅಂತರದಿಂದ ಗೆಲುವನ್ನು ಸಾಧಿಸಲಿದ್ದಾರೆ ಎಂದು ಶುಭ ಹಾರೈಸಿದರು.
ಕಾರ್ಕಳದ ಖ್ಯಾತ ನ್ಯಾಯವಾದಿ ಹಾಗೂ ಹಿರಿಯ ಬಿಜೆಪಿ ಮುಖಂಡರಾದ ಎಂ.ಕೆ ವಿಜಯ್ ಕುಮಾರ್ ಮಾತನಾಡುತ್ತಾ, ವಿ ಸುನಿಲ್ ಕುಮಾರ್ ನೇತೃತ್ವದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳು ರಾಜ್ಯಕ್ಕೆ ಮಾದರಿಯಾಗಿದ್ದು,ಕಾರ್ಯಕರ್ತರು ಪರಿಶ್ರಮ ಮತ್ತು ಒಗ್ಗಟ್ಟಿನ ಸಾಧನೆಯ ಮೂಲಕ ಕಳೆದ ಸಾಲಿಗಿಂತಲೂ ದುಪ್ಪಟ್ಟು 84000 ಮತಗಳ ಕನಿಷ್ಠ ಅಂತರದಿಂದ ಗೆಲುವನ್ನು ಸಾಧಿಸಲು ಶ್ರಮಿಸಬೇಕೆಂದು ಕರೆ ನೀಡಿದರು.
ಬಿಜೆಪಿಯ ಹಿರಿಯ ಕಾರ್ಯಕರ್ತರುಗಳಾದ ವಿಜೇಂದ್ರ ಕಿಣಿ ಮತ್ತು ರಾಮಚಂದ್ರ ನಾಯಕ ಮಾತನಾಡಿ ಶುಭ ಹಾರೈಸಿದರು.
ವಿ .ಸುನಿಲ್ ಕುಮಾರ್ ರವರು ಕಾರ್ಕಳ ಬಿಜೆಪಿ ಅಧ್ಯಕ್ಷರಾದ ಮಹಾವೀರ ಹೆಗಡೆಯವರ ಮೊಬೈಲ್ ಹಿಂಭಾಗಕ್ಕೆ ಬಿಜೆಪಿ ಚುನಾವಣಾ ಪ್ರಚಾರದ ಸ್ಟಿಕರ್ ” ಕಾರ್ಕಳ ನಮ್ಮ ಹೆಮ್ಮೆ. ಸುನಿಲ್ ಕುಮಾರ್ ಮತ್ತೊಮ್ಮೆ. ಬಿಜೆಪಿ ಬೆಂಬಲಿಸಿ ” ಅಂಟಿಸುವುದರ ಮೂಲಕ ಚುನಾವಣಾ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದರು.
ಸಾಣೂರು ನರಸಿಂಹ ಕಾಮತ್ ಕಾರ್ಯಕ್ರಮ ನಿರೂಪಿಸಿ, ರವೀಂದ್ರ ಮಡಿವಾಳರವರು ಧನ್ಯವಾದ ಸಮರ್ಪಣೆ ಮಾಡಿದರು. ಕಾರ್ಕಳ ಬಿಜೆಪಿ ಕ್ಷೇತ್ರದ ಮಹಾವೀರ ಹೆಗಡೆಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಕಳ ಬಿಜೆಪಿ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.