ಉಡುಪಿ: 2047ರ ವೇಳೆಗೆ ಭಾರತ ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪವಾಗಿದ್ದು, ಇದಕ್ಕೆ ವಿದ್ಯಾರ್ಥಿಗಳ, ಯುವಜನತೆಯ ಪರಿಶ್ರಮ, ಕೊಡುಗೆ ಅಪಾರ ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಉಡುಪಿ ಪಿಪಿಸಿ ಆಡಿಟೋರಿಂನಲ್ಲಿ ಹಮ್ಮಿಕೊಳ್ಳಲಾದ ವಿಶೇಷ ಛಾಯಾ ಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ಕಳೆದ 9 ವರ್ಷಗಳ ಕೇಂದ್ರದ ಆಡಳಿತದಲ್ಲಿ ಅನೇಕ ಬದಲಾವಣೆಗಳನ್ನು ತರಲಾಗಿದೆ. ಪ್ರಧಾನಿ ಮೋದಿಯವರು ಕೃಷಿಗೆ ಸಂಬಂಧಿಸಿ, ಕೈಗಾರಿಕೆ ಹೀಗೆ ಅನೇಕ ಇಲಾಖೆಗಳ ಸಭೆ ಮಾಡ್ತಾರೆ. ಆದ್ರೆ ಎಲ್ಲಿಯೂ ಅವರು ರಾಜಕೀಯದ ಬಗ್ಗೆ ಮಾತನಾಡದೆ 2047ರ ಹೊತ್ತಿಗೆ ಕೃಷಿ ಕ್ಷೇತ್ರ ಯಾವ ಹೊಸ್ತಿಲಲ್ಲಿ ಇರಬೇಕು ಎನ್ನುವುದರ ಬಗ್ಗೆ ಯೋಚನೆ, ಯೋಜನೆ ಬಗ್ಗೆ ಮಾತನಾಡುತ್ತಾರೆ. ಇಂತಹ ಪ್ರಧಾನಿ ಸಿಕ್ಕ ಭಾರತೀಯರೇ ಧನ್ಯರು. 2047ರ ಹೊತ್ತಿಗೆ ಭಾರತ ಸೂಪರ್ ಪವರ್ ಆಗಬೇಕು ಎಂದು ಪ್ರದಾನಿ ಮೋದಿಯವರು ಸಂಕಲ್ಪ ಮಾಡಿ ಮುಂದಡಿ ಇಡುತ್ತಿದ್ದಾರೆ . ಇವರ ಈ ಸಂಕಲ್ಪಕ್ಕೆ ನೀವೂ ಸಹ ಕೈ ಜೋಡಿಸಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಪಿಪಿಸಿ ಕಾಲೇಜಿನ ಪ್ರಾಂಶುಪಾಲ ಡಾ. ರಾಘವೇಂದ್ರ ಎ, ಕೇಂದ್ರ ಸಂವಹನ ಇಲಾಖೆ ಇದರ ಕ್ಷೇತ್ರ ಪ್ರಚಾರ ಅಧಿಕಾರಿ ಜಿ. ತುಕಾರಾಮ ಗೌಡ ಉಪಸ್ಥಿತರಿದ್ದರು.