ಉಡುಪಿ: ಕರಾವಳಿ ಪ್ರದೇಶದ ಸಾಂಪ್ರದಾಯಿಕ ನಾಡದೋಣಿ ಮೀನುಗಾರರಿಗೆ ಕೇಂದ್ರದಿಂದ ಹೆಚ್ಚುವರಿ 2500ಕೆಎಲ್ (25 ಲಕ್ಷ ಲೀಟರ್) ಸೀಮೆ ಎಣ್ಣೆ ಬಿಡುಗಡೆಯಾಗಿದೆ ಎಂದು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2022-23 ಸಾಲಿನಲ್ಲಿ ಕೇಂದ್ರ ಸರ್ಕಾರದ ಪೆಟ್ರೋಲಿಯಂ ಸಚಿವಾಲಯ ಕರ್ನಾಟಕ ರಾಜ್ಯದ ಕರಾವಳಿ ಪ್ರದೇಶದ ಸಾಂಪ್ರದಾಯಿಕ ನಾಡದೋಣಿ ಮಿನುಗಾರರಿಗೆ ಒಟ್ಟು 5472 ಕೆ.ಎಲ್. ಸೀಮೆ ಎಣ್ಣೆಯನ್ನು ಹಂಚಿಕೆ ಮಾಡಿತ್ತು. ಅದರಂತೆ ಹಂತಹಂತವಾಗಿ ರಾಜ್ಯದ ಮೀನುಗಾರರ ಸೌಲಭ್ಯಕ್ಕಾಗಿ 2472KL + 3000KL ಸೀಮೆ ಎಣ್ಣೆಯನ್ನು ಬಿಡುಗೊಡೆಗೊಳಿಸಿತ್ತು. ಇಂದು ಪೆಟ್ರೋಲಿಯಂ ಸಚಿವಾಲಯ ಹೆಚ್ಚುವರಿಯಾಗಿ 2500 ಕೆ.ಎಲ್. ಸೀಮೆ ಎಣ್ಣೆಯನ್ನು ಕರಾವಳಿ ಪ್ರದೇಶದ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸೌಲಭ್ಯಕ್ಕಾಗಿ ಬಿಡುಗಡೆಗೊಳಿಸಿ ಆದೇಶ ಮಾಡಿದೆ ಎಂದು ಅವರು ತಿಳಿಸಿದರು.
ಕೇಂದ್ರ ಸರ್ಕಾರ 2022-23ರ ಸಾಲಿನ ಅವಧಿಯ ಹಂಚಿಕೆಗಿಂತಲೂ ಹೆಚ್ಚಿನ ಪ್ರಮಾಣದ ಸೀಮೆ ಎಣ್ಣೆಯನ್ನು ರಾಜ್ಯದ ಮೀನುಗಾರರಿಗೆ ಬಿಡುಗಡೆಗೊಳಿಸಿದೆ. ಒಟ್ಟಾರೆಯಾಗಿ 7972 ಕೆ.ಎಲ್. (5472 ಕೆ.ಎಲ್.+2500ಕೆ.ಎಲ್.) ಸೀಮೆ ಎಣ್ಣೆ ಹಂಚಿಕೆಯನ್ನು 2022-23ನೆ ಸಾಲಿನಲ್ಲಿ ರಾಜ್ಯದ ಕರಾವಳಿ ಮೀನುಗಾರರು ಕೇಂದ್ರದಿಂದ ಪಡೆದುಕೊಂಡಿದ್ದಾರೆ.
ಕರಾವಳಿ ಪ್ರದೇಶದ ಮೀನುಗಾರರ ಅಗತ್ಯಕ್ಕೆ ತಕ್ಕಂತೆ ಕೇಂದ್ರ ಸರ್ಕಾರ ಸ್ಪಂದನೆಯನ್ನು ನೀಡಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಪೆಟ್ರೋಲಿಯಂ ಸಚಿವರಲ್ಲಿ ಮನವಿಯಲ್ಲಿ ಮಾಡಲಾಗಿತ್ತು. ಕರಾವಳಿ ಪ್ರದೇಶದ ಜೀವನಾಧಾರ ಮೀನುಗಾರಿಕೆ.
ಮೀನುಗಾರಿಕೆಯನ್ನೆ ಬಹುಪಾಲು ಜನರು ನಂಬಿಕೊಂಡು ಜೀವನ ಮಾಡುತ್ತಿದ್ದಾರೆ. ಆದ್ದರಿಂದ ಕರಾವಳಿ ಪ್ರದೇಶದ ಸಾಂಪ್ರದಾಯಿಕ ಮೀನುಗಾರರ ಮನವಿಯನ್ನು ಪರಿಗಣಿಸಬೇಕೆಂದು ಒತ್ತಾಯಪೂರ್ವಕವಾಗಿ ಶೋಭಾ ಕರಂದ್ಲಾಜೆಯವರು ಮನವಿ ಮಾಡಿದ್ದರು. ಅದರಂತೆ ಕೇಂದ್ರದ ಪೆಟ್ರೋಲಿಯಂ ಸಚಿವರಾದ ಹರದೀಪ ಸಿಂಗ್ ಪುರಿಯವರು ಮನವಿಗೆ ಸ್ಪಂದಿಸಿ, ಮೀನುಗಾರರ ಬೇಡಿಕೆಯನ್ನು ಈಡೇರಿಸಿದ್ದಾರೆ.