ಉಡುಪಿ: 2022-23 ನೇ ಸಾಲಿಗೆ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಅರಿಶಿನ ಖರೀದಿಗೆ ಪ್ರತಿ ಕ್ವಿಂಟಲ್ ಗೆ ರೂ. 6,694 ರಂತೆ ಅನುಮೋದನೆಯನ್ನು ನೀಡಲಾಗಿದೆ.
ಅರಶಿನ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಕಾರಣ ಮಾರುಕಟ್ಟೆ ಮದ್ಯಸ್ಥಿಕೆ ಯೋಜನೆಯಡಿಯಲ್ಲಿ ಅರಶಿನ ಬೆಳೆಯನ್ನು ಖರೀದಿಸಬೇಕೆಂದು ರಾಜ್ಯದ ಅರಶಿನ ಬೆಳೆಗಾರರ ನಿಯೋಗ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಸಲ್ಲಿಸಿತ್ತು.
ಮನವಿಗೆ ಸ್ಪಂದಿಸಿ ಸಚಿವರು, ಇಲಾಖೆ ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕಾಗಿ ಆದೇಶಿಸಿದ್ದು. ಶೀಘ್ರವಾಗಿ ಕೇಂದ್ರದಿಂದ ಆದೇಶ ಹೊರಡಿಸಿ, ಅರಿಶಿನ ಬೆಳೆಯ ರೈತರ ಕಷ್ಟಕ್ಕೆ ಕೇಂದ್ರ ಸರ್ಕಾರದಿಂದ ಪರಿಹಾರ ಒದಗಿಸಲಾಗಿದೆ.
ಅರಶಿನ ಬೆಳೆಗೆ ಪ್ರಚಲಿತ ಮಾರುಕಟ್ಟೆ ದರ ಪ್ರತಿ ಕ್ವಿಂಟಲ್ ಗೆ ರೂ. 5200 ಇದ್ದು, ಪ್ರಸ್ತುತ ಕೇಂದ್ರ ಸರ್ಕಾರ ಘೋಷಿಸಿದ ಬೆಂಬಲ ಬೆಲೆ ಪ್ರತಿ ಕ್ವಿಂಟಲ್ ಗೆ ರೂ. 6694 ಇರುತ್ತದೆ. ಆದುದರಿಂದ ರೈತರಿಗೆ ಮಾರುಕಟ್ಟೆ ಮದ್ಯ ಪ್ರವೇಶ ಯೋಜನೆಯಿಂದ ಪ್ರತಿ ಕ್ವಿಂಟಲ್ ಗೆ, ಅಂದಾಜು ರು. 1400 ರಿಂದ ರೂ.1500 ಗಳಷ್ಟು ಲಾಭವಾಗುತ್ತದೆ.
ಚಾಮರಾಜನಗರ, ಬೆಳಗಾವಿ, ಬಾಗಲಕೋಟೆ, ಬೀದರ್ ಹಾಗೂ ಕಲಬುರಗಿ ಜಿಲ್ಲೆಗಳ ರೈತರಿಗೆ ಕೇಂದ್ರ ಸರ್ಕಾರದ ಈ ಆದೇಶದಿಂದ ಅನುಕೂಲವಾಗಲಿದೆ.