ಉಡುಪಿ: ಗೃಹರಕ್ಷಕ ದಳ ಪೊಲೀಸ್ ಇಲಾಖೆಯ ಹೆಚ್ಚುವರಿ ಶಕ್ತಿ. ತುರ್ತು ಸಂದರ್ಭಗಳಲ್ಲಿ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ, ಸಮಾಜಕ್ಕೆ ಉತ್ತಮ ರೀತಿಯಲ್ಲಿ ಸೇವೆ ಒದಗಿಸುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ಅರುಣ್ ಹೇಳಿದರು.
ಉಡುಪಿ ಜಿಲ್ಲಾ ಗೃಹರಕ್ಷಕ ದಳ ವತಿಯಿಂದ ನಗರದ ಕಚೇರಿ ಆವರಣದಲ್ಲಿ ಇಂದು ಆಯೋಜಿಸಿದ ಅಖಿಲ ಭಾರತ ಗೃಹರಕ್ಷಕದಳ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೊಲೀಸರು ಎಲ್ಲ ಸಂದರ್ಭದಲ್ಲಿ ಎಲ್ಲಾ ಕಡೆಗಳಲ್ಲಿ ಕೆಲಸ ನಿರ್ವಹಿಸಲು ಸಾಧ್ಯವಾಗದಿದ್ದಾಗ, ಗೃಹ ರಕ್ಷಕದಳ ಪೊಲೀಸರೊಂದಿಗೆ ಕೈ ಜೋಡಿಸಿಕೊಂಡು ಬಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗೃಹರಕ್ಷಕ ದಳ ಸೆಕೆಂಡ್ ಇನ್ ಕಮಾಂಡೆಂಟ್ ಕೆ. ಸಿ. ರಾಜೇಶ್ ಮಾತನಾಡಿ, ಗೃಹರಕ್ಷಕರು ಕರ್ತವ್ಯ ನಿರ್ವಹಿಸುವ ಇಲಾಖೆಯ ಗೌರವ ಕಾಪಾಡುವುದರೊಂದಿಗೆ ತಮ್ಮ ಇಲಾಖೆಯ ಗೌರವವನ್ನು ರಕ್ಷಿಸಬೇಕು. ಕೆಲಸದಲ್ಲಿ ದಕ್ಷತೆ, ಪ್ರಾಮಾಣಿಕತೆ, ಬದ್ಧತೆಯನ್ನು ತೋರಬೇಕು ಎಂದರು.
ಈ ಸಂದರ್ಭದಲ್ಲಿ ಗೃಹರಕ್ಷಕ ದಳ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಕಾಪು ಘಟಕದ ರಾಜೇಂದ್ರ, ಮಣಿಪಾಲ ಘಟಕದ ಮಾಝಿಮ್ ಉಮ್ಮರ್ ಫಾರೂಕ್ ಹಾಗೂ ಸವಿತಾ, ಕುಂದಾಪುರ ಘಟಕದ ಸಂದೀಪ್ ದಾಸ್ ಮತ್ತು ಉಡುಪಿ ಘಟಕದ ಜಯಂತಿ ಅವರನ್ನು ಸನ್ಮಾನಿಸಲಾಯಿತು.
ಕಾಪು ದಂಡತೀರ್ಥ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಡಾ. ಪ್ರಶಾಂತ್ ಕುಮಾರ್ ಶೆಟ್ಟಿ, ಡಾ. ವಿಜಯೇಂದ್ರ, ಗೃಹರಕ್ಷಕ ದಳದ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.
ಬೈಂದೂರು ಘಟಕ ಗೃಹರಕ್ಷಕದಳ ಪ್ಲಟೂನ್ ಕಮಾಂಡರ್ ರಾಘವೇಂದ್ರ ಎನ್ ಸ್ವಾಗತಿಸಿದರು. ಬ್ರಹ್ಮಾವರ ಘಟಕ ಪ್ಲಟೂನ್ ಕಮಾಂಡರ್ ಸ್ಟೀವನ್ ಪ್ರಕಾಶ್ ಲೂವಿಸ್ ನಿರೂಪಿಸಿದರು. ಪ್ರಣಾಮ ವಂದಿಸಿದರು.