ಉಡುಪಿ: ಹಿಜಾಬ್ ನಿಷೇಧ ಆದೇಶ ವಾಪಾಸ್ ಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿ ಉಡುಪಿಯಲ್ಲಿ ಸುದ್ದಿಗಾರರಿಗೆ ಇಂದು ಪ್ರತಿಕ್ರಿಯೆ ನೀಡಿದ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅವರು, ಕಳೆದ ಆರು ತಿಂಗಳಿನಿಂದ ರಾಜ್ಯ ಸರ್ಕಾರ ಗೊಂದಲದಲ್ಲಿದೆ. ತಮ್ಮ ಗೊಂದಲಗಳನ್ನು ಮರೆಮಾಚಲು ಈ ರೀತಿಯ ಹೇಳಿಕೆಗಳನ್ನು ಕೊಡುತ್ತಿದೆ. ಜನರ ದಿಕ್ಕು ತಪ್ಪಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ಆದೇಶ ಪ್ರತಿ ನಮ್ಮ ಕೈಗೆ ಸೇರಿಲ್ಲ. ಒಂದು ವೇಳೆ ಹಿಜಾಬ್ ನಿಷೇಧ ಆದೇಶ ಹಿಂದೆ ಪಡೆದುಕೊಂಡರೆ ಜೇನು ಗೂಡಿಗೆ ಕೈ ಹಾಕಿದಂತೆ. ವಿದ್ಯಾರ್ಥಿಗಳ ನಡುವಿನಲ್ಲಿ ಸಂಘರ್ಷಕ್ಕೆ ಎಡೆಮಾಡಿ ಕೊಟ್ಟಂತೆ ಆಗುತ್ತದೆ. ಬಡ ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟ ಆಡುವ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಸಿಎಂ ಹೇಳಿಕೆಯನ್ನು ಕಾನೂನು ಮೂಲಕ ಎದುರಿಸಲು ನಾವು ಸಿದ್ದರಾಗಿದ್ದೇವೆ ಎಂದು ಗುಡುಗಿದರು.
ಆದೇಶ ಪತ್ರ ಕೈ ಸೇರಿದ ನಂತರ ಹಿರಿಯರ ಜೊತೆ ಮಾತನಾಡಿ ಹೋರಾಟ ನಡೆಸಲು ಸಿದ್ಧರಿದ್ದೇವೆ. ನೆಮ್ಮದಿಯಿಂದ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಸಿಎಂ ಅವರ ಹೇಳಿಕೆ ವಿದ್ಯಾರ್ಥಿಗಳಲ್ಲಿ ಮತ್ತೆ ಗೊಂದಲ ಉಂಟುಮಾಡುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.