ಉಡುಪಿ: ಭೀಷ್ಮಾಷ್ಟಮಿ ಪ್ರಯುಕ್ತ ಅಯೋಧ್ಯೆಯಲ್ಲಿ ಶ್ರೀ ಪೇಜಾವರ ವಿಶ್ವಪ್ರಸನ್ನತೀರ್ಥ ಶ್ರೀಗಳ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಯಿತು.
ಮುಂಜಾನೆ ಪಟ್ಟದ ದೇವರ ಪೂಜೆಯ ಬಳಿಕ ಭೀಷ್ಮನಿಗೆ ಅರ್ಘ್ಯ ಸಮರ್ಪಿಸಲಾಯಿತು. ಬಳಿಕ ಗಾಂಗೇಯ ಭೀಷ್ಮನ ಸ್ಮರಣಾರ್ಥ ರಜತ ಕುಂಭದಲ್ಲಿ ಪವಿತ್ರ ಗಂಗೋದಕವನ್ನು ತುಂಬಿಸಿ ಗಂಗಾಪೂಜೆ ನೆರವೇರಿಸಿದರು. ನಂತರ ಮಠದಿಂದ ಶಿಷ್ಯರು ಭಕ್ತರ ವಿಷ್ಣುಸಹಸ್ರನಾಮ ಪಾರಾಯಣದೊಂದಿಗೆ ಮೆರವಣಿಗೆಯಲ್ಲಿ ಗಂಗೆಯನ್ನು ಅಯೋಧ್ಯೆ ರಾಮಮಂದಿರದ ಯಾಗಶಾಲೆಗೆ ತರಲಾಯಿತು.
ಅಲ್ಲಿ ವೈದಿಕರಿಂದ ವಿವಿಧ ಹೋಮಹವನಗಳು ಹಾಗೂ ಶ್ರೀಗಳಿಂದ ಕಲಶಾರಾಧನೆ ಕಲಶಪೂಜೆಗಳನ್ನು ನೆರವೇರಿಸಿ ಶ್ರೀಬಾಲರಾಮನಿಗೆ ಗಾಂಗೇಯ ಭೀಷ್ಮಾಚಾರ್ಯರ ಪ್ರೀತ್ಯರ್ಥವಾಗಿ ಗಂಗಾಭಿಷೇಕ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದರು .