ಉಡುಪಿ: ಬಿಪಿಎಲ್ ಕಾರ್ಡ್ದಾರರಿಗೆ 5 ಕೆಜಿ ಅಕ್ಕಿ ಬದಲು ಹಣ ಕೊಡಲು ರಾಜ್ಯ ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿ ಉಡುಪಿಯಲ್ಲಿ ಇಂದು ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಅಕ್ಕಿ ಕೊಡುವ ವಿಚಾರದಲ್ಲಿ ದಯವಿಟ್ಟು ಕರ್ನಾಟಕದ ಜನವನ್ನು ತಪ್ಪು ಹಾದಿಗೆ ಎಳೆಯಬೇಡಿ. ಕೇಂದ್ರ ಸರಕಾರ ಕೊಡುವ ಅಕ್ಕಿಯನ್ನು ಬಿಟ್ಟು 10 ಕೆಜಿ ಅಕ್ಕಿ ನೀಡಿ ಎಂದು ತಾಕೀತು ಮಾಡಿದ್ರು.
ಕೇಂದ್ರ ಸರಕಾರ ಬಿಪಿಎಲ್ ಇರುವವರಿಗೆ ಪ್ರತಿಯೊಬ್ಬರಿಗೂ ಐದು ಕೆಜಿ ಅಕ್ಕಿ ನೀಡುತ್ತಿದೆ. ಒಂದು ತಿಂಗಳಿಗೆ ಕೇಂದ್ರ ಸರಕಾರಕ್ಕೆ 18ರಿಂದ 19 ಸಾವಿರ ಕೋಟಿ ಖರ್ಚಾಗುತ್ತದೆ. ತೆಲಂಗಾಣದಲ್ಲಿ ಕೇಂದ್ರ ಸರಕಾರದ ಅಕ್ಕಿ ಎಂದು ರಶೀದಿ ನೀಡುತ್ತಿದ್ದಾರೆ. ಆದ್ರೆ ಸಿದ್ದರಾಮಯ್ಯನವರು ಇದನ್ನು ನಮ್ಮ ಅಕ್ಕಿ ನಮ್ಮ ಅಕ್ಕಿ ಅಂತ ಹೇಳುತ್ತಿದ್ದಾರೆ ಎಂದರು.
ಆಹಾರ ಭದ್ರತಾ ಕಾಯ್ದೆಯನ್ನು ನರೇಂದ್ರ ಮೋದಿಯವರು ಸ್ಪಷ್ಟ ರೂಪ ಕೊಟ್ಟು ಅನುಷ್ಠಾನ ಮಾಡಿದ್ದು. ನೀವು ಈಗ ಅಕ್ಕಿ ಸಿಕ್ಕಿಲ್ಲ ಹಣ ಕೊಡುತ್ತಿದ್ದೇವೆ ಎನ್ನುತ್ತಿದ್ದೀರಿ. ನೀವು 10 ಕೆಜಿ ಅಕ್ಕಿ ಕೊಡುತ್ತೇವೆ ಅಂತ ಹೇಳುವಾಗ ಕೇಂದ್ರದ 5 ಕೆ.ಜಿ ಅಕ್ಕಿ ಸೇರಿ ಅಂತ ಹೇಳಿದ್ದೀರಾ ?. ಹಾಗಾದ್ರೆ ಕೇಂದ್ರ ನೀಡುವ ಅಕ್ಕಿಗೆ ರಾಜ್ಯದಿಂದ ಹಣ ನೀಡುತ್ತಿದ್ದೀರಾ?. ಜನರಿಗೆ ತಪ್ಪು ಮಾಹಿತಿ ಒದಗಿಸಬೇಡಿ ಎಂದು ಹೇಳಿದ್ರು.
ಈಗ ನಿಮ್ಮದು 50 ಪರ್ಸೆಂಟ್ ಗ್ಯಾರಂಟಿ ಆಯ್ತು. 34 ರೂಪಾಯಿಗೆ ಅಕ್ಕಿ ಬರುವುದಿಲ್ಲ ಅದರಲ್ಲೂ ಹಣ ಉಳಿಸಿಕೊಳ್ಳಲು ಒದ್ದಾಟ ಮಾಡುತ್ತಿದ್ದೀರಿ. ನಾವು ಹೋರಾಟ ಮಾಡುತ್ತೇವೆ ಅಂದಮೇಲೆ ನೀವು ಹಣ ಕೊಡುದಕ್ಕೆ ಮುಂದಾದದ್ದು. ರಾಜ್ಯ ಸರ್ಕಾರ 10 ಕೆಜಿ ಅಕ್ಕಿ ನೀಡಬೇಕು ಎಂದು ಒತ್ತಾಯಿಸಿದ್ರು.