ಉಡುಪಿ: ವಿಜಯ ಸಂಕಲ್ಪ ಯಾತ್ರೆ, ಪ್ರಗತಿ ರಥ ಯಾತ್ರೆ ಹಾಗೂ ಮೋರ್ಚಾಗಳ ಜಿಲ್ಲಾ ಸಮಾವೇಶಕ್ಕೆ ಜಿಲ್ಲಾ ಬಿಜೆಪಿ ಸಜ್ಜಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.
ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.12ರಂದು ಕುಂದಾಪುರದ ನೆಹರೂ ಮೈದಾನದಲ್ಲಿ ಜಿಲ್ಲಾ ಮಹಿಳಾ ಸಮಾವೇಶ, ಮಾ.14ರಂದು ಬೈಂದೂರಿನಲ್ಲಿ ಜಿಲ್ಲಾ ಎಸ್ಸಿ-ಎಸ್ಟಿ ಸಮಾವೇಶ, ಮಾ.15ರಂದು ಬ್ರಹ್ಮಾವರದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಸಮಾವೇಶ ಹಾಗೂ ಮಾ.19ರಂದು ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಜಿಲ್ಲಾ ರೈತ ಸಮಾವೇಶ ನಡೆಯಲಿದೆ ಎಂದರು.
ಮಾ.13ರಿಂದ 15ರ ವರೆಗೆ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಜಿಲ್ಲೆಯಾದ್ಯಂತ ನಡೆಯಲಿದೆ. ಮಾ.13ರ ಮಧ್ಯಾಹ್ನ 3.30ಕ್ಕೆ ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ಯಾತ್ರೆಯ ಆಗಮನ, ಹೆಬ್ರಿಯಲ್ಲಿ ರೋಡ್ ಶೋ, ಸಂಜೆ 5.30ಕ್ಕೆ ಸಾರ್ವಜನಿಕ ಸಭೆ, ಮಾ.14ರಂದು ಬೆಳಿಗ್ಗೆ 9ಕ್ಕೆ ಕಾಪು ವಿಧಾನಸಭಾ ಕ್ಷೇತ್ರದ ಪೆರ್ಡೂರು-ಪಾಡಿಗಾರದಲ್ಲಿ ಸ್ವಾಗತ, ಸುಮಾರು 2,000 ಬೈಕ್ ಗಳ ಜಾಥಾ, ಮಾ.14ರ ಮಧ್ಯಾಹ್ನ 11ಕ್ಕೆ ಉಡುಪಿ ವಿಧಾನಸಭಾ ಕ್ಷೇತ್ರದ ಪರ್ಕಳಕ್ಕೆ ಆಗಮನ, ಸುಮಾರು 2,000 ಬೈಕ್ ಗಳ ಜಾಥಾ, ಮಾ.14ರಂದು ಸಂಜೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಬಾರ್ಕೂರು ಬಳಿ ಸ್ವಾಗತ, ಸಂಜೆ 5.30ಕ್ಕೆ ಸಾರ್ವಜನಿಕ ಸಭೆ, ಮಾ.15ರ ಬೆಳಿಗ್ಗೆ 9ಕ್ಕೆ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಆಗಮನ, ಸಿದ್ದಾಪುರದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ ಎಂದರು.
ಎಲ್.ಇ.ಡಿ ವಾಹನಗಳ ಮುಖಾಂತರ ಪ್ರಚಾರ ಮಾಡುವ ‘ಪ್ರಗತಿ ರಥ’ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಪ್ರಗತಿಗಾಗಿ ಮಾಡಿರುವ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಜನಸಾಮಾನ್ಯರಿಗೆ ತಿಳಿಸಲಿದೆ. ರಾಜ್ಯದಾದ್ಯಂತ 135 ಎಲ್.ಇ.ಡಿ ಪರದೆಯುಳ್ಳ ‘ಪ್ರಗತಿ ರಥ’ಗಳು ಸಂಚರಿಸಲಿವೆ. ಎಲ್ಲಾ 224 ಕ್ಷೇತ್ರಗಳ 58,000ಕ್ಕೂ ಹೆಚ್ಚಿನ ಬೂತ್ಗಳಲ್ಲಿ ಬಿಜೆಪಿ ಸರ್ಕಾರದ ಸಾಧನೆಗಳನ್ನು ವೀಡಿಯೊ ಪರದೆಗಳಲ್ಲಿ ಪ್ರದರ್ಶಿಸಲಾಗುವುದು. ಈ ರಥದಲ್ಲಿ ಎಲ್.ಇ.ಡಿ ಪರದೆ, ಮೈಕ್ ಸ್ಪೀಕರ್, ಇಂಟರ್ ನೆಟ್, ಲೈವ್ ಸ್ಟ್ರೀಮಿಂಗ್, ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆಗೊಳಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು, ಪ್ರಗತಿ ರಥ ಯಾತ್ರೆಯ ಜಿಲ್ಲಾ ಸಂಚಾಲಕ ಶರತ್ ಶೆಟ್ಟಿ ಉಪ್ಪುಂದ ಹಾಗೂ ಚುನಾವಣಾ ಪ್ರಣಾಳಿಕೆ ಸಲಹಾ ಸಮಿತಿಯ ಜಿಲ್ಲಾ ಸಂಚಾಲಕ ಅಂಡಾರು ದೇವಿ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.