ಉಡುಪಿ: ಹಲವು ವರ್ಷಗಳ ಕಾಲ ಪಕ್ಷಕ್ಕೆ ದುಡಿದವರನ್ನು ಬಿಟ್ಟು ನಿನ್ನೆ ಮೊನ್ನೆ ಬಂದವರಿಗೆ ಟಿಕೆಟ್ ನೀಡಲಾಗಿದೆ. ಆದ್ದರಿಂದ ನಾನು ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ನನಗೆ ಎಲ್ಲರ ಸಹಕಾರ ಬೇಕು ಎಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿ ಹೇಳಿದರು.
ಕೃಷ್ಣಮೂರ್ತಿ ಆಚಾರ್ಯ ಅಭಿಮಾನಿ ಬಳಗದವರು ನಗರದ ಮಥುರಾ ಹೋಟೆಲ್ ನಲ್ಲಿ ಇಂದು ನಡೆಸಿದ ಸಭೆಯಲ್ಲಿ ಅವರು ನಿರ್ಧಾರ ಪ್ರಕಟಿಸಿದರು.
ಶಾಸಕನಾಗಿ ನನ್ನ ಅಭಿಮಾನಿಗಳ ಸೇವೆ ಮಾಡಬೇಕೆಂದು ನನ್ನ ಜೀವನದ ಬಹಳ ದೊಡ್ಡ ಆಸೆ. ಹಾಗಾಗಿ ನನ್ನ ಹೋರಾಟ ಮುಂದುವರಿಸುತ್ತೇನೆ. ಪಕ್ಷೇತರನಾಗಿ ಸ್ಪರ್ಧಿಸಿ ಗೆಲುವು ಸಾಧಿಸಿಯೇ ಸಿದ್ಧ ಎಂದರು.
ನನ್ನನ್ನು ಕಾಂಗ್ರೆಸ್ ಗೆ ಕರೆತಂದವರು ದಿ. ಆಸ್ಕರ್ ಫೆರ್ನಾಂಡಿಸ್. ಅವರು ಇವತ್ತು ಬದುಕಿದ್ದರೆ ನನಗೆ ಟಿಕೇಟ್ ತಪ್ಪುತ್ತಿರಲಿಲ್ಲ. ಕಾಂಗ್ರೆಸ್ನ ಬಿ ಫಾರ್ಮ್ ದೊರೆತರೆ ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ. ಇಲ್ಲದಿದ್ದರೆ, ಅಭಿಮಾನಿಗಳ ಸಹಕಾರದಿಂದ ಈ ಬಾರಿ ಚುನಾವಣೆ ಸ್ಪರ್ಧಿಸಬೇಕೆಂಬ ನಿರ್ಧಾರ ಮಾಡಿದ್ದೇನೆ. ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಮಗೆ ಪಕ್ಷವೇ ದೊಡ್ಡದು. ಆದರೆ ಅನ್ಯಾಯ ಮಾಡಿದಾಗ ನಾವು ತೋರಿಸಿಕೊಡಬೇಕು. ನನ್ನ ಹೋರಾಟವನ್ನು ಮುಂದುವರೆಸುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಸದಾನಂದ ಕಾಂಚನ್, ತಾಪಂ ಮಾಜಿ ಅಧ್ಯಕ್ಷೆ ಶ್ಯಾಮಲಾ ಸುಧಾಕರ್, ನಗರಸಭೆ ಮಾಜಿ ಅಧ್ಯಕ್ಷ ಯುವರಾಜ್, ಧ್ವನಿ ಬೆಳಕು ಸಂಘಟನೆಯ ಜಿಲ್ಲಾಧ್ಯಕ್ಷ ಶಿವರಾಜ್ ಮಲ್ಲಾರು, ನಗರಸಭೆ ಮಾಜಿ ಸದಸ್ಯ ಗಣೇಶ್ ಕೋಟ್ಯಾನ್ ಮಾತನಾಡಿದರು.
ಯುವ ಕಾಂಗ್ರೆಸ್ ಮಾಜಿ ಕಾರ್ಯದರ್ಶಿ ಜಯ ಶೆಟ್ಟಿ ಬನ್ನಂಜೆ, ಕಡೆಕಾರು ಗ್ರಾಪಂ ಉಪಾಧ್ಯಕ್ಷ ನವೀನ್ ಶೆಟ್ಟಿ, ಗ್ರಾಪಂ ಸದಸ್ಯರಾದ ಸತೀಶ್, ಜಯಕರ, ಸಂದೇಶ ಶೆಟ್ಟಿ, ಮುಖಂಡರಾದ ಯಶೋಧರ್ ಮಲ್ಪೆ, ಉಮಾನಾಥ್ ಶೇರಿಗಾರ್, ಗಣೇಶ್ರಾಜ್ ಸರಳಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.