ಉಡುಪಿ: ಮನೆಯಿಂದ ಹೊರಗೆ ತೆರಳಿದ್ದ ಯುವಕನೋರ್ವ ವಾರಗಳ ಬಳಿಕ ಶ್ವಾನದ ಸಹಾಯದಿಂದ ವಾಪಸ್ ಆಗಿರುವ ಅಪರೂಪರ ಪ್ರಸಂಗ ಉಡುಪಿ ಜಿಲ್ಲೆಯ ಅಮವಾಸೆ ಬೈಲು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.
ಮಟ್ಟಟ್ಟು ಗ್ರಾಮದ ತೊಂಬಟ್ಟು ಇರ್ಕಿಗದ್ದೆ ನಿವಾಸಿ ಸೀನಾ ನಾಯ್ಕ ಮಗ ವಿವೇಕಾನಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ. ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ವಿವೇಕಾನಂದ ಸೆ.16 ರಂದು ಮನೆಯಿಂದ ಹೊರಹೋಗಿ ನಾಪತ್ತೆಯಾಗಿದ್ದ. ವಾರಗಳ ಕಾಲ ಕಾಡಿನಲ್ಲಿ ಅಲೆದಾಡಿದ್ದ ವಿವೇಕಾನಂದ ಅನ್ನ ಆಹಾರವಿಲ್ಲದೇ ಬರೀ ನೀರು ಕುಡಿದು ಅಲೆಯುತ್ತಿದ್ದ.
ಈತನನ್ನು ಹುಡುಕುವ ಸಲುವಾಗಿ ಅರಣ್ಯ ಇಲಾಖೆ ಪೊಲೀಸ್ ಇಲಾಖೆ ಸಾಕಷ್ಟು ಶೋಧ ನಡೆಸಿತ್ತು. ಆದರೆ ಆಶ್ಚರ್ಯಕರ ರೀತಿಯಲ್ಲಿ 8 ದಿನಗಳ ಬಳಿಕ ಕಬ್ಬಿನಾಲೆಯ ಸಮೀಪದ ಮನೆ ಒಂದರ ಬಳಿ ನಿತ್ರಾಣಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕಾಡು ಸೇರಿದ್ದ ವಿವೇಕಾನಂದ ಮತ್ತೆ ಮನೆಗೆ ವಾಪಸ್ ಆಗಲು ಸಾಕಿದ್ದ ನಾಯಿ ಸಹಾಯ ಮಾಡಿದೆ.