ಉಡುಪಿ: ಮುಂಬರುವ ರಾಜ್ಯ ಬಜೆಟ್ ನಲ್ಲಿ ರಾಜ್ಯ ಸರಕಾರವು ಹೈನುಗಾರಿಕೆಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಹಾಲಿಗೆ ಪ್ರತಿ ಲೀಟರಿಗೆ ₹5/- ಪ್ರೋತ್ಸಾಹ ಧನ ಮತ್ತು ದುಬಾರಿಯಾಗುತ್ತಿರುವ ನಂದಿನಿ ಪಶು ಆಹಾರಕ್ಕೆ ₹5/- ರೂಪಾಯಿ ಸಬ್ಸಿಡಿ ನೀಡಬೇಕೆಂದು ಆಗ್ರಹಿಸಿ ರಾಜ್ಯದಾದ್ಯಂತ ಸಹಕಾರ ಭಾರತೀಯ 33 ಸಂಘಟನಾ ಜಿಲ್ಲಾ ಕೇಂದ್ರಗಳಲ್ಲಿ “ಬೃಹತ್ ಹೈನುಗಾರರ ಜನಾಂದೋಲನ ಸಭೆ”ಗಳನ್ನು ವ್ಯಾಪಕವಾಗಿ ಸಂಘಟಿಸಲಾಗುವುದು ಎಂದು ತಿಳಿಸಿದರು.
ಅವರು ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಆವರಣದ ಸತ್ಯಾಗ್ರಹ ಕಟ್ಟಿಯಲ್ಲಿ ಜನವರಿ 19 ಗುರುವಾರದಂದು ನಡೆದ ಉಡುಪಿ ಜಿಲ್ಲೆಯ “ಬೃಹತ್ ಹೈನುಗಾರರ ಜನಾಂದೋಲನ ಸಭೆ”ಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ರಾಜ್ಯದ ಹಾಲುಮಹಾ ಮಂಡಳಿಯ 16 ಒಕ್ಕೂಟಗಳಲ್ಲಿ ಕಳೆದ ಮೂರು ನಾಲ್ಕು ತಿಂಗಳಿನಿಂದ ಹಾಲು ಸಂಗ್ರಹ ಸುಮಾರು 12 ಲಕ್ಷದಷ್ಟು ಕಡಿಮೆಯಾಗಿದ್ದು, ಹಾಲಿನ ಕೊರೆತೆಯಿಂದಾಗಿ ಒಕ್ಕೂಟಗಳು ಕೂಡ ನಷ್ಟದ ಹಾದಿಯನ್ನು ಹಿಡಿಯುತ್ತಿದವೆ. ಹಾಲಿನ ಖರೀದಿ ದರದಲ್ಲಿ ಹೆಚ್ಚಳವಾದರೆ ಮಾತ್ರ ಹೈನುಗಾರಿಕೆ ಲಾಭದಿಂದ ನಡೆಯಲು ಸಾಧ್ಯ. ಇಲ್ಲದಿದ್ದರೆ ಇನ್ನಷ್ಟು ಮಂದಿ ಹೈನುಗಾರಿಕೆಯಿಂದ ವಿಮುಖರಾಗುವ ಅಪಾಯವಿದೆ ಎಂದು ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ, ಸಹಕಾರ ಭಾರತಿ ಜಿಲ್ಲಾಧ್ಯಕ್ಷರಾದ ಬೋಳ ಸದಾಶಿವ ಶೆಟ್ಟಿಯವರು, ಪಕ್ಕದ ರಾಜ್ಯಗಳಲ್ಲಿ ಲೀಟರಿಗೆ 45 ರೂಪಾಯಿಗಿಂತ ಹೆಚ್ಚಿನ ಖರೀದಿ ದರ ರೈತರಿಗೆ ಲಭ್ಯವಾಗುತ್ತಿದ್ದು, ನಮ್ಮ ರಾಜ್ಯದಲ್ಲಿ ಕೇವಲ ಲೀಟರಿಗೆ ಗರಿಷ್ಠ 35/- ರೂಪಾಯಿ ಮಾತ್ರ ಸಿಗುತ್ತಿರುವುದರಿಂದ ಹೈನುಗಾರಿಕೆ ನಷ್ಟದ ಹಾದಿಯನ್ನು ಹಿಡಿಯುತ್ತಿದೆ.
ಯುವ ಪೀಳಿಗೆಗೆ ಹೈನುಗಾರಿಕೆಗೆ ಉತ್ಸಾಹದಿಂದ ಬರಬೇಕಾದರೆ ಹಾಲಿನ ಖರೀದಿ ದರದಲ್ಲಿ ಹೆಚ್ಚಳ, ಪಶು ಆಹಾರದ ದರದಲ್ಲಿ ಕಡಿತ ಇನ್ನಿತರ ಪ್ರೋತ್ಸಾಹಕ ಯೋಜನೆಗಳು ರಾಜ್ಯ ಸರಕಾರದ ಮೂಲಕ ಹೈನುಗಾರಿಕೆಗೆ ಸಿಗಬೇಕೆಂದು ಆಗ್ರಹಿಸಿದರು.
ರಾಷ್ಟ್ರೀಯ ಮತ್ಸ್ಯ ಪ್ರಕೋಷ್ಟದ ಸಹ ಸಂಚಾಲಕರು ಹಾಗೂ ನ್ಯಾಯವಾದಿಗಳಾದ ಶ್ರೀ ಮಂಜುನಾಥ ಎಸ್ಕೆ ಯವರು ಅಂಕಿ ಅಂಶಗಳ ಮೂಲಕ ವಿವರಿಸುತ್ತಾ ಹಾಲಿಗೆ ಪ್ರೋತ್ಸಾಹ ಧನ ನೀಡಿದರೆ ಗ್ರಾಮೀಣ ಆರ್ಥಿಕತೆಯ ಸುಧಾರಣೆಯ ಜೊತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರ ಆತ್ಮ ನಿರ್ಭರ ಭಾರತದ ಕಲ್ಪನೆ ಸಾಕಾರಗೊಳಿಸಿದಂತಾಗುತ್ತದೆ ಎಂದು ತಿಳಿಸಿದರು.
ಸಹಕಾರ ಭಾರತಿ ಮೈಸೂರು ವಿಭಾಗದ ಸಂಘಟನಾ ಪ್ರಮುಖರಾದ ಮೋಹನ್ ಕುಮಾರ್ ಕುಂಬಳೇಕರ್ ರವರು ಮಾತನಾಡುತ್ತಾ, ದೇಶಾದ್ಯಂತ ಸಹಕಾರ ಭಾರತೀ ಸಹಕಾರಿ ಕ್ಷೇತ್ರದ ಸುಧಾರಣೆಯ ಜೊತೆಗೆ ಗ್ರಾಮೀಣ ಭಾಗದ ಹೈನುಗಾರಿಕೆಗೆ ಸಂಘಟನಾತ್ಮಕವಾಗಿ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಹಾಲು ಪ್ರಕೋಷ್ಟದ ಸಂಚಾಲಕರಾದ ಕನ್ನಾರು ಕಮಲಾಕ್ಷ ಹೆಬ್ಬಾರ್ ಅವರು ಮಾತನಾಡುತ್ತಾ, ಸರಕಾರವು ಹೈನುಗಾರರ ಬೇಡಿಕೆಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಕನಿಷ್ಠ ಎರಡು ಮೂರು ದಿನ ಸೊಸೈಟಿಗಳಿಗೆ ಪೂರೈಸುವ ಹಾಲನ್ನು ಸಾಮೂಹಿಕವಾಗಿ ಸ್ಥಗಿತ ಗೊಳಿಸುವುದರ ಮೂಲಕ ಸರಕಾರಕ್ಕೆ ತೀವ್ರ ಪ್ರತಿರೋಧವನ್ನು ವ್ಯಕ್ತಪಡಿಸಬೇಕಾಗಿ ಬರಬಹುದು ಎಂದು ಎಚ್ಚರಿಸಿದರು.
ಸಭೆಯನ್ನು ಉದ್ದೇಷಶಿಸಿ ಜಿಲ್ಲಾ ಫ್ಫ್ಯಾಕ್ಸ್ ಪ್ರಕೋಷ್ಟದ ಸಂಚಾಲಕರಾದ ಪ್ರಸಾದ್ ಶೆಟ್ಟಿ, ದ. ಕ .ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ಸ್ಮಿತಾ ಆರ್ ಶೆಟ್ಟಿ, ಸಹಕಾರ ಭಾರತಿ ಉಡುಪಿ ತಾಲೂಕು ಅಧ್ಯಕ್ಷರಾದ ದಿನೇಶ್ ಹೆಗ್ಡೆ ,ಕಾಂತಾವರ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಮೋಹನ ದಾಸ ಅಡ್ಯಂತಾಯ, ಹೆರ್ಗ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಹೆರ್ಗ ದಿನಕರ ಶೆಟ್ಟಿ ಮಾತನಾಡಿದರು.
ಪ್ರತಿಭಟನಾ ಸಭೆ ನಡೆಯುತ್ತಿದ್ದ ಸ್ಥಳಕ್ಕೆ ಸ್ವತಹ ಉಡುಪಿ ಅಪರ ಜಿಲ್ಲಾಧಿಕಾರಿ ವೀಣಾ .ಬಿ. ಎನ್. ರವರು ಆಗಮಿಸಿ ಮನವಿಯನ್ನು ಮುಖ್ಯಮಂತ್ರಿಗಳಿಗೆ ತಲುಪಿಸುವುದಾಗಿ ತಿಳಿಸಿದರು.
ಉಡುಪಿ ಜಿಲ್ಲೆಯ 7 ತಾಲೂಕುಗಳ ಸುಮಾರು 450 ಕ್ಕೂ ಮಿಕ್ಕಿ ವಿವಿಧ ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರುಗಳು, ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಪ್ರತಿಭಟನಾ ಸಭೆಯಲ್ಲಿ ಉತ್ಸಾಹದಿಂದ ಭಾಗವಹಿಸಿದರು.
ವೇದಿಕೆಯಲ್ಲಿ ಸಹಕಾರ ಭಾರತಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ, ಸುಜಿತ್, ಬ್ರಹ್ಮಾವರ ತಾಲೂಕು ಅಧ್ಯಕ್ಷರಾದ ಅಶೋಕ್ ಪ್ರಭು, ಬೈಂದೂರು ತಾಲೂಕು ಅಧ್ಯಕ್ಷರಾದ ಹರೀಶ್ ಆಚಾರ್, ಕಾರ್ಕಳ ತಾಲೂಕು ಅಧ್ಯಕ್ಷರಾದ ಹರೀಶ್ ಕಲ್ಯಾ, ಮಹಿಳಾ ಪ್ರಮುಖ್ ವಿದ್ಯಾಪೈ ಉಪಸ್ಥಿತರಿದ್ದರು.
ಸಹಕಾರ ಭಾರತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಶಿರೂರು ಕಾರ್ಯಕ್ರಮ ಸಂಯೋಜಿಸಿ, ವಂದನಾರ್ಪಣೆಯನ್ನು ಮಾಡಿದರು.