ಮಂಗಳೂರು: ರಾಜ್ಯದ ಹೆಮ್ಮೆಯ ಕಲೆ ಯಕ್ಷಗಾನವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಉಡುಪಿಯ ಎಂಜಿಎಂ ಕಾಲೇಜಿನ
ಎ.ಎಲ್.ಎನ್. ರಾವ್ ಕ್ರೀಡಾಂಗಣದಲ್ಲಿ ಸಮಗ್ರ ಯಕ್ಷಗಾನ ರಾಜ್ಯಮಟ್ಟದ ಸಮ್ಮೇಳನವನ್ನು ಫೆ. 12ರಂದು
ಆಯೋಜಿಸಲಾಗಿದ್ದು, 20 ಸಾವಿರ ಮಂದಿ ನಿರೀಕ್ಷೆಯಿದೆ ಎಂದು ಭಾಗವಹಿಸುವ ಸಮ್ಮೇಳನದ ಕಾರ್ಯಾಧ್ಯಕ್ಷ ಡಾ. ಜಿ.ಎಲ್. ಹೆಗಡೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಥಮ ಯಕ್ಷಗಾನ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ವಿದ್ವಾಂಸ ಡಾ ಎಂ. ಪ್ರಭಾಕರ ಜೋಶಿ ಅವರನ್ನು ಆಯ್ಕೆ ಮಾಡಲಾಗಿದೆ.
ಫೆ. 11ರಂದು ಬೆಳಗ್ಗೆ 9ಕ್ಕೆ ಶ್ರೀ ಮಹಿಷಮರ್ದಿನಿ ಕಡಿಯಾಳಿ ದೇವಸ್ಥಾನದಿಂದ ಮೆರವಣಿಗೆಯಲ್ಲಿ ಸಮ್ಮೇಳನಾ ಧ್ಯಕ್ಷರನ್ನು ಬರಮಾಡಿಕೊಳ್ಳಲಾಗುವುದು. ಬೆಳಗ್ಗೆ 10.30ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಕಾರ್ಯ ಕ್ರಮ ಉದ್ಘಾಟಿಸಲಿದ್ದಾರೆ. ಫೆ. 12ರಂದು ಸಂಜೆ 5ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
2 ದಿನ ವಿವಿಧ ವಿಚಾರಗಳ ಒಟ್ಟು 6 ಗೋಷ್ಠಿಗಳಲ್ಲಿ 150 ವಿಶೇಷ ಆಹ್ವಾನಿತರು ಭಾಗವಹಿಸಲಿದ್ದಾರೆ. ಯಕ್ಷಗಾನದಲ್ಲಿ ಅವಿರತವಾಗಿ ದುಡಿದ 75 ಸಾಧಕ ರನ್ನು ಸಮ್ಮಾನಿಸಲಾಗುವುದು, 200 ಕೀರ್ತಿಶೇಷ ಕಲಾವಿದರ ಭಾವಚಿತ್ರದ ಜತೆಗೆ ಕಿರುಪರಿಚಯದ ಪ್ರದರ್ಶನ ಮಾಡಲಾಗುತ್ತದೆ. ಸಮ್ಮೇಳನದಲ್ಲಿ ವಿದೇಶದ ಹೊರರಾಜ್ಯದ ತಂಡಗಳು ಸೇರಿ ಒಟ್ಟು 25 ಯಕ್ಷಗಾನ ಕಲಾತಂಡಗಳು ಪ್ರದರ್ಶನ ನೀಡಲಿವೆ.
2 ವೇದಿಕೆಗಳಲ್ಲಿ ಏಕಕಾಲದಲ್ಲಿ ರಾತ್ರಿ ಪೂರ್ತಿ ಯಕ್ಷಗಾನ ಪ್ರದರ್ಶನ ನಡೆಯಲಿವೆ. ಸಮ್ಮೇಳನಕ್ಕೆ 2 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.