ಉಡುಪಿ : ಕೊರೊನಾ 3ನೇ ಅಲೆಯ ಭೀತಿಯ ಮಧ್ಯೆಯೇ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಕಾಲುಬಾಯಿ ರೋಗ ಹೆಚ್ಚುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಕಾರ್ಕಳ ನಗರದ ಆಸುಪಾಸಿನಲ್ಲಿ 50ಕ್ಕೂ ಅಧಿಕ ಜಾನುವಾರುಗಳು ಕಾಲುಬಾಯಿ ರೋಗಕ್ಕೆ ಬಲಿಯಾಗಿವೆ ಎಂದು ವರದಿಯಾಗಿದೆ.
ಅನೇಕ ಜಾನುವಾರುಗಳಲ್ಲಿ ಕಾಲುಬಾಯಿ ಜ್ವರ ಕಾಣಿಸಿಕೊಂಡಿರುವುದರಿಂದ ಇಲ್ಲಿನ ಗ್ರಾಮಸ್ಥರಿಗೆ ನೆಮ್ಮದಿಯೇ ಇಲ್ಲದಂತಾಗಿದೆ. ತೆಳ್ಳಾರು, ಮಿಯಾರು, ದುರ್ಗಾ ಮೊದಲಾದ ಕಡೆ ಕಾಯಿಲೆ ಕಾಣಿಸಿಕೊಂಡಿದೆ. ಜಾನುವಾರುಗಳ ಬಾಯಿಯಲ್ಲಿ ಮತ್ತು ಗೊರಸಿನ ಸಂಧಿಯಲ್ಲಿ ಹುಣ್ಣು ಕಾಣಿಸಿಕೊಳ್ಳುತ್ತಿದೆ. ಪರಿನಾಮ ಆಹಾರ ಸೇವಿಸಲು ಆಗದೆ ಜಾನುವಾರುಗಳು ಯಾತನೆ ಪಡುತ್ತಿವೆ.
ಕೆಲ ಗ್ರಾಮಗಳ ಜಾನುವಾರುಗಳಲ್ಲಿ ಕಾಲುಬಾಯಿ ರೋಗ ಲಕ್ಷಣ ಕಾಣಿಸಿಕೊಂಡಿರುವುದರಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ. ರೋಗ ಬಂದ ಐದಾರು ದಿನದಲ್ಲಿಯೇ ಹಸುಗಳು ಸಾವನ್ನಪ್ಪುತ್ತಿವೆ. ಜಾನುವಾರುಗಳು ಕಾಲುಬಾಯಿ ರೋಗಕ್ಕೆ ತುತ್ತಾಗುತ್ತಿರುವುದರಿಂದ ಜನರಿಗೆ ದಿಕ್ಕೇ ತೋಚದಂತಾಗಿದೆ. ಈ ಪ್ರಕರಣಗಳು ವರದಿಯಾಗುತ್ತಿದ್ದಂತೆಯೇ ರಾಸುಗಳಿಗೆ ಚುಚ್ಚು ಮದ್ದು ಹಾಗೂ ಅಗತ್ಯ ಚಿಕಿತ್ಸೆ ಕೊಡಿಸಲು ಜನರು ಪರದಾಡುವಂತಾಗಿದೆ. ಅಲ್ಲದೆ ಪಶು ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಯಿಲೆಯಿಂದ ಒಂದರ ಮೇಲೊಂದರಂತೆ ರಾಸುಗಳು ಸಾವನ್ನಪ್ಪುತ್ತಿದ್ದರೂ ಪಶು ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಲುಬಾಯಿ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿದ ಜಾನುವಾರುಗಳನ್ನು ಗ್ರಾಮಸ್ಥರೇ ತಮ್ಮ ಜಮೀನುಗಳಲ್ಲಿ ಹೂಳುತ್ತಿದ್ದಾರೆ. ಕೂಡಲೇ ರಾಸುಗಳಿಗೆ ಅಗತ್ಯ ಚಿಕಿತ್ಸೆ ನೀಡಬೇಕೆಂದು ಪಶು ಇಲಾಖೆಗೆ ಒತ್ತಾಯಿಸಿದ್ದಾರೆ.