ಉಡುಪಿ: ಕೃಷ್ಣನಗರಿಯಲ್ಲಿ ವೀಕೆಂಡ್ ಕರ್ಫ್ಯೂ ನಿಂದ ಜನಸಂಚಾರ ವಿರಳಗೊಂಡಿದೆ. ಆದರೆ, ಬೆಳಗ್ಗೆ ಶ್ರೀ ಕೃಷ್ಣಮಠದ ರಥಬೀದಿಯಲ್ಲಿ ಭಕ್ತ ಸಂದಣಿಯೇ ಇತ್ತು! ಕಾರಣ, ಇಂದು ಚೂರ್ಣೋತ್ಸವ ಸಂಭ್ರಮ.
ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ನೇತೃತ್ವದಲ್ಲಿ ಚೂರ್ಣೋತ್ಸವ ಇಂದು ಬೆಳಗ್ಗೆ ಸಂಪನ್ನಗೊಂಡಿತು. ಕಳೆದ ರಾತ್ರಿ 3 ರಥಗಳ ಉತ್ಸವ ನಡೆದ ಬೆನ್ನಲ್ಲೇ ಮರುದಿನ ಬೆಳಗ್ಗೆ ಹಗಲು ರಥೋತ್ಸವ ನಡೆಯುವುದು ಸಂಪ್ರದಾಯ.
ಬೆಳಗ್ಗೆ ಶ್ರೀಕೃಷ್ಣನ ಉತ್ಸವ ಮೂರ್ತಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿಟ್ಟು, ರಥಬೀದಿಗೆ ತರಲಾಯಿತು. ಬಳಿಕ ಬ್ರಹ್ಮರಥದಲ್ಲಿರಿಸಿ ವಿಶೇಷ ಪೂಜೆ ಸಲ್ಲಿಸಿದ ತರುವಾಯ ವಾದ್ಯಘೋಷ, ಜಯಕಾರದೊಂದಿಗೆ ರಥ ಎಳೆಯಲಾಯಿತು. ರಥದಿಂದ ಸುವರ್ಣ ನಾಣ್ಯ, ಹಣ್ಣು ಹಂಪಲು ಪ್ರಸಾದ ರೂಪವಾಗಿ ಭಕ್ತರೆಡೆಗೆ ಎಸೆಯಲಾಯಿತು.
ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಅದಮಾರು ಹಿರಿಯ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಭಾವಿ ಪರ್ಯಾಯ ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಮತ್ತು ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು, ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಮತ್ತು ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಉತ್ಸವದಲ್ಲಿ ಭಾಗವಹಿಸಿ, ಭಕ್ತಾದಿಗಳೊಂದಿಗೆ ರಥ ಎಳೆದರು.