ಉಡುಪಿ: ರಾಜ್ಯದಲ್ಲಿ ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೆಲವೊಂದು ಮಾರ್ಗಸೂಚಿ ಜಾರಿಯಲ್ಲಿದೆ. ಈ ನಡುವೆ ಕರಾವಳಿಯ ಜನಪದ ಕ್ರೀಡೆ ಮುಂದುವರಿಯುತ್ತಾ ಎನ್ನುವ ಗೊಂದಲವಿದೆ. ಹೀಗಾಗಿ ಕಂಬಳ ಸಮಿತಿಯ ಅಧ್ಯಕ್ಷ ರೋಹಿತ್ ಹೆಗ್ಡೆ ಎರ್ಮಾಳ್ ಅವರು, ಉಡುಪಿ ಜಿಲ್ಲಾಧಿಕಾರಿ ಹಾಗೂ ಸಚಿವ ಸುನಿಲ್ ಕುಮಾರ್ ಜೊತೆ ಸಭೆ ನಡೆಸಿ ಕಂಬಳ ನಡೆಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಸರಕಾರದ ನಿಯಮಾವಳಿಗಳನ್ನು ಪಾಲಿಸಿಕೊಂಡು ಕಂಬಳವನ್ನು ನಡೆಸುತ್ತೇವೆ. ನಿಗದಿಯಾದ ದಿನಾಂಕ ದಂದು ಕಂಬಳ ನಡೆಸಲು ಅವಕಾಶ ನೀಡಬೇಕು ಎಂದು ರೋಹಿತ್ ಹೆಗ್ಡೆ ಕೋರಿಕೊಂಡಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿದ ಸಚಿವ ಸುನಿಲ್ ಕುಮಾರ್ ಕೊರೋನಾ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ತಿಂಗಳವರೆಗೆ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಒಟ್ಟು ಮಾಡಿದರೆ ವೇಗವಾಗಿ ಕೋರೋನಾ ಹರಡುವ ಸಾಧ್ಯತೆ ಇದೆ.
ಹೀಗಾಗಿ ಕಂಬಳವನ್ನು ಮುಂದಿನ ತಿಂಗಳ ವರೆಗೆ ಮುಂದೂಡುವುದು ಒಳ್ಳೆಯದು. ಕಂಬಳ ಸಮಿತಿ ಮನವಿಯಂತೆ ಸರ್ಕಾರದ ಜೊತೆಗೆ ಚರ್ಚಿಸಿ, ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.