ಬೆಳ್ತಂಗಡಿ : ಮಲವಂತಿಗೆ ಗ್ರಾಮದ ದಿಡುಪೆ ಸಮೀಪದ ನಂದಿಕಾಡು ಕರಿಯಂದೂರು ದೈಪಿತ್ತಿಲ್ ಮೊದಲಾದ ಪರಿಸರಗಳಲ್ಲಿರುವ ಕೃಷಿ ತೋಟಗಳಿಗೆ ದಾಳಿಯಿಡುವ ಕಾಡಾನೆಗಳು, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಸಮೀಪದ ದೈಪಿತ್ತಲು ಬಳಿ ವನ್ಯಜೀವಿ ವಿಭಾಗದ ಸಿಬ್ಬಂದಿಗಳಿಗೆ ಎದುರಾದ ಘಟನೆ ನಡೆದಿದೆ.
ಬೆಳಗ್ಗೆ ಹತ್ತು ಗಂಟೆ ವೇಳೆಗೆ ದೈಪಿತ್ತಿಲು ಕಾಡಿನತ್ತ ಗಸ್ತು ತಿರುಗಾಟಕ್ಕೆ ಹೊರಟ ಸಿಬ್ಬಂದಿಗಳಿಗೆ ಒಂದು ಮರಿಯಾನೆ ಒಂದು ಗಂಡು ಹಾಗೂ ಒಂದು ಹೆಣ್ಣು ಆನೆಗಳು ರಸ್ತೆಗಿಂತ ಅನತಿ ದೂರದ ಕಾಡಿನಲ್ಲಿ ಕಂಡುಬಂದಿವೆ. ಜಾಗೃತರಾದ ಸಿಬ್ಬಂದಿ ಸ್ಥಳೀಯರಿಗೆ ಮಾಹಿತಿ ನೀಡಿ ಅವರ ಸಹಕಾರದಲ್ಲಿ ಕಾಡಾನೆಗಳನ್ನು ಕಾಡಿನತ್ತ ಅಟ್ಟಿದ್ದಾರೆ.
ಕಳೆದ ವರ್ಷ ಕಡಿರುದ್ಯಾವರ ಗ್ರಾಮದ ತೋಟವೊಂದಕ್ಕೆ ಕಾಡಾನೆ ತಂಡ ದಾಳಿ ನಡೆಸಿದ ವೇಳೆ ಮರಿಯಾನೆ ತೋಟದಲ್ಲೆ ಉಳಿದು ದಾಂಧಲೆ ಎಬ್ಬಿಸಿದ ಬಳಿಕ,ಅರಣ್ಯ ಇಲಾಖೆ ಹರಸಾಹಸಪಟ್ಟು ಮರಿಯಾನೆಯನ್ನು ಕಾಡಿಗಟ್ಟಲು ಯಶಸ್ವಿಯಾಗಿತ್ತು. ಇದೀಗ ದಿಡುಪೆ ಸಮೀಪ ಅದೇ ಕಾಡಾನೆ ತಂಡ ಎದುರಾಗಿದೆ ಎಂದು ಹೇಳಲಾಗುತ್ತಿದೆ.