News Karnataka Kannada
Saturday, May 04 2024
ಕರಾವಳಿ

ರಾಷ್ಟ್ರಪತಿಗಳೊಂದಿಗೆ ಸಂವಾದಕ್ಕೆ ತೆರಳಿದ ಬಂಟ್ವಾಳದ ಮೂವರು ಸಾಧಕ ಮಹಿಳೆಯರು

Three women from Bantwal set out to interact with President
Photo Credit : News Kannada

ಬಂಟ್ವಾಳ : ಅದ್ಯಾವ ಭಾಗ್ಯ ಇವರನ್ನು ಅರಸಿ ಬಂದಿತೋ ಗೊತ್ತಿಲ್ಲ , ಬಂಟ್ವಾಳದ ಈ ಮೂವರು ಮಹಿಳೆಯರು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳ ಜೊತೆ ಸಂವಾದ ನಡೆಸುವ ಸೌಭಾಗ್ಯ ಪಡೆದುಕೊಂಡಿದ್ದು, ಅದಕ್ಕಾಗಿ ದೆಹಲಿಯತ್ತ ಹೊರಟಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಯಾಗಿರುವ ಈ ಮೂವರು ಮಹಿಳೆಯರೂ ಬಂಟ್ವಾಳ ತಾಲೂಕಿನವರಾಗಿದ್ದು, ಬೆಂಗಳೂರಿಗೆ ರೈಲಿನಲ್ಲಿ, ಅಲ್ಲಿಂದ ದೆಹಲಿಗೆ ವಿಮಾನದಲ್ಲಿ ಪಯಣಿಸುವ ಭಾಗ್ಯ ಇವರಿಗೆ ಒದಗಿ ಬಂದಿದ್ದು, ಅಳಿಕೆ ಅನುಗ್ರಹ ಒಕ್ಕೂಟದ ವಾರಿಜ ಮತ್ತು ಅಮಿತ ಹಾಗೂ ಕೊಳ್ನಾಡು ನೇತ್ರಾವತಿ ಸಂಜೀವಿನೀ ಒಕ್ಕೂಟದ ಇಂದ್ರಾವತಿ ಎಂಬವರೇ ರಾಷ್ಟ್ರಪತಿಗಳ ಭೇಟಿಯ ಅವಕಾಶ ಪಡೆದವರು.

ರಾಷ್ಟ್ರಪತಿಯವರು ಬುಡಕಟ್ಟು ಜನಾಂಗದ ಸ್ವ-ಸಹಾಯ ಗುಂಪಿನ ಸದಸ್ಯರನ್ನು ಭೇಟಿಯಾಗುವ ಸಲುವಾಗಿ ದೆಹಲಿಯ ರಾಷ್ಟ್ರಪತಿ ಭವನದ ಅಮೃತ ಉದ್ಯಾನಕ್ಕೆ ದೇಶದ ಎಲ್ಲೆಡೆಯಿಂದ ಬುಡಕಟ್ಟು ಜನಾಂಗದ ಮಹಿಳೆಯರನ್ನು ಆಯ್ಕೆ ಮಾಡಲಾಗುತ್ತಿದ್ದು, ರಾಜ್ಯದಿಂದ 30 ಮಹಿಳೆಯರನ್ನು ಆಯ್ಕೆ ಮಾಡಲಾಗಿದೆ.

ದೆಹಲಿ ಭೇಟಿಯ ಕುರಿತು ತೀವ್ರ ಸಂತೋಷ ವ್ಯಕ್ತಪಡಿಸಿರುವ ಮೂವರು ಮಹಿಳೆಯರು, ಇದು ನಮ್ಮ ಬದುಕಿನ ಸೌಭಾಗ್ಯ ಎಂದು ಸಂತಸ ಹಂಚಿಕೊಂಡಿದ್ದಾರೆ.

ವಾರಿಜಾ
ಅನುಗ್ರಹ ಸಂಜೀವಿನೀ ಒಕ್ಕೂಟದಲ್ಲಿ ಕಳೆದ ಮೂರುಬವರ್ಷಗಳಿಂದ ಎಂಬಿಕೆ ಆಗಿ ಕಾರ್ಯನಿರ್ವಹಿಸುತ್ತಿರುವ ವಾರಿಜಾ ಅವರು, ಈ ಒಕ್ಕೂಟದಿಂದ ಸ್ವ ಉದ್ಯೋಗಕ್ಕೆ ಪ್ರೇರಣೆ ಪಡೆದವರು. ಕೃಷಿ ಸಹಿತ ಮಲ್ಲಿಗೆ ಕೃಷಿಯಲ್ಲೂ ತೊಡಗಿಸಿಕೊಂಡಿರುವ ಇವರು ಆಡು ಸಾಕಣೆ, ಕೋಳಿ ಸಾಕಣೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಇದು ನಮಗೆ ನೆನೆಯದೇ ಬಂದ ಭಾಗ್ಯ ಎಂದವರು ಖುಷಿಯನ್ನು ಹಂಚಿಕೊಂಡಿದ್ದಾರೆ.

ಅಮಿತಾ
ಅವಿಭಕ್ತ ಕುಟುಂಬದ ಸದಸ್ಯೆಯಾಗಿರುವ ಇವರು, ಕನ್ಯಾನ ಕೆಪಿಎಸ್ ವಿದ್ಯಾಸಂಸ್ಥೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಣಬೆ ಕೃಷಿಯ ಸ್ವ ಉದ್ಯೋಗದಲ್ಲಿ ತೊಡಗಿಸಿಕೊಂಡ ಇವರ ತುಂಬು ಕುಟುಂಬ, ಮಲ್ಲಿಗೆ ಕೃಷಿ, ಹೈನುಗಾರಿಕೆಯಲ್ಲೂ ಮುಂದಿದೆ. ಸಂಜೀವಿನೀ ಒಕ್ಕೂಟ ನನ್ನ ಜೀವನಕ್ಕೆ ಹೊಸ ಪ್ರೇರಣೆ ನೀಡಿದೆ, ದೆಹಲಿ ಪಯಣ ಅತ್ಯಂತ ಸಂತಸದ ಕ್ಷಣ ಎಂದವರು ಹರ್ಷ ವ್ಯಕ್ತಪಡಿಸಿದ್ದಾರೆ.

ಇಂದ್ರಾವತಿ
ಕೊಳ್ನಾಡು ನೇತ್ರಾವತಿ ಒಕ್ಕೂಟದಲ್ಲಿ ಕಳೆದ 20 ವರ್ಷಗಳಿಂದ ತೊಡಗಿಸಿಕೊಂಡಿರುವ ಇಂದ್ರಾವತಿಯವರು ಹಪ್ಪಳ, ಸಂಡಿಗೆ ತಯಾರಿಸಿ ಮಾರಾಟ ಮಾಡುವ ಜೊತೆಗೆ ಟೈಲರಿಂಗ್ ವೃತ್ತಿಯನ್ನೂ ನೆಚ್ಚಿಕೊಂಡವರು. ಸಂಜೀವಿನೀ ಒಕ್ಕೂಟದ ಮೂಲಕ ಪ್ರತೀ ವಾರ ಹೊಸಬಗೆಯ ಪ್ರೇರಣೆ ಸಿಗುತ್ತಿದೆ ಎನ್ನುವ ಅವರು ದೆಹಲಿಗೆ ಹೋಗುವ ಅವಕಾಶ ದೊರೆತಿರುವುದಕ್ಕೆ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.

ಮಾ.31 ರಂದು ದೆಹಲಿಯಲ್ಲಿ ರಾಷ್ಟ್ರಪತಿಗಳನ್ನು ಭೇಟಿಯಾಗಲಿರುವ ಇವರ ಪ್ರಯಾಣದ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಬೆಂಗಳೂರಿಗೆ ಹೋಗುವ ವೆಚ್ಚವನ್ನು ಸಂಜೀವಿನೀ ಜಿಲ್ಲಾ ಅಭಿಯಾನ ಘಟಕವೇ ಭರಿಸಲಿದ್ದು, ಬೆಂಗಳೂರಿನಿಂದ ದೆಹಲಿಗೆ ಹೋಗುವ ವಿಮಾನದ ವೆಚ್ಚವನ್ನು ರಾಜ್ಯ ಅಭಿಯಾನ ಘಟಕ ಭರಿಸಲಿದೆ. ರಾಜ್ಯದಿಂದ ಇಬ್ಬರು ಅಧಿಕಾರಿಗಳು, 30 ಮಹಿಳೆಯರು ಸೇರಿದಂತೆ ಒಟ್ಟು 32 ಮಂದಿ ದೆಹಲಿಗೆ ತೆರಳುತ್ತಿದ್ದಾರೆ.

ರಾಷ್ಟ್ರಪತಿಭವನಕ್ಕೆ ಬುಡಕಟ್ಟು ಜನಾಂಗದ ಸ್ವಸಹಾಯ ಗುಂಪಿನ ಸದಸ್ಯರ ಭೇಟಿಗೆ ದ.ಕ.ಜಿಲ್ಲೆಯಿಂದ ಬಂಟ್ವಾಳ ತಾಲೂಕಿನ ಮೂವರು ಸದಸ್ಯರು ಆಯ್ಕೆಯಾಗಿ ನವದೆಹಲಿಗೆ ಪಯಣಿಸುತ್ತಿರುವುದು ನಮ್ಮ ತಾಲೂಕಿಗೆ ಹೆಮ್ಮೆಯ ಸಂಗತಿ. -ಶ್ರೀಮತಿ ಸುಧಾ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು, ಸಂಜೀವಿನೀ ತಾಲೂಕು ಅಭಿಯಾನ ಘಟಕ ಬಂಟ್ವಾಳ

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು