ಬಂಟ್ವಾಳ :ಬಂಟ್ವಾಳ ತಾಲೂಕಿನ ಕಾರಿಂಜದ ಯಕ್ಷಾವಾಸ್ಯಮ್ ಕಾರಿಂಜ ಇದರ ದ್ವಿತೀಯ ವಾರ್ಷಿಕೋತ್ಸವ ಕಾರ್ಯಕ್ರಮ ಕಾವಳಪಡೂರು, ವಗ್ಗ , ಕಾಡಬೆಟ್ಟು ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ರವಿವಾರ ನಡೆಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಕಾರ್ಯಕ್ರಮ ದಲ್ಲಿ ಅಧ್ಯಕ್ಷತೆ ವಹಿಸಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಅವರಿಗೆ ಯಕ್ಷಾವಾಸ್ಯಮ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಯಕ್ಷಗಾನಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಯಕ್ಷಗಾನ ತರಬೇತಿ ನೀಡುವ ನೊಂದಾಯಿತ ಸಂಘ, ಸಂಸ್ಥೆಗಳಿಗೆ ಸರಕಾರದಿಂದ ಅನುದಾನ ಒದಗಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಹೇಳಿದರು.
ಅರ್ಹರನ್ನು ಗುರುತಿಸಿ ಪ್ರಶಸ್ತಿ ನೀಡುವ ಪರಿಪಾಠ ಪ್ರಧಾನಿ ನರೇಂದ್ರ ಮೋದಿಯವರು ಆರಂಭಿಸಿದ್ದು, ಅದರಂತೆ ತಾಲೂಕಿನಲ್ಲಿಯೂ ಐವರಿಗೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಸಲಾಯಿತು. ಯಕ್ಷ ಕಲಾವಿದ ಚಂದ್ರಶೇಖರ ಕೊಂಕಣಾಜೆ ಅಭಿನಂದನಾ ಭಾಷಣ ಮಾಡಿದರು.
ಬಂಟ್ವಾಳ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದೇವದಾಸ ಶೆಟ್ಟಿ, ಮಂಗಳೂರು ವಿಶ್ವವಿದ್ಯಾನಿಲಯ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ, ಪಚ್ಚಾಜೆಗುತ್ತು ಜಿನರಾಜ ಆರಿಗ, ನಿವೃತ್ತ ಪಂಚಾಯತ್ ಅಽಕಾರಿ ಗಣಪತಿ ಮುಚ್ಚಿನ್ನಾಯ, ಶ್ರೀ ಕ್ಷೇತ್ರ ಕಾರಿಂಜದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪುಳಿಮಜಲು, ಉದ್ಯಮಿ ನಾಗೇಶ್ ಶೆಟ್ಟಿ ಬಂಟ್ವಾಳ, ಯಕ್ಷವಾಸ್ಯಮ್ ಸಂಸ್ಥೆಯ ಮಿಥುನ್ ರಾಜ್ ಭಟ್, ಯಕ್ಷಗುರು ಶ್ರೀನಿವಾಸ ಬಳ್ಳಮಂಜ, ಸುನಿಲ್ ಪಲ್ಲಮಜಲು, ಭಜನ ಮಂದಿರ ಅಧ್ಯಕ್ಷ ಬಾಲಕೃಷ್ಣ ಕಾಡಬೆಟ್ಟು, ಮತ್ತಿತರರು ಉಪಸ್ಥಿತರಿದ್ದರು.
ಜಯರಾಮ ಭಟ್ ಸ್ವಾಗತಿಸಿದರು. ಸಂಚಾಲಕಿ ಸಾಯಿಸುಮಾ ಎಂ.ನಾವಡ ಕಾರಿಂಜ ವಂದಿಸಿದರು. ಸುಜಯಾ ಕಾರ್ಯಕ್ರಮ ನಿರೂಪಿಸಿದರು.
ಬೆಳಗ್ಗೆ ಶ್ರೀ ಶಾರದಾಂಬ ಭಜನಾ ಮಂದಿರದ ಗೌರವಾಧ್ಯಕ್ಷ ಪ್ರಮೋದ್ ಕುಮಾರ್ ರೈ ಕಾರ್ಯಕ್ರಮ ಉದ್ಘಾಟಿಸಿದರು. ಕಾವಳಪಡೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ರಜನಿ, ಹಿರಿಯ ಅರ್ಥದಾರಿ ತಿಮ್ಮಪ್ಪ ಶೆಟ್ಟಿ ಪಾತಿಲ ಉಪಸ್ಥಿತರಿದ್ದರು. ಸಂಸ್ಥೆಯ ವಿದ್ಯಾರ್ಥಿಗಳಿಂದ ಯಕ್ಷಗಾನ ಪೂರ್ವರಂಗ, ಪುಣ್ಯಕೋಟಿ ಯಕ್ಷಗಾನ ರೂಪಕ, ಬಳಿಕ ಕಾರ್ತವೀರ್ಯಾರ್ಜುನ ಕಾಳಗ ಯಕ್ಷಗಾನ ನಡೆಯಿತು.