ಮಂಗಳೂರು: ಸದಾ ಗಬ್ಬೆದ್ದು ನಾರುವ ಮಶ್ರೂಮ್ ಫ್ಯಾಕ್ಟರಿಯ ದುರ್ನಾತದಿಂದ ನಮಗೆ ಬದುಕಲು ಸಾಧ್ಯವಿಲ್ಲ. ಊಟ ಮಾಡಲಾಗುತ್ತಿಲ್ಲ, ಅಸ್ತಮಾ, ದಮ್ಮು – ಕೆಮ್ಮು ಚರ್ಮ ವ್ಯಾದಿಗಳಿಗೆ ತುತ್ತಾಗುತ್ತಿದ್ದೇವೆ. ಒಂದು ಸಲ ಈ ಫ್ಯಾಕ್ಟರಿಯನ್ನು ಇಲ್ಲಿಂದ ಎತ್ತಂಗಡಿ ಮಾಡಿಸಿ ಎಂದು ಮಂಗಳೂರಿನ ವಾಮಂಜೂರು ತಿರುವೈಲ್ ವಾರ್ಡ್ ನಾಗರಿಕರು ವೈಟ್ ಗ್ರೋ ಅಗ್ರಿ ಎಲ್ಎಲ್ ಪಿ ಮಶ್ರೂಮ್ ಫ್ಯಾಕ್ಟರಿಯ ವಿರುದ್ಧ ಅನಿರ್ದಿಷ್ಟಾವಧಿ ಮುಷ್ಕರ ಹೂಡಿದ್ದಾರೆ.
ಮಾಜಿ ಶಾಸಕ ಜೆ.ಆರ್.ಲೋಬೊ ಪಾಲುದಾರಿಕೆಯ ಒಡೆತನಕ್ಕೆ ಸೇರಿದ ಫ್ಯಾಕ್ಟರಿ. ಕರೊನಾ ಸಂದರ್ಭ ಚಾಕಲೇಟ್ ತಯಾರಕ ಸಂಸ್ಥೆ ಎಂದು ಈ ಫ್ಯಾಕ್ಟರಿಯನ್ನು ಸ್ಥಾಪಿಸಲಾಗಿತ್ತು. ಆ ಬಳಿಕ ಇಲ್ಲಿ ಮಶ್ರೂಮ್ ಬೆಳೆಸಲಾಗುತ್ತಿದೆ ಎಂದು ನಾಗರಿಕರಿಗೆ ತಿಳಿದು ಬಂದಿದೆ. ಈ ಫ್ಯಾಕ್ಟರಿಯಿಂದ ನಿತ್ಯವೂ ತಿರುವೈಲು ಸೇರಿದಂತೆ ವಾಮಂಜೂರು ವ್ಯಾಪ್ತಿಯಲ್ಲಿ ಗಬ್ಬು ವಾಸನೆ ಬರುತ್ತಿದೆ.
ಜನವಸತಿ ಪ್ರದೇಶದಿಂದ ಈ ಫ್ಯಾಕ್ಟರಿಯನ್ನು ತೆರವು ಮಾಡಿಸಲು ಒಂದು ವರ್ಷದಿಂದ ನಾಗರಿಕರು ಹೋರಾಟ ಮಾಡುತ್ತಿದ್ದಾರೆ. ಆದರೆ ಈ ಹೋರಾಟಕ್ಕೆ ಕಿಮ್ಮತ್ತಿನ ಬೆಲೆಯೂ ಸಿಕ್ಕಿಲ್ಲ.
ಈ ಫ್ಯಾಕ್ಟರಿ ಸ್ಥಗಿತಗೊಳಿಸುವಂತೆ ನಾಗರಿಕರು ಕಳೆದ ಮಾರ್ಚ್ 20 ದೊಡ್ಡಮಟ್ಟದ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಫ್ಯಾಕ್ಟರಿಗೆ ಬೀಗ ಜಡಿಯುವಂತೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮಂಗಳೂರು ಮನಪಾ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಗೇಟ್ ಗೆ ಬೀಗ ಜಡಿದಿದ್ದರು. ಆ ಬಳಿಕವೂ ಪರಿಸ್ಥಿತಿ ಯಥಾರೀತಿಯಲ್ಲಿಯೇ ಮುಂದುವರಿದಿದೆ. ಇದರಿಂದ ಸಿಡಿದೆದ್ದ ನಾಗರಿಕರು ಇಂದಿನಿಂದ ಫ್ಯಾಕ್ಟರಿ ಮುಚ್ಚುವವರೆಗೆ ಅನಿರ್ದಿಷ್ಟಾವಧಿ ಮುಷ್ಕರ ಹೂಡಿದ್ದಾರೆ.
ವಾಮಂಜೂರಿನಲ್ಲಿ ಫ್ಯಾಕ್ಟರಿಗೆ ಹೋಗುವ ದಾರಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದು, ಸ್ಥಳೀಯ ಅಂಗಡಿ – ಮುಂಗಟ್ಟುಗಳನ್ನು ಮುಚ್ಚಿ, ಆಟೋರಿಕ್ಷಾ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಸ್ಥಳಕ್ಕೆ ಪೊಲೀಸರು ದೌಢಾಯಿಸಿ ಮುಷ್ಕರ ನಿರತರ ಮನವೊಲಿಕೆಗೆ ಯತ್ನಿಸಿದರೂ ಜನರು ಜಪ್ಪಯ್ಯ ಅಂದರೂ ಕದಲಲಿಲ್ಲ. ಅಲ್ಲದೆ ಸ್ಥಳಕ್ಕೆ ಜಿಲ್ಲಾಧಿಕಾರಿಯವರು ಆಗಮಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ಜೊತೆಗೆ ಮಶ್ರೂಮ್ ಫ್ಯಾಕ್ಟರಿಯನ್ನು ತಕ್ಷಣ ಸ್ಥಳದಿಂದ ಬೇರೆಡೆಗೆ ಸ್ಥಳಾಂತರಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.