ತುಮಕೂರು: ಮುಂಗಾರು ಮತ್ತಷ್ಟು ವಿಳಂಬವಾಗುತ್ತಿದ್ದು, ನಗರದ ಕುಡಿಯುವ ನೀರಿಗಾಗಿ ಮೀಸಲಿರಿಸಿರುವ ಬುಗುಡನಹಳ್ಳಿ ಜಲ ಸಂಗ್ರಹಗಾರದ ನೀರು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಜೂ.8ರ ದಿನಾಂಕಕ್ಕೆ ಅನುಗುಣವಾಗಿ 70 ಎಂಸಿಎಫ್ಟಿಯಷ್ಟು ಮಾತ್ರ ಬುಗುಡನಹಳ್ಳಿ ಜಲಸಂಗ್ರಹಾರದಲ್ಲಿ ನೀರು ಲಭ್ಯವಿದ್ದು, ಇದರಲ್ಲಿ 40 ಎಂಸಿಎಫ್ಟಿಯಷ್ಟು ಡೆಡ್ಸ್ಟೋರೇಜ್ ಹೊರತುಪಡಿಸಿದರೆ ಇನ್ನೂ 30 ಟಿಎಂಸಿಯಷ್ಟು ಮಾತ್ರ ನೀರು ನಗರ ಜನರ ಬಳಕಿಗೆ ಲಭ್ಯವಿದೆ. ನೀರು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ನಿತ್ಯ ಡ್ರಾ ಮಾಡಲಾಗುತ್ತಿದ್ದ 1.5 ಎಂ.ಸಿಎಫ್ಟಿ ಬದಲಾಗಿ, 1.2 ಎಂಸಿಎಫ್ಟಿಗೆ ಇಳಿಕೆ ಮಾಡಿದ್ದು, ಬೋರ್ವೆಲ್ನಿಂದಲೂ ಪೂರೈಕೆಗೆ ಕ್ರಮ ವಹಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಎಚ್.ವಿ.ದರ್ಶನ್ ಪ್ರತಿಕ್ರಿಯಿಸಿದ್ದಾರೆ.
ಕೊಳವೆಬಾವಿಯಿಂದ 500 ಲಕ್ಷ ಲೀ. ಡ್ರಾ: ನಗರದಲ್ಲಿರುವ 803 ಕೊಳವೆಬಾವಿಗಳ ಪೈಕಿ 699 ಕೊಳವೆಬಾವಿಗಳು ಚಾಲ್ತಿಯಲ್ಲಿದ್ದು, ನಿತ್ಯ 500 ಲಕ್ಷ ಲೀ ನೀರನ್ನು ಈ ಕೊಳವೆ ಬಾವಿಗಳ ಮೂಲಕ ಪಡೆದು ೩ ದಿನಕ್ಕೊಮ್ಮೆ ಸರತಿಯಂತೆ ನೀರು ಬಿಡಲಾಗುತ್ತಿದೆ. ದುರಸ್ತಿಗೊಳಿಸಬಹುದಾದ 59 ಕೊಳವೆಬಾವಿಗಳನ್ನು ಗುರುತಿಸಿದ್ದು, ದುರಸ್ತಿ ಮಾಡಿಸಿ ಅದರಿಂದಲೂ ನೀರು ಪೂರೈಸಲಾಗುವುದು. ಜುಲೈ ಮೊದಲ ವಾರದಿಂದ ಡ್ಯಾಂನಿಂದ ನೀರು ಬಿಡುವ ನಿರೀಕ್ಷೆಯಿದ್ದು, ಜಿಲ್ಲಾಡಳಿತದ ಮೂಲಕ ಡ್ಯಾಂ ನಿರ್ವಹಣೆ ಮಾಡುವ ಸೂಪರಿಟೆಂಡೆಂಡ್ ಎಂಜಿನಿಯರ್ಗೆ ಕೋರಲಾಗಿದೆ. ನೀರಿನ ಹರಿವಿಕೆ ಹಿನ್ನೆಲೆಯಲ್ಲಿ ನಾಲಾ ದುರಸ್ತಿ ಕಾಮಗಾರಿ ತಾತ್ಕಾಲಿಕ ತಡೆಹಿಡಿಯುವ ಸಾಧ್ಯತೆ ಅಥವಾ ಪರ್ಯಾಯ ಪರಿಹಾರ ಮಾರ್ಗೋಪಾಯ ಕಂಡುಕೊಳ್ಳುವರು ಎಂದು ಆಯುಕ್ತರು ಸ್ಪಷ್ಟಪಡಿಸಿದರು.
ಕಟ್ಟಿಕೊಳ್ಳುವ ರಾಜಕಾಲುವೆ ತೆರವಿಗೆ ಕ್ರಮ: 1 ಕೋಟಿ 29 ಲಕ್ಷ ವೆಚ್ಚದಲ್ಲಿ ರಾಜಕಾಲುವೆ ದುರಸ್ತಿಗೆ ಯೋಜನೆ ರೂಪಿಸಿದ್ದು, ಸರ್ವೆ ವರದಿ ಬರಲು ಇನ್ನು ಎರಡು ತಿಂಗಳಾಗಲಿದೆ. ಅಲ್ಲಿಯವರೆಗೆ ಮಳೆಬಂದರೆ ಅನಾಹುತವಾಗಬಹುದೆಂದು ಸಭೆಯಲ್ಲೂ ಚರ್ಚೆಯಾದ ಅಂಶವನ್ನು ಗಮನದಲ್ಲಿರಿಸಿ ಸರ್ವೋದಯ ಹೈಸ್ಕೂಲ್ ಮುಂಭಾಗ ಸೇರಿ ನೀರು ಸರಾಗವಾಗಿ ಹರಿಯದ ಕಾಲುವೆಗಳ ದುರಸ್ತಿಗೆ ಕ್ರಮವಹಿಸಲಾಗುತ್ತಿದೆ. ಕಾಲುವೆಗಳ ಡಿಶೆಲ್ಟಿಂಗ್ ಮಾಡಲಾಗುತ್ತಿದ್ದು, ಅಮಾನಿಕೆರೆ ಕೋಡಿಹಳ್ಳ ಮುಂಭಾಗ ರಸ್ತೆ ಎತ್ತರಿಸಲು ಕ್ರಮವಹಿಸಲಾಗುವುದು ಎಂದರು.
ಯುಜಿಡಿ ಮ್ಯಾನ್ಹೋಲ್ ರಸ್ತೆಗಳಲ್ಲಿ ಪದೇ ಪದೇ ಉಕ್ಕಲು ೨ನೇ ಹಂತದ ಯುಜಿಡಿಯಲ್ಲಿ 36 ಪಾಯಿಂಟ್ಗಳಲ್ಲಿ ಸರಿಯಾಗಿ ಸಂಪರ್ಕ ಮಾಡದಿರುವುದೇ ಕಾರಣವಾಗಿದೆ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದ ಆಯುಕ್ತರು, ನಗರ ನೀರು ಸರಬರಾಜು ಒಳಚರಂಡಿ ಮಂಡಳಿ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕಿದ್ದು, ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಪಾಲಿಕೆಯಿಂದ ತಾತ್ಕಾಲಿಕವಾಗಿ ಈ ರೀತಿ ಸಮಸ್ಯೆ ಉದ್ಬವಿಸಿದ ಕೂಡಲೇ ಸಕ್ಕಿಂಗ್ ಮಿಷನ್ ಮೂಲಕ ಮ್ಯಾನ್ಹೋಲ್ ದುರಸ್ತಿ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಎಕ್ಸಿಕ್ಯೂಟಿವ್ ಎಂಜಿನಿಯರ್ ವಿನಯ್ ಈ ವೇಳೆ ಉಪಸ್ಥಿತರಿದ್ದರು.
ಡ್ಯಾಂನಿಂದ ಜುಲೈ ಮೊದಲ ವಾರ ನೀರು ನಿರೀಕ್ಷೆ: ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಹರಿಯುವ ಗೊರೂರು ಜಲಾಶಯದಿಂದ ಜುಲೈ ಮೊದಲ ವಾರದಿಂದ ಹೇಮಾವತಿ ನೀರು ಹರಿಯುವ ನಿರೀಕ್ಷೆ ಇದ್ದು, ಜಿಲ್ಲಾಧಿಕಾರಿಗಳ ಮೂಲಕ ಡ್ಯಾಂ ನಿರ್ವಹಣೆ ಮಾಡುವ ನಿಗಮದ ಎಂಜಿನಿಯರ್ಗಳನ್ನು ಸಂಪರ್ಕಿಸಿ ಶೀಘ್ರ ನೀರು ಹರಿಸುವಂತೆ ಚರ್ಚಿಸಲಾಗಿದೆ. ಪ್ರಸ್ತುತ ೩ ದಿನಕ್ಕೊಮ್ಮೆ ನೀರು ಬಿಡುತ್ತಿದ್ದು, ಬುಗುಡನಹಳ್ಳಿ ಸಂಗ್ರಹಗಾರ ನೀರು ೨೫ ದಿನದವರೆಗೆ ಮ್ಯಾನೇಜ್ ಮಾಡಬಹುದಾಗಿದೆ. 699 ಕೊಳವೆ ಬಾವಿಗಳಿಂದಲೂ ನೀರು ಪೂರೈಕೆಮಾಡಲಾಗುತ್ತಿದೆ ಎಂದು ಪಾಲಿಕೆ ಆಯುಕ್ತ ಎಚ್.ವಿ.ದರ್ಶನ್ ತಿಳಿಸಿದ್ದಾರೆ.
ಉಸ್ತುವಾರಿ ಸಚಿವರು ಬೇಗ ನಿಯೋಜನೆಯಾದರೆ ಪರಿಹಾರ ಸಾಧ್ಯ: ಇನ್ನೂ ಜಿಲ್ಲಾ ಉಸ್ತುವಾರಿ ಸಚಿವರು ಬೇಗ ನಿಯೋಜನೆಗೊಂಡರೆ ಅಧಿಕಾರಿಗಳ ಮಟ್ಟದ ಸಭೆ ನಡೆಸಿ ಹೇಮಾವತಿ ನೀರು ಹರಿಸುವುದು ಸೇರಿ ಜಿಲ್ಲೆಯ ಜ್ವಲಂತ ತುರ್ತು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ ಕಾವೇರಿ ಜಲಾನಯನ ಪ್ರದೇಶದ ಶಾಸಕರು, ಸಂಸದರು, ಸಚಿವರನ್ನೊಳಗೊಂಡ ನೀರಾವರಿ ಸಲಹಾ ಸಮಿತಿ ಸಭೆಯನ್ನು ಕರೆದು ಡ್ಯಾಂನಲ್ಲಿರುವ ನೀರನ್ನು ತ್ವರಿತ ಹಂಚಿಕೆ ಮಾಡುವ ನಿರ್ಧಾರ ಕೈಗೊಳ್ಳಲು ಅನುಕೂಲವಾಗುತ್ತದೆ. ತುಮಕೂರು ಜಿಲ್ಲೆಯಿಂದ ಡಾ.ಜಿ.ಪರಮೇಶ್ವರ, ಕೆ.ಎನ್.ರಾಜಣ್ಣ ಇಬ್ಬರು ಪ್ರಭಾವಿ, ಸಮರ್ಥ ಸಚಿವರಿದ್ದು ಉಸ್ತುವಾರಿ ಬೇಗ ಹಂಚಿಕೆಯಾಗಬೇಕೆಂಬ ಒತ್ತಾಯಗಳು ವಿಪಕ್ಷಗಳು, ಸಾರ್ವಜನಿಕರಿಂದ ಕೇಳಿಬಂದಿದೆ.