“ಶ್ರೀನಿವಾಸ್ ಬಜಾಲ್ ಅವರು ಬಡ ಕುಟುಂಬದಿಂದ ಬಂದವರು. ಅನ್ಯ ಧರ್ಮಕ್ಕೆ ಆಕ್ರಮಣ ಮಾಡೋದರಿಂದ ನಮ್ಮ ಬಜಾಲ್ ಪ್ರದೇಶಕ್ಕೆ, ಜಿಲ್ಲೆಗೆ, ನಾಡಿಗೆ ದೇಶದ ಐಕ್ಯತೆಗೆ ಒಳ್ಳೆಯದಲ್ಲ ಎಂದು ಶ್ರೀನಿವಾಸ್ ಬಜಾಲ್ ಹೇಳುತ್ತಿದ್ದರು. ಅದರ ವಿರೋಧವಾಗಿ ಸಮ ಸಮಾಜವನ್ನು ಕಟ್ಟಲು ಪ್ರಯತ್ನ ಮಾಡಿದವರು, ಹೋರಾಟ ಮಾಡಿದವರು ಶ್ರೀನಿವಾಸ್ ಬಜಾಲ್,” ಎಂದು ನೆನಪಿಸಿದರು.
“ಶ್ರೀನಿವಾಸ್ ಬಜಾಲ್ ಯಾವತ್ತೂ ಇನ್ನೊಬ್ಬರಿಗೆ ಕೈ ಎತ್ತಿ ಹೊಡೆಯಿರಿ ಎಂದು ಹೇಳಿದವರು ಅಲ್ಲ. ಮತೀಯ ಶಕ್ತಿಗಳಿಗೆ ಬಲಿಯಾಗುತ್ತಿದ್ದ ಯುವ ಜನರಲ್ಲಿ ಐಕ್ಯತೆಯ ವಿಚಾರವನ್ನು ಪ್ರಚಾರ ಮಾಡುತ್ತಿದ್ದರು. ಅದರಿಂದಾಗಿ ಈ ಮತೀಯ ಶಕ್ತಿಗಳಿಗೆ ಗಂಡಾಂತರ ಬರುತ್ತದೆ ಎಂದು ಗೊತ್ತಾಯಿತು. ಅದಕ್ಕಾಗಿ ಹಿಂದುತ್ವವಾದಿ ರಾಜಕೀಯ ಶಕ್ತಿಗಳು ಶ್ರೀನಿವಾಸ್ ಬಜಾಲ್ ನ್ನು ಕೊಂದರು. ಕೊಂದವರು ಈ ಹೋರಾಟದ ವಿಷಯವನ್ನೇ ಕೊಂದು ಬಿಡುತ್ತೇವೆ ಎಂದುಕೊಂಡಿದ್ದಾರೆ ಆದರೆ ಹಾಗಾಗಲಿಲ್ಲ.
ಡಾ.ನರೇಂದ್ರ ದಾಬೋಲ್ಕರ್ ಅವರು ‘ಯಾರು ನಿಮ್ಮನ್ನು ಮೌಡ್ಯದ ವಿಷಯಕ್ಕೆ ಬಲಿ ಬೀಳಿಸುತ್ತಾರೋ ಅವರನ್ನು ಪ್ರಶ್ನೆ ಮಾಡಿ’ ಎಂದರು. ಆದರೆ ಇದರಿಂದಾಗಿ ಜನರು ವಿವೇಕವಂತರಾಗಬಾರದು ಎಂದು ಆ ವರ್ಗ ದಾಬೋಲ್ಕರ್ ಅವರನ್ನೇ ಕೊಂದರು. ಶಿವಾಜಿ ಎಂದರೆ ಯಾರು ಎಂಬ ವಿಚಾರವನ್ನು ಹೇಳಿದವರು ಗೋವಿಂದ ಪನ್ಸಾರೆ ಅದಕ್ಕಾಗಿ ಅವರನ್ನು ಕೊಂದರು. ಹಾಗೆಯೇ ಎಂ.ಎಂ.ಕಲ್ಬುರ್ಗಿ , ಗೌರಿ ಲಂಕೇಶ್ ಅವರನ್ನು ಕೂಡಾ ಬಲಿ ಪಡೆದರು ಎಂದು ಕೋಮುವಾದಿಗಳ ವಿರುದ್ದ ವಾಗ್ದಾಳಿ ನಡೆಸಿದರು. ಶ್ರೀನಿವಾಸ್ ಬಜಾಲ್ ಅವರನ್ನು ಕೊಲ್ಲಲು ಕಾರಣ ಏನಿದೆಯೋ ಅದೇ ಕಾರಣಕ್ಕೆ ದಾಬೊಲ್ಕರ್, ಕಲ್ಬುರ್ಗಿ, ಪನ್ಸಾರೆ, ಗೌರಿ ಲಂಕೇಶ್ ಅವರನ್ನು ಕೊಲ್ಲಲು. ಶ್ರೀನಿವಾಸ್ ಮಾಡಿರುವುದು ಶೌರ್ಯದ ರಾಜಕೀಯ, ಹಿಂದುತ್ವವಾದಿಗಳು ಮಾಡಿರುವುದು ಹೇಡಿ ರಾಜಕೀಯ ಎಂದು ಟೀಕಿಸಿದರು. ಈ ಫ್ಯಾಸಿಸ್ಟ್ ಸರಕಾರದ ನೀತಿಗಳನ್ನು ಪ್ರಶ್ನೆಮಾಡಿದ ಹೋರಾಟಗಾರರನ್ನು ಯುಎಪಿಎ ಕಾಯ್ದೆಯಡಿ ಬಂಧನ ಮಾಡುತ್ತಿದ್ದಾರೆ. ಈಗ ತೀಸ್ತಾ ಸೆತಲ್ವಾಡ್, ಆರ್ ಬಿ ಶ್ರೀಕುಮಾರ್ ವಿರುದ್ಧವೂ ಯುಎಪಿಎ ಕಾಯ್ದೆಯನ್ನು ಹಾಕಲು ಮುಂದಾಗಿದ್ದಾರೆ. ಇಂತಹ ಸರ್ವಾಧಿಕಾರಿ ಧೋರಣೆಗಳ ವಿರುದ್ಧ ಇನ್ನಷ್ಟು ಪ್ರಬಲ ಚಳುವಳಿಗಳು ನಡೆಯ ಬೇಕಾಗಿದೆ. ನಿರಂತರ ಹೋರಾಟದ ಕಣದಲ್ಲಿರುವ ಡಿವೈಎಫ್ಐ ದೇಶದ ಯುವಜನರನ್ನು ಅಣಿನೇರಿಸಿ ಚಳುವಳಿಯನ್ನು ಮುನ್ನಡೆಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲೇ ಮಾತನಾಡಿದ ಸುನೀಲ್ ಕುಮಾರ್ ಬಜಾಲ್, “ಶ್ರೀನಿವಾಸ್ ಬಜಾಲ್ ಆ ಕಾಲದಲ್ಲಿ ಜನರ ನಡುವೆ ಹೇಗೆ ಕೆಲಸ ಮಾಡಿದ್ದಾರೆ ಎಂದು ನಾವು ಅರ್ಥ ಮಾಡಿಕೊಳ್ಳಬೇಕು. ಶ್ರೀನಿವಾಸ್ ಬಜಾಲ್ ಡಿವೈಎಫ್ಐ ಆಶಯದಂತೆ ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ನಡುವಿನ ಐಕ್ಯತೆಗಾಗಿ ಕೆಲಸ ಮಾಡಿದವರು. ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಗಳಿಗೆ ನೇತೃತ್ವ ನೀಡುವ ಮೂಲಕ ಊರಿನ ಬಹುತೇಕ ಯುವಜನರ ಆಕರ್ಷಣೆಗೆ ಒಳಗಾದರು. ಇಂತಹ ಆಕರ್ಷಣೆ ಕೋಮುವಾದಿಗಳಿಗೆ ನೆಲೆ ಸಿಗದಂತಾಗಬಹುದೆಂಬ ಕಾರಣಕ್ಕೆ ಹಿಂದುತ್ವವಾದಿಗಳು ಒಂದು ವಾರ ಕಾದು ಕುಳಿತು ರೋಗಿಯೊಬ್ಬರಿಗೆ ರಕ್ತದಾನ ಮಾಡಲು ಹೊರಟ ಸಂದರ್ಭ ಶ್ರೀನಿವಾಸ್ ಬಜಾಲ್ ಅವರನ್ನು ಕೊಂದರು,” ಎಂದು ಆರೋಪ ಮಾಡಿದರು.
ಸಂತೋಷ್ ಬಜಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಕೆ. ಇಮ್ತಿಯಾಜ್ ಸಭೆಯ ಅಧ್ಯಕ್ಷೀಯ ಭಾಷಣ ಮಾಡಿದರು. ಕಾರ್ಮಿಕ ಮುಖಂಡರಾದ ಸುಕುಮಾರ್, ಸಾಮರಸ್ಯ ಮಂಗಳೂರು ಸಂಚಾಲಕರಾದ ಮಂಜುಳಾ ನಾಯಕ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಡಿವೈಎಫ್ಐ ಜಿಲ್ಲಾ ಮುಖಂಡರಾದ ರಫೀಕ್ ಹರೇಕಳ, ಡಿವೈಎಫ್ಐ ನಗರ ಅಧ್ಯಕ್ಷರಾದ ನವೀನ್ ಕೊಂಚಾಡಿ , ಕಾರ್ಮಿಕ ಮುಖಂಡರಾದ ಜೆ ಬಾಲಕೃಷ್ಣ ಶೆಟ್ಟಿ , ಡಿವೈಎಫ್ಐ ನಗರ ಮುಖಂಡರಾದ ಜಗದೀಶ್ ಬಜಾಲ್ ಉಪಸ್ಥಿತರಿದ್ದರು.
ದೀಪಕ್ ಬಜಾಲ್ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಈ ಸಂದರ್ಭದಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಗಳಿಸಿದ ಮೂವರು ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದ ಕೊನೆಗೆ ಡಿವೈಎಫ್ಐ ಬಜಾಲ್ ಮುಖಂಡ ಧಿರಾಜ್ ಬಜಾಲ್ ವಂದಿಸಿದರು.