ಉಪ್ಪಿನಂಗಡಿ: ಉಪ್ಪಿನಂಗಡಿ ಸಮೀಪದ ಪಟ್ರಮೆ ಮೀಸಲು ಅರಣ್ಯದಲ್ಲಿ ಸಾರಂಗವನ್ನು ಕೊಂದಿದ್ದ ಮೂವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ಉಪ ವಲಯಾರಣ್ಯಾಧಿಕಾರಿ ಲೋಕೇಶ್, ಅಶೋಕ್, ಅರಣ್ಯ ಸಿಬ್ಬಂದಿ ವಿನಯ ಚಂದ್ರ ಮತ್ತು ಜೀಪ್ ಚಾಲಕ ಕಿಶೋರ್ ಅವರು ಕಪಿಲಾ ನದಿಯ ಬಳಿ ಬುಧವಾರ ರಾತ್ರಿ ಗಸ್ತು ತಿರುಗುತ್ತಿದ್ದರು. ಈ ವೇಳೆ ಗುಂಡಿನ ಸದ್ದು ಕೇಳಿ ಬಂದಿದ್ದು, ಸ್ಥಳಕ್ಕೆ ಧಾವಿಸಿದಾಗ ಸುದೇಶ, ಪುನಿತ್ ಮತ್ತು ಕೋಟಿಯಪ್ಪ ಸಾರಂಗವನ್ನು ಕೊಂದಿರುವುದು ತಿಳಿದು ಬಂದಿದೆ.
ಈ ನಿಟ್ಟಿನಲ್ಲಿ ಆರೋಪಿಗಳನ್ನು ವಲಯಾಧಿಕಾರಿ ಜಯಪ್ರಕಾಶ್ ಅವರ ಮುಂದೆ ಹಾಜರುಪಡಿಸಿದ್ದು, ಉಪ್ಪಿನಂಗಡಿ ವಲಯಾಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.