News Karnataka Kannada
Sunday, May 05 2024
ಮಂಗಳೂರು

ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರಿಂದ ದೂರು ಪ್ರಕರಣ ವಿಚಾರಣೆ

Lokayukta Justice K N Phanindra to hear the complaint case
Photo Credit : News Kannada

ಮಡಿಕೇರಿ: ಉಪ ಲೋಕಾಯುಕ್ತ ಕಾರ್ಯ ವ್ಯಾಪ್ತಿಗೆ ಒಳಪಡುವ ಹಲವು ಪ್ರಕರಣಗಳನ್ನು ದೂರುದಾರರು ಮತ್ತು ಎದುರುದಾರರ ಸಮ್ಮುಖದಲ್ಲಿ ಗೌರವಾನ್ವಿತ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಸೋಮವಾರ ವಿಚಾರಣೆ ನಡೆಸಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ವಿಚಾರಣೆ ಸಂದರ್ಭದಲ್ಲಿ ಮಾತನಾಡಿದ ಕೆ.ಎನ್.ಫಣೀಂದ್ರ ಅವರು 40 ದೂರುಗಳಲ್ಲಿ 22 ದೂರುಗಳು ಉಪ ಲೋಕಾಯುಕ್ತ ವ್ಯಾಪ್ತಿಗೆ ಸಂಬಂಧಿಸಿದ್ದು, ಈ ದೂರುಗಳನ್ನು ವಿಚಾರಣೆ ಮಾಡಲಾಗುವುದು ಎಂದರು.

ಉಪ ಲೋಕಾಯುಕ್ತ ವ್ಯಾಪ್ತಿಗೆ ಸಲ್ಲಿಕೆಯಾಗಿರುವ ದೂರುಗಳ ಸಂಬಂಧ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದು ಲೋಕಾಯುಕ್ತದ ಪ್ರಮುಖ ಉದ್ದೇಶವಾಗಿದೆ ಎಂದರು.

‘ಭೂಮಿಗೆ ಸಂಬಂಧಿಸಿದಂತೆ, ಸೌಲಭ್ಯಗಳನ್ನು ಕಲ್ಪಿಸದೆ ಬಡಾವಣೆಗಳ ನಿರ್ಮಾಣ, ಕೆರೆಗಳು ಮತ್ತು ದೇವರ ಕಾಡುಗಳ ಸಂರಕ್ಷಣೆ, ಭೂ ಒತ್ತುವರಿ ತೆರವುಗೊಳಿಸುವುದು, ಕಾಲ ಮಿತಿಯಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹರಿಸುವುದು ಮತ್ತಿತರ ಹಲವು ದೂರುಗಳಿಗೆ ವಿಚಾರಣೆ ನಡೆಸಿದ ಉಪ ಲೋಕಾಯುಕ್ತರು, ಕಾಲ ಮಿತಿಯಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಇತ್ಯರ್ಥಪಡಿಸಿ ವರದಿ ನೀಡುವಂತೆ ಉಪ ಲೋಕಾಯುಕ್ತರಾದ ಕೆ.ಎನ್.ಫಣೀಂದ್ರ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿದರು.’

ಆರಂಭದಲ್ಲಿ ಜಾಗ ಒತ್ತುವರಿಗೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು, ಸದ್ಯ ಪ್ರಕರಣ ಇತ್ಯರ್ಥವಾಗಿದೆ. ಮತ್ತೆ ಒತ್ತುವರಿಯಾದರೆ ಪೊಲೀಸ್ ಠಾಣೆಗೆ ದೂರು ನೀಡಿ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಉಪ ಲೋಕಾಯುಕ್ತರು ಆದೇಶಿಸಿದರು.

ಜಾಗದ ಖಾತೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು, ಕಾನೂನು ಪ್ರಕಾರ ಖಾತೆ ಮಾಡಿಕೊಡಬಹುದೇ ಇಲ್ಲವೇ ಎಂಬುದನ್ನು ಹಿಂಬರಹ ನೀಡಬೇಕು. ಅದನ್ನು ಬಿಟ್ಟು ಸತಾಯಿಸುವುದು ಸರಿಯಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಉಪ ಲೋಕಾಯುಕ್ತರು ಸೂಚಿಸಿದರು. ಈ ಕುರಿತು ಅಧಿಕಾರಿಗಳು ಮಾಹಿತಿ ನೀಡಿ, ಈಗಾಗಲೇ ಇತ್ಯರ್ಥ ಪಡಿಸಲಾಗಿದೆ ಎಂದು ತಿಳಿಸಿದರು.

ಎಚ್.ಎಸ್.ಅಶೋಕ್ ಎಂಬವರು ಕುಶಾಲನಗರದಲ್ಲಿ ಎಲ್ಲೆಂದರಲ್ಲಿ ಖಾಸಗಿ ಬಡಾವಣೆಗಳು ನಿರ್ಮಾಣವಾಗುತ್ತಿದ್ದು, ಕೆಲವು ಬಡಾವಣೆಗಳನ್ನು ಅನುಮತಿ ಪಡೆಯದೆ ನಿರ್ಮಿಸಲಾಗಿದೆ ಎಂದು ಉಪ ಲೋಕಾಯುಕ್ತರ ಗಮನಕ್ಕೆ ತಂದರು.
ಬಡಾವಣೆ ನಿರ್ಮಿಸುವಾಗ ರಸ್ತೆ, ಚರಂಡಿ, ಉದ್ಯಾನವನ ಹೀಗೆ ಹಲವು ಮೂಲ ಸೌಲಭ್ಯಗಳು ಒಳಗೊಂಡಿಲ್ಲ ಎಂದು ದೂರಿದರು.

ಉಪ ಲೋಕಾಯುಕ್ತರಾದ ಕೆ.ಎನ್.ಫಣೀಂದ್ರ ಅವರು ಜಿಲ್ಲಾಧಿಕಾರಿ ಅವರ ನ್ಯಾಯಾಲಯದಲ್ಲಿ ಈ ಪ್ರಕರಣ ಇರುವುದರಿಂದ ಎರಡು ತಿಂಗಳಲ್ಲಿ ಪ್ರಕರಣ ಇತ್ಯರ್ಥಪಡಿಸಲಿದ್ದಾರೆ ಎಂದು ತಿಳಿಸಿದರು.

ಹಾಗೆಯೇ ಗೋಣಿಕೊಪ್ಪದಲ್ಲೂ ಸಹ ನಾಗರಿಕ ಸೌಲಭ್ಯ ಕಲ್ಪಿಸದೆ ಹಾಗೂ ನಕ್ಷೆ ಅನುಮೋದನೆ ಪಡೆಯದೆ ಬಡಾವಣೆ ನಿರ್ಮಿಸಲಾಗಿದೆ ಎಂದು ವಿ.ಎಸ್.ಸೂರ್ಯ ಅವರು ದೂರಿದರು.

ಈ ಬಗ್ಗೆ ಉಪ ಲೋಕಾಯುಕ್ತರು ಎಂಜಿನಿಯರ್ ಕಳುಹಿಸಿ ಪರಿಶೀಲಿಸಲಿದ್ದು, ಬಳಿಕ ವರದಿ ತರಿಸಿಕೊಳ್ಳಲಾಗುವುದು ಎಂದು ಆದೇಶಿಸಿದರು. ಮತ್ತೊಬ್ಬ ದೂರುದಾರರು ನಿವೃತ್ತಿ ವೇತನ ಮಂಜೂರು ಮಾಡಿಸಿಕೊಡುವಂತೆ ದೂರು ಸಲ್ಲಿಸಿದ್ದರು. ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು ಕಾಲ ಮಿತಿಯಲ್ಲಿ ನಿವೃತ್ತಿ ವೇತನ ಭರಿಸಲಾಗುವುದು ಎಂದು ಹೇಳಿದರು.

ಉಪ ಲೋಕಾಯುಕ್ತ ವ್ಯಾಪ್ತಿಯಲ್ಲಿ ಸ್ವಯಂ ಪ್ರೇರಿತರಾಗಿ ದೂರು ದಾಖಲಾಗಿದ್ದು, ಆ ನಿಟ್ಟಿನಲ್ಲಿ ಭೂ ದಾಖಲೆಗೆ ಸಂಬಂಧಿಸಿದಂತೆ ಬಾಕಿ ಇರುವ ಪ್ರಕರಣಗಳನ್ನು ಒಂದು ತಿಂಗಳಲ್ಲಿ ಪರಿಹರಿಸುವಂತೆ ಉಪ ಲೋಕಾಯುಕ್ತರು ಸೂಚಿಸಿದರು.

ಜಿಲ್ಲೆಯಲ್ಲಿ ಹಲವು ಕಡೆಗಳಲ್ಲಿ ಒತ್ತುವರಿ ಆಗಿರುವ ಕೆರೆಗಳನ್ನು ಸಂರಕ್ಷಿಸಲಾಗಿದೆ. ಒತ್ತುವರಿ ಆಗಿರುವ ಬಾಕಿ ಕೆರೆಗಳನ್ನು ಸಂರಕ್ಷಿಸಬೇಕು ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಆದೇಶಿಸಿದರು.

ನಗರಸಭೆ ವ್ಯಾಪ್ತಿಯ ಸಬಿತಾ ಎಂಬವರು ರಿಮ್ಯಾಂಡ್ ಹೋಂ ಬಳಿ ಮನೆ ಇದ್ದು, ಮನೆಗೆ ಓಡಾಡಲು ತುಂಬಾ ತೊಂದರೆಯಾಗಿದೆ. ಈ ಬಗ್ಗೆ ನಗರಸಭೆಗೆ ಮನವಿ ಮಾಡಲಾಗಿದೆ ಎಂದು ಉಪ ಲೋಕಾಯುಕ್ತರ ಗಮನಕ್ಕೆ ತಂದರು. ಈ ಕುರಿತು ಸಮಸ್ಯೆ ಪರಿಹಾರವಾದ ನಂತರ ವರದಿ ಸಲ್ಲಿಸುವಂತೆ ಅಧಿಕಾರಿಗೆ ನಿರ್ದೇಶನ ನೀಡಿದರು.

‘ಗಾಳಿಬೀಡು ಗ್ರಾಮ ವ್ಯಾಪ್ತಿಯ ಹೇಮಾವತಿ ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ ಒಂದು ವಾರಕ್ಕೆ ಖಾತೆ ಮಾಡಿಕೊಟ್ಟರು ಎಂದು ಲೋಕಾಯುಕ್ತದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.’

ಕರ್ನಾಟಕ ಲೋಕಾಯುಕ್ತ ಜಿಲ್ಲಾ ರಿಜಿಸ್ಟ್ರಾರ್ ತನಿಖಾ ವಿಭಾಗದ ಹಿರಿಯ ನ್ಯಾಯಾಧೀಶರಾದ ಚೆನ್ನಕೇಶವ ರೆಡ್ಡಿ, ಕರ್ನಾಟಕ ಲೋಕಾಯುಕ್ತದ ಪಬ್ಲಿಕ್ ಪ್ರಾಸಿಕ್ಯೂಟರ್ ಡಿ.ನಾರಾಯಣ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಬಿ.ಪ್ರಸಾದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಎಂ.ಎ.ಅಯ್ಯಪ್ಪ, ಲೋಕಾಯುಕ್ತ ಎಸ್.ಪಿ. ಸುರೇಶ್ ಬಾಬು, ಮೈಸೂರು ಜಿಲ್ಲೆಯ ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರಾದ ಕೃಷ್ಣಯ್ಯ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು