ಉಳ್ಳಾಲ: ನಗರ ಪ್ರದೇಶಗಳಲ್ಲಿ ಒಂದೇ ಕಡೆ ಆಸ್ಪತ್ರೆ. ಆರೋಗ್ಯ ಕೇಂದ್ರಗಳ ಬದಲಿಗೆ ಆರೋಗ್ಯ ಸೇವೆಯನ್ನು ವಿಕೇಂದ್ರಿಕರಣಗೊಳಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಸ್ಥಳದಲ್ಲಿಯೇ ಆರೋಗ್ಯ ಸೇವೆ ನೀಡುವ ಉದ್ಧೇಶದೊಂದಿಗೆ ಆರಂಭಗೊಂಡಿರುವ ನಮ್ಮ ಕ್ಲಿನಿಕ್ನ ಸದುಪಯೋಗವನ್ನು ಎಲ್ಲಾ ನಾಗರಿಕು ಪಡೆಯುವಂತಾಗಬೇಕು ಎಂದು ಉಳ್ಳಾಲ ನಗರಸಭೆಯ ಮುಖ್ಯಾಧಿಕಾ ವಿದ್ಯಾ ಕಾಳೆ ತಿಳಿಸಿದರು.
ನಗರ ಪ್ರದೇಶಗಳಲ್ಲಿ ಸಾರ್ವಜನಿಕರ ಆರೋಗ್ಯ ಸಂಬಂಧಿಸಿದ ಸೇವೆಗಳಿಗೆ ರಾಜ್ಯ ಸರಕಾರ ರಾಜ್ಯದಾದ್ಯಂತ ಆರಂಬಿಸಿರುವ ಜನಸಾಮಾನ್ಯರ ಆರೋಗ್ಯ ಸಂಜೀವಿನಿ`ನಮ್ಮ ಕ್ಲಿನಿಕ್’ ಗೆ ಉಳ್ಳಾಲ ನಗರಸಭಾ ವ್ಯಾಪ್ತಿಯ ಪೆರ್ಮನ್ನೂರು ಕೆರೆಬೈಲ್’ನಲ್ಲಿ ಚಾಲನೆ ನೀಡಿ ಮಾತನಾಡಿದರು.
ನೂತನ ನಮ್ಮ ಕ್ಲಿನಿಕ್ನಲ್ಲಿ ಆರೋಗ್ಯ ಕೇಂದ್ರಗಳಲ್ಲಿ ಇರುವಂತೆ ವೈದ್ಯಾಧಿಕಾರಿಗಳು ಆರೋಗ್ಯ ಸಿಬಂದಿಗಳು ಕಾರ್ಯನಿವಹಿಸಲಿದ್ದು, ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಸೇವೆಗಳು ಉಚಿತವಾಗಿ ಲಭಿಸಲಿದ್ದು, ಸರಕಾರದ ಈ ಯೋಜನೆಯನ್ನು ಜನಸಾಮಾನ್ಯರು ಸದುಪಯೋಗಪಡಿಸಿಕೊಂಡು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ರೋಗಮುಕ್ತ ಜೀವನವನ್ನು ನಡೆಸುವಂತಾಗಬೇಕು ಎಂದರು.
ಉಳ್ಳಾಲ ನಗರಸಭಾ ಆಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನೂತನ ಕ್ಲಿನಿಕ್ಕ್ಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಉಳ್ಳಾಲಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ| ಸುನಿತ ನಮ್ಮ ಕ್ಲಿನಿಕ್ನ ವೈದ್ಯಾಧಿಕಾರಿ ಡಾ| ಶಾಹಿನಾ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.
ಭಗತ್ಸಿಂಗ್ ಪ್ರತಿಷ್ಠಾನದ ಅಧ್ಯಕ್ಷ ಜೀವನ್ ಕೆರೆಬೈಲ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು ಉಳ್ಳಾಲ ನಗರಸಭಾ ಸ್ಥಳೀಯ ಸದಸ್ಯ ರಾಜೇಶ್ ಯು.ಬಿ. ವಂದಿಸಿದರು.