ಉಳ್ಳಾಲ: ದೈವಸ್ಥಾನ ದ್ವಾರ ನಿರ್ಮಾಣಕ್ಕೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷನೇ ವಿರೋಧಿಸಿರುವ ಘಟನೆ ಸೋಮೇಶ್ವರ ಗ್ರಾಮದ ಮಲಯಾಳಕೋಡಿ ಶ್ರೀ ಮಲಯಾಳ ಚಾಮುಂಡಿ ದೈವಸ್ಥಾನದಲ್ಲಿ ನಡೆದಿದ್ದು, ಈ ಕುರಿತು ಗ್ರಾಮದ ಯುವಕರ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ಹಾಗೂ ಸಹಾಯಕ ಆಯುಕ್ತರಿಗೆ ಸಮಿತಿ ಅಧ್ಯಕ್ಷನೇ ದೂರು ನೀಡಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸೇರಿ ಪ್ರತಿಭಟನಾ ಸಭೆಯನ್ನು ದೈವಸ್ಥಾನದ ಚಾವಡಿಯಲ್ಲೇ ನಡೆಸಿ ಬಿಜೆಪಿ ಮುಖಂಡರ ಮುಂದೆ ಮೂರು ಬೇಡಿಕೆಗಳನ್ನಿರಿಸಿ , ಈಡೇರಿಸದೇ ಇದ್ದಲ್ಲಿ ಚುನಾವಣಾ ಬಹಿಷ್ಕಾರ ನಡೆಸುವ ತೀರ್ಮಾನ ಕೈಗೊಂಡಿದ್ದಾರೆ.
ಹಿಂದೆ ನೇಮ ನಿಂತಿದ್ದಾಗ ಗ್ರಾಮದ ಹಿರಿಯರು ಸೇರಿಕೊಂಡು ಎಲ್ಲರನ್ನು ಒಗ್ಗೂಡಿಸಿ ವರ್ಷದ ಪರ್ವವವನ್ನು ನಡೆಸಿದ ಇತಿಹಾಸವಿರುವ ದೈವಸ್ಥಾನ . ಕಳೆದ 20 ವರ್ಷಗಳಿಂದ ಯಾವುದೇ ವಿಘ್ನಗಳಿಲ್ಲದೆ ನಡೆಯುತ್ತಿದ್ದ ದೈವಸ್ಥಾನದ ಆಚರಣೆಗಳು ಇದೀಗ ನೂತನ ವ್ಯವಸ್ಥಾಪನಾ ಸಮಿತಿ ಅಸ್ತಿತ್ವಕ್ಕೆ ಬಂದ ನಂತರ ತೊಡಕುಗಳು ನಿರಂತರವಾಗಿ ಆಗುತ್ತಿದೆ. ಗ್ರಾಮದ 10 ಯುವಕರ ಮೇಲೆ ವಿವಿಧ ರೀತಿಯಲ್ಲಿ ಪ್ರಕರಣವನ್ನು ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
ಗೆಳೆಯರ ಬಳಗ ಸೇರಿಕೊಂಡು ದೈವಸ್ಥಾನಕ್ಕೆ ನಿರ್ಮಿಸಲು ಉದ್ದೇಶಿಸಿದ ದ್ವಾರದ ವಿಜ್ಞಾಪನಾ ಪತ್ರವನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರೇ ಬಿಡುಗಡೆಗೊಳಿಸಿದ್ದರು. ಆದರೆ ನಂತರ ಅದರ ವಿರುದ್ಧವೇ ಸ್ಥಳೀಯಾಡಳಿತ ಸೋಮೇಶ್ವರ ಪುರಸಭೆ ಹಾಗೂ ಸಹಾಯಕ ಆಯುಕ್ತರಿಗೆ ಕೆಡವಲು ದೂರನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರೇ ನೀಡಿರುವುದು ವಿಪರ್ಯಾಸ. ಈವರೆಗೆ ದೈವಸ್ಥಾನದ ಸುತ್ತಲಿನ ಗ್ರಾಮಸ್ಥರ ವಿರುದ್ಧವೇ 17 ದೂರುಗಳನ್ನು ದಾಖಲಿಸಲಾಗಿದೆ. ಇಂತಹ ಸಮಿತಿ ಹಾಗೂ ಅಸ್ತಿತ್ವಕ್ಕೆ ತಂದಿರುವ ಬಿಜೆಪಿ ಹಾಗೂ ಸಂಘಪರಿವಾರ ಕ್ರಮ ಸರಿಯಿಲ್ಲ. ಹಿಂದುತ್ವದ ಹೆಸರು ಹೇಳಿಕೊಂಡು ಹಿಂದೂಗಳನ್ನೇ ಒಡೆಯುವ ಕೆಲಸಗಳನ್ನು ಈ ಭಾಗದಲ್ಲಿ ಮಾಡಲಾಗುತ್ತಿದೆ. ಅವ್ಯವಹಾರದ ದೂರು ನೀಡುತ್ತಾ ಬಂದವರು, ಈವರೆಗೂ ವಾರ್ಷಿಕ ಲೆಕ್ಕ ಪತ್ರದ ಮಂಡನೆ ಮಾಡದೇ, ನೂತನ ಸಮಿತಿಯಿಂದ ಒಂದು ಸಭೆ ಕೂಡಾ ನಡೆಸಿಲ್ಲ.
ಗ್ರಾಮಸ್ಥರು ಹಾಗೂ ಸೇವಾ ಸಮಿತಿ ವತಿಯಿಂದ ಕ್ಷೇತ್ರದಲ್ಲಿ ಇರಿಸಲಾದ ಪ್ರಶ್ನಾ ಚಿಂತನೆಯನ್ನು ಕೂಡ ಮುಂದುವರಿಸಲು ಬಿಟ್ಟಿಲ್ಲ. ಗ್ರಾಮದ ಯುವಕರ ಮೇಲಿನ ಪ್ರಕರಣ ಕೈಬಿಡಬೇಕು, ಸ್ವಾಗತ ದ್ವಾರ ನಿರ್ಮಾಣದ ವಿರುದ್ಧದ ದೂರು ಹಿಂಪಡೆಯಬೇಕು ಹಾಗೂ ಸಮಿತಿಯಲ್ಲಿರುವ ಲೊಕೇಶ್ ದೇಲಂಪಾಡಿ ಅನ್ನುವ ವ್ಯಕ್ತಿಯನ್ನು ವಜಾಗೊಳಿಸಬೇಕು. ಈ ಮೂರು ಬೇಡಿಕೆಗಳನ್ನು ಈಡೇರಿಸದೇ ಇದ್ದಲ್ಲಿ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಗ್ರಾಮದ ನಾಯಕರು ರಾಜೀನಾಮೆಯನ್ನು ನೀಡುವುದಲ್ಲದೆ, ಮುಂಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕಾರಗೊಳಿಸುವ ಎಚ್ಚರಿಕೆಯನ್ನು ನೀಡಿದರು.
ಗ್ರಾಮಸ್ಥರುಗಳಾದ ಪ್ರಶಾಂತ್ ಗಟ್ಟಿ, ಸೇವಾ ಸಮಿತಿ ಅಧ್ಯಕ್ಷ ಸೀತಾರಾಮ ಕರ್ಕೇರ, ಮಾಜಿ ಮೊಕ್ತೇಸರ ಶ್ರೀಧರ್, ಮಹಾಬಲ ಶೆಟ್ಟಿ, ಲಕ್ಷ್ಮಣ್ ಶೆಟ್ಟಿ, ಗೆಳೆಯರ ಬಳಗ ಮಲಯಾಳಕೋಡಿ ಅಧ್ಯಕ್ಷ ಧೀರಜ್ ಗಟ್ಟಿ, ಮಹಿಳಾ ಮಂಡಳಿ ಅಧ್ಯಕ್ಷೆ ಭಾರತಿ, ಶೇಖರ್ ಕನೀರುತೋಟ, ನವೀನ ಕನೀರುತೋಟ, ಪ್ರಫುಲ್ಲಾದಾಸ್ ಕನೀರುತೋಟ, ಪುರುಷೋತ್ತಮ್ ಗಟ್ಟಿ ಹಾಗೂ ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಮುಖಂಡ ಚಂದ್ರಶೇಖರ್ ಉಚ್ಚಿಲ್ ಹಾಗೂ ಬಿಜೆಪಿ ವಿಸ್ತಾರಕ ಮಧುಸೂದನ್ ನಾಯರ್ ಸಂಧಾನ ಪ್ರಕ್ರಿಯೆಗೆ ಭೇಟಿ ನೀಡಿದ್ದರು.
ದೈವಸ್ಥಾನದ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ. ಗ್ರಾಮಸ್ಥರಿಗೆ ನ್ಯಾಯ ದೊರಕಿಸಿಕೊಡುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇನೆ. ತನ್ನ ಮುಂದಿಟ್ಟಿರುವ ಗ್ರಾಮದ ಜನರು ನೊಂದಿರುವ ವಿಚಾರಗಳನ್ನು ಪಕ್ಷದ ವರಿಷ್ಠರ ಗಮನಕ್ಕೆ ತರುತ್ತೇನೆ. ಶೀಘ್ರವೇ ಎಲ್ಲರೂ ಒಗ್ಗಟ್ಟಿನಿಂದ ಇದ್ದು, ದೈವಸ್ಥಾನದ ಆಚರಣೆಗಳು ಹಿಂದಿನಂತೆ ಸರಾಗವಾಗಿ ನಡೆಯುವಂತೆಲ್ಲಾ ರೀತಿಯ ಪ್ರಯತ್ನವನ್ನು ಕೈಮೀರಿ ಮಾಡುತ್ತೇನೆ ಎಂದು ಮಂಗಳೂರು ಬಿಜೆಪಿ ಮಂಡಲ ಅಧ್ಯಕ್ಷರ ಚಂದ್ರಹಾಸ್ ಪಂಡಿತ್ ಹೌಸ್ ಹೇಳಿದರು.
ವ್ಯವಸ್ಥಾಪನಾ ಸಮಿತಿ ಅಸ್ತಿತ್ವಕ್ಕೆ ಬಂದಿರುವುದು ಸ್ವಾಗತಾರ್ಹ. ಸಮಿತಿಯಲ್ಲಿರುವ ಪ್ರಮುಖರು ಗ್ರಾಮದವರೇ ಆಗದೇ ಇರುವುದು ವಿಶೇಷ. ದೈವಸ್ಥಾನದಲ್ಲಿ ನಡೆಯುತ್ತಿದ್ದ ಕಟ್ಟುಕಟ್ಟಳೆಗಳ ಕುರಿತು ಜ್ಞಾನವೇ ಇಲ್ಲದವರು ಆರಾಧನಾ ವಿಚಾರಗಳನ್ನು ಬದಲಾಯಿಸಲು ಮುಂದಾಗುತ್ತಿರುವುದು ಸರಿಯಲ್ಲ. ಐತಿಹ್ಯ ಇರುವ ಕ್ಷೇತ್ರದಲ್ಲಿ ಹಿರಿಯರ ಶ್ರಮ ಬಹಳಷ್ಟಿದೆ. ಅವರಿಂದ ಯಾವುದೇ ಸಲಹೆಗಳನ್ನು ಪಡೆದುಕೊಳ್ಳದೇ, ಒಗ್ಗಟ್ಟಿನಲ್ಲಿದ್ದ ಗ್ರಾಮದ ಜನರ ಮೇಲೆ ದಬ್ಬಾಳಿಕೆ ಕ್ರಮ ಸರಿಯಲ್ಲ ಎಂದು ಗ್ರಾಮಸ್ಥರಾದ ಪ್ರಶಾಂತ್ ಗಟ್ಟಿ ಹೇಳಿದರು.
ದೈವದ ಅಪ್ಪಣೆಯನ್ನು ಪಡೆದುಕೊಂಡು ದ್ವಾರ ನಿರ್ಮಾಣಕ್ಕೆ ಗೆಳೆಯರ ಬಳಗ ಮುಂದಾಗಿದೆ. ದೇಣಿಗೆ ಸಂಗ್ರಹಿಸದೇ ದ್ವಾರ ನಿರ್ಮಿಸುತ್ತಿದ್ದೇವೆ, ಗ್ರಾಮದ ಜನ ಅವರಾಗಿಯೇ ದೇಣಿಗೆ ನೀಡಿದ್ದಾರೆ. ಬಳಗ ಯಾರ ಮುಂದೆಯೂ ಹೋಗಿ ಹಣ ಕೇಳಲಿಲ್ಲ. ರೂ. 5 ಲಕ್ಷ ವೆಚ್ಚದಲ್ಲಿ ದ್ವಾರ ನಿರ್ಮಾಣವಾಗುತ್ತಿದೆ. ಎಷ್ಟೇ ಕಷ್ಟ ಎದುರಾದರೂ ದ್ವಾರ ನಿರ್ಮಿಸಿಯೇ ಸಿದ್ಧ ಎಂದು ಗೆಳೆಯರ ಬಳಗ ಅಧ್ಯಕ್ಷರ ಧೀರಜ್ ಗಟ್ಟಿ ಹೇಳಿದರು.
ಹೊರಗಿನ ಗ್ರಾಮದಿಂದ ಬಂದು ಇಲ್ಲಿ ಜಾಗ ಖರೀದಿಸಿದವರು ಮೂಲ ಗ್ರಾಮಸ್ಥರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. 21 ವರ್ಷಗಳಿಂದ ಮಾಡಿರುವ ಲೆಕ್ಕಪತ್ರದಲ್ಲಿ ಗೊಂದಲವಿರಲಿಲ್ಲ. ಇದೀಗ ಏಕಾಏಕಿ ಗೊಂದಲಗಳು ಕಂಡುಬರುತ್ತಿವೆ. ದೈವಸ್ಥಾನದ ಚಾಕರಿ ವರ್ಗದವರನ್ನು ಕಡೆಗಣಿಸಿದ ವ್ಯವಸ್ಥಾಪನಾ ಸಮಿತಿ, ತಮ್ಮ ಜವಾಬ್ದಾರಿಯನ್ನೇ ಅರಿತಿಲ್ಲ . ಸಂಕ್ರಮಣ ಪೂಜೆ , ವಾರದ ಪೂಜೆಗೆ ಬಾರದ ಸಮಿತಿಯವರು ದೈವಸ್ಥಾನದ ಮೇಲೆ ನಿಯಂತ್ರಣ ಹೇರುವುದರಲ್ಲಿ ಅರ್ಥವಿಲ್ಲ. ಎ.9 ರಂದು ದ್ವಾರದ ಉದ್ಘಾಟನೆ ನಡೆಸಿಯೇ ಸಿದ್ಧ. ಸಂಘದ ಹಿರಿಯರಿಗೆ , ಬಿಜೆಪಿ ಮುಖಂಡರಿಗೆ ಹಲವು ಬಾರಿ ದೂರು ನೀಡಿದ್ದರೂ ಪ್ರಯೋಜನವಿಲ್ಲ. ಅದಕ್ಕಾಗಿ ಇಂತಹ ಸಭೆಯನ್ನು ನಡೆಸುವುದು ಅನಿವಾರ್ಯವಾಗಿದೆ. ಸಂಘಪಪರಿವಾರದ ಗೋಪಾಲ್ ಕುತ್ತಾರ್ ಅವರೇ ಇಡೀ ಅವ್ಯವಸ್ಥೆಗೆ ಕಾರಣರಾಗಿದ್ದಾರೆ ಎಂದು ಗ್ರಾಮಸ್ಥರಾದ ಶೇಖರ್ ಕನೀರುತೋಟ ಹೇಳಿದರು.