ಉಜಿರೆ: ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ ಪರಿಸರದಲ್ಲಿ ಯಕ್ಷಗುರು ಮೋಹನ ಬೈಪಾಡಿತ್ತಾಯ ಅವರು ಕಳೆದ 8 ವರ್ಷಗಳಿಂದ ಉಜಿರೆಯಲ್ಲಿ ಶ್ರೀ ಜನಾರ್ದನ ಸ್ವಾಮಿ ಯಕ್ಷಗಾನ ಕಲಿಕಾ ಕೇಂದ್ರದ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ಯಕ್ಷಗಾನ ಹಾಡುಗಾರಿಕೆ, ಮದ್ದಳೆ ವಾದನ ಹಾಗು ಚೆಂಡೆವಾದನವನ್ನು ಕಲಿಸಿಕೊಂಡು ಬರುತ್ತಿದ್ದು ವಿದ್ಯಾರ್ಥಿಗಳ ರಂಗಪ್ರವೇಶ ಹಾಗು ಗುರುವಂದನೆ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಜೂ 26 ರಂದು ಉಜಿರೆ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ಹಮ್ಮಿಕೊಂಡಿದ್ದರು.
ಕೇಂದ್ರದಲ್ಲಿ ಕಲಿತ ವಿದ್ಯಾರ್ಥಿಗಳು ಹಾಡುಗಾರಿಕೆ,ಮದ್ದಳೆವಾದನ ಹಾಗು ಚೆಂಡೆವಾದನದ ಮೂಲಕ ರಂಗಪ್ರವೇಶ ಕಾರ್ಯಕ್ರಮ ನಡೆಸಿಕೊಟ್ಟರು. ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಪ್ರತಿ ವಿದ್ಯಾರ್ಥಿ ಯಕ್ಷಗುರು ಮೋಹನ ಬೈಪಾಡಿತ್ತಾಯ ಅವರಿಗೆ ಗುರುಕಾಣಿಕೆ,ಫಲತಾಂಬೂಲ ಗೌರವ ಸಮರ್ಪಿಸಿ ಆಶೀರ್ವಾದ ಪಡೆದುಕೊಂಡರು.
ಮೃದಂಗ,ಚೆಂಡೆ ಹಾಗು ಭಾಗವತಿಕೆ ರಂಗಪ್ರವೇಶ ಕಾರ್ಯಕ್ರಮದಲ್ಲಿ ರತನ್ ಕಳ್ಮಂಜ ,ಸಮರ್ಥ ಶಿವಾಜಿನಗರ, ಸಮರ್ಥ್ ಆರ್ .ಹೊಳ್ಳ , ಓಜಸ್ವಿ , ಕಾರ್ತಿಕ್ ನಾವಡ ಬಳ್ಳಮಂಜ ,ಧನುಷ್ ಕನ್ಯಾಡಿ ,ಶಮಂತ್ ರಾಜ್ ಕಕ್ಕೆಪದವು , ಡಾ|ಸೂರ್ಯನಾರಾಯಣ ಮಡವು ,ಸುಧನ್ವ,ಯೋಗೀಶ್ ಆಚಾರ್ಯ ಮದ್ದಡ್ಕ, ಪ್ರಮುಖ್ ತುಳುಪುಳೆ , ಸ್ವರೂಪ್, ಶ್ರೀಕರ ಕಕ್ರಣ್ಣಾಯ ,ಭಾರವಿ ಬೆಳಾಲು ,ಸಂಧ್ಯಾ ,ಅವನೀಶ್ ಕಾಂತಾಜೆ,ಉದಯಕುಮಾರ್ ಜೈನ್ ಮಧ್ವ , ಶ್ರೀವಿದ್ಯಾ ಐತಾಳ್, ಸಿಂಚನ ಧರ್ಮಸ್ಥಳ ಮೊದಲಾದವರು ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿ ಕಲಾಭಿಮಾನಿಗಳ ಮೆಚ್ಚುಗೆ ಪಡೆದರು.
ಭವ್ಯಶ್ರೀ ಹೊಳ್ಳ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು. ಯಕ್ಷಜನ ಸಭಾ ಅಧ್ಯಕ್ಷ ಡಾ| ಎಂ.ಎಂ.ದಯಾಕರ್ ,ಜನಾರ್ದನ ತೋಳ್ಪಡಿತ್ತಾಯ,ವೆಂಕಟ್ರಮಣ ರಾವ್ ಮೊದಲಾದವರು ಉಪಸ್ಥಿತರಿದ್ದರು