ನಿತ್ಯ ಕಲಿಯುವ ಆಸಕ್ತಿಇದ್ದವರಿಗೆ ಉಜ್ವಲ ಭವಿಷ್ಯ:ಡಾ ಹೆಗ್ಗಡೆ
ಬೆಳ್ತಂಗಡಿ: ನುರಿತ ಅನುಭವಿಗಳಿಂದ ತರಬೇತಿ ನೀಡಿ ಇಲ್ಲಿನ ವಿದ್ಯಾರ್ಥಿಗಳನ್ನು ಯಶಸ್ವಿ ಉದ್ಯಮಿಗಳನ್ನು ಮಾಡುವುದು ರುಡ್ ಸೆಟ್ ನ ವಿಶೇಷವಾಗಿದೆ.ಎಲ್ಲವು ಕಲಿತಿದ್ದೇನೆ ಎಂಬ ಅಹಂ ಇದ್ದವರಿಗೆ ಭವಿಷ್ಯವಿಲ್ಲ.ಯಾರು ನಿತ್ಯಕಲಿಕೆಯಲ್ಲಿ ಆಸಕ್ತಿ ವಹಿಸುತ್ತಾರೋ ಅವರಿಗೆ ಉಜ್ವಲ ಭವಿಷ್ಯ ಇದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಬುದವಾರಉಜಿರೆ ರುಡ್ ಸೆಟ್ ಸಂಸ್ಥೆ ಹಾಗೂ ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರುಡ್ ಸೆಟ್ ನಲ್ಲಿ 3 ದಿನ ನಡೆದ ರಾಜ್ಯಮಟ್ಟದ ಬ್ಯೂಟೀಶಿಯನ್ ಗಳ ಉನ್ನತ ಕೌಶಲ್ಯದ ತರಬೇತಿ ಬಳಿಕ ನಡೆದ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪ್ರಮಾಣಪತ್ರ ವಿತರಿಸಿ ಆಶೀರ್ವದಿಸಿದರು.
ಜೀವನದಲ್ಲಿ ಅನೇಕ ಕಷ್ಡಗಳನ್ನು ಎದುರಿಸಿ ಬಡತನದ ಕುಟುಂಬದಿಂದ ಬಂದು ಏನಾದರು ಕಲಿತು ಮುಂದೆ ಬರಬೇಕು ಎನ್ನುವವರಿಗೆ ರುಡ್ ಸೆಟ್ ನ ಮೂವತ್ತು ದಿನದ ತರಬೇತಿ ಸಾಕು ಎಂಬುದನ್ನು ಇಲ್ಲಿನ ಸಾವಿರಾರು ವಿದ್ಯಾರ್ಥಿಗಳ ಸಾದನೆಯನ್ನು ನೋಡಿದ್ದೇನೆ.ಇಂದು ಪ್ರಮಾಣ ಪತ್ರ ಪಡೆದವರು ಇನ್ನಷ್ಟು ದೊಡ್ಡ ಸಾಧನೆ ಮಾಡಬೇಕು.ಇಲ್ಲಿ ಅಂತರಾಷ್ಟೀಯ ಸಾಧಕರಿಂದ ತರಬೇತಿ ಸಿಕ್ಕಿರುವುದು ನಿಮ್ಮ ಭಾಗ್ಯ ಎಂದರು.
ಬಾಲಿವುಡ್ ಚಲನಚಿತ್ರ ನಿರ್ದೇಶಕ, ಪದ್ಮಶ್ರೀ ಪುರಸ್ಕೃತ ಮಧೂರ್ ಭಂಡಾರ್ಕರ್ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಯುವ ಸಮುದಾಯ ಉತ್ತಮ ಕೌಶಲ್ಯ ಹೊಂದಿದ್ದಾರೆ. ನಿಮ್ಮ ಕೌಶಲ್ಯವೇ ನಿಮ್ಮ ವೃತ್ತಿ ಬದುಕಿನ ಆಶ್ರಯವಾಗಿದೆ ಎಂದು ಶಿಬಿರಾರ್ಥಿಗಳಿಗೆ ಶುಭಹಾರೈಸಿದರು.
ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಡಾ.ಶಿವರಾಮ ಕೆ.ಭಂಡಾರಿ ಮಾತನಾಡಿ, ಪರಿಶ್ರಮದಿಂದ ಸಾಧಿಸಿದ ಎಲ್ಲ ವೃತ್ತಿಗಳು ಯಶಸ್ಸನ್ನು ನೀಡುತ್ತದೆ. ವೃತ್ತಿಯನ್ನು ಪ್ರೀತಿಸಿದರೆ ಅದು ನಮಗೆ ಗೌರವ ನೀಡುತ್ತದೆ ಎಂದು ಹೇಳಿದರು.
ರುಡ್ ಸೆಟ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಗಿರಿಧರ್ ಕಲ್ಲಾಪುರ್, ಬರೋಡ ತುಳುಕೂಟ ಅಧ್ಯಕ್ಷ ಹಾಗೂ ಉದ್ಯಮಿ ಶಶಿಧರ್ ಬಿ.ಶೆಟ್ಟಿ, ಮುಂಬೈ ಉದ್ಯಮಿ, ಭಂಡಾರಿ ಮಹಾಮಂಡಳ ಅಧ್ಯಕ್ಷ ಸುರೇಶ್ ಭಂಡಾರಿ, ಶಿವಾಸ್ ಕಂಪೆನಿ ನಿರ್ದೇಶಕಿ ಅನುಶ್ರೀ ಶಿವರಾಮ್ ಭಂಡಾರಿ, ತರಬೇತುದಾರರಾದ ಶ್ವೇತಾ ಭಂಡಾರಿ ಉಪಸ್ಥಿತರಿದ್ದರು.
ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಉನ್ನತ ಕೌಶಲ್ಯ ತರಬೇತಿ ಪಡೆದ ಕರ್ನಾಟಕದ 7 ರುಡ್ ಸೆಟ್ ಕೇಂದ್ರಗಳ 60 ಮಂದಿ ಬ್ಯುಟಿಪಾರ್ಲರ್ ಉದ್ಯಮಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಧಾರವಾಡದ ಪುಷ್ಪಾ ಅವರು ರುಡ್ ಸೆಟ್ ಸಂಸ್ಥೆಯು ಸೋತು ಬಂದವರಿಗೆ ಸಾಧನೆಯ ಬ್ರಹ್ಮಸ್ಥಳವಾಗಿದೆ ಎಂದು ಶಿಬಿರದ ಅನುಭವ ವ್ಯಕ್ತಪಡಿಸಿದರು. ಮೂಡುಬಿದ್ರೆಯ ಸುನಿಲ್, ಯಲ್ಲಪ್ಪ, ಚಿತ್ರದುರ್ಗಾದ ಶ್ವೇತಾ ರಾಣಿ ಆರ್., ಬೆಂಗಳೂರಿನ ಹರ್ಷಿತಾ ಕೆ.ಎನ್. ಅನುಭವ ಹಂಚಿಕೊಂಡರು.
ಉಜಿರೆ ರುಡ್ ಸೆಟ್ ಸಂಸ್ಥೆಯ ನಿರ್ದೇಶಕ ಎಂ.ಸುರೇಶ್ ಸ್ವಾಗತಿಸಿದರು. ರುಡ್ ಸೆಟ್ ಸಂಸ್ಥೆಯ ಹಿರಿಯ ತರಬೇತುದಾರ ಅಬ್ರಾಹಂ ಜೇಮ್ಸ್ ಪಿ.ವಿ. ವಂದಿಸಿದರು. ಹಿರಿಯ ತರಬೇತುದಾರೆ ಅನುಸೂಯ ಕಾರ್ಯಕ್ರಮ ನಿರೂಪಿಸಿದರು.