ಬೆಳ್ತಂಗಡಿ: ಉಜಿರೆ – ಚಾರ್ಮಾಡಿ ಮುಖ್ಯ ರಸ್ತೆ ಬಳಿಯಲ್ಲಿರುವ ಹಮೀದ್ ಎಂಬವರ ಬೆಡ್ ಮಾರ್ಟ್ನ (ಹಾಸಿಗೆ ಅಂಗಡಿ) ಹತ್ತಿ ದಾಸ್ತಾನು ಗೋದಾಮಿನಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಸಮೀಪದ ನಾಲ್ಕು ಅಂಗಡಿಗಳಿಗೆ ಬೆಂಕಿ ಹರಡಿ ಲಕ್ಷಾಂತರ ರೂ. ಮೌಲ್ಯದ ಹಾನಿ ಉಂಟಾಗಿದೆ.
ಹತ್ತಿ ದಾಸ್ತಾನು ಬೆಂಕಿಗೆ ಆಹುತಿಯಾಗಿದ್ದು, ಅಲ್ಲಿಂದ ಹರಡಿದ ಬೆಂಕಿ ರಾಮ ಎಂಬವರ ಬೇಕರಿ,ಯೋಗೀಶ್ ಅವರ ಬಟ್ಟೆ ಅಂಗಡಿ, ಅಶ್ರಫ್ ಎಂಬವರ ಮೊಬೈಲ್ ಅಂಗಡಿ ಹಾಗೂ ವಿಜಯ ಎಂಬವರ ತರಕಾರಿ ಅಂಗಡಿಗಳಿಗೆ ವ್ಯಾಪಿಸಿ ಹಾನಿ ಉಂಟಾಗಿದೆ.
ಬೆಂಕಿ ಪಸರಿಸುತ್ತಿರುವುದು ತಕ್ಷಣ ಗಮನಕ್ಕೆ ಬಂದಿದ್ದು ಹೆಚ್ಚಿನ ಹಾನಿ ಉಂಟಾಗುವುದನ್ನು ತಪ್ಪಿಸಲು ಉಜಿರೆಯ ಉದ್ಯಮಿಗಳು,ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯರು ತಕ್ಷಣ ನೆರವಾಗಿದ್ದಾರೆ. ಇದರಿಂದ ಸಂಭವನೀಯ ಭಾರಿ ದುರಂತ ತಪ್ಪಿಸಲು ಸಹಕಾರಿಯಾಯಿತು. ಅಂಗಡಿಗಳು ಹೆದ್ದಾರಿ ಬದಿಯಿದ್ದು ಕೊಂಚ ಹೊತ್ತು ಟ್ರಾಫಿಕ್ ಜಾಮ್ ಉಂಟಾಯಿತು.
20 ದಿನಗಳಲ್ಲಿ 2ನೇ ದುರಂತ
ಉಜಿರೆಯ ಅನುಗ್ರಹ ಶಾಲೆಯ ಮುಂಭಾಗ ಆ.31 ರಂದು ಅಗ್ನಿ ಅನಾಹುತ ಉಂಟಾಗಿ ಹಾರ್ಡ್ ವೇರ್ ಹಾಗೂ ಟಯರ್ ಅಂಗಡಿಗಳು ಆಹುತಿಯಾಗಿ ಸುಮಾರು ಒಂದೂವರೆ ಕೋಟಿ ರೂ. ಮೌಲ್ಯದ ಸೊತ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿದೆ. ಈ ಅಂಗಡಿಗಳನ್ನು ಮರು ನಿರ್ಮಿಸಲು ಹೋರಾಟ ನಡೆಯುತ್ತಿದ್ದು ಇನ್ನೂ ಕೂಡ ಇಲ್ಲಿ ಸ್ವಚ್ಛತೆ ಕಾಮಗಾರಿ ನಡೆಯುತ್ತಿದೆ. ಇಲ್ಲಿಂದ ಕೇವಲ 800 ಮೀ. ದೂರದ ಜನ ವಾಹನ ನಿಬಿಡ ಪ್ರದೇಶದಲ್ಲಿ ಮಂಗಳವಾರ ನಡೆದಿರುವ ಈ ಅಗ್ನಿ ಅನಾಹುತದಿಂದ ಮತ್ತೆ ಹೆಚ್ಚಿನ ಆತಂಕ ಉಂಟಾಗಿದೆ.
ಸಕಾಲಿಕ ಸ್ಪಂದನೆ
ಉಜಿರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ, ಉಪಾಧ್ಯಕ್ಷ ರವಿಕುಮಾರ್ ಬರೆಮೇಲು,ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ, ಸದಸ್ಯರು ಹಾಗೂ ಸಿಬ್ಬಂದಿ ವರ್ಗದ ಸಕಾಲಿಕ ಸ್ಪಂದನೆಯು ಬೆಂಕಿಯನ್ನು ತಕ್ಷಣ ಹತೋಟಿಗೆ ತರಲು ಸಹಕಾರಿಯಾಯಿತು.
ಅಂಗಡಿಗಳ ಸಮೀಪವೇ ಹಾದುಹೋಗಿರುವ ಪಂಚಾಯಿತಿಯ ನೀರಿನ ಪೈಪ್ ಲೈನ್ ನ್ನು ತುಂಡರಿಸಿ ಅಂಗಡಿಗಳಿಗೆ ನೀರು ಹಾಯಿಸಿ ಬೆಂಕಿಯನ್ನು ಹತೋಟಿಗೆ ತರಲಾಯಿತು.ಬಳಿಕ ಎರಡು ಅಗ್ನಿಶಾಮಕ ವಾಹನಗಳು ಆಗಮಿಸಿ ಕಾರ್ಯಾಚರಣೆ ನಡೆಸಿದವು.
ಪೋಲಿಸ್ ಇಲಾಖೆ ಸಹಕಾರ ನೀಡಿತು.ರಾಜ್ಯ ಅಧಿವೇಶನದಲ್ಲಿ ಪಾಲ್ಗೊಂಡಿರುವ ಶಾಸಕ ಹರೀಶ್ ಪೂಂಜ ಘಟನೆಯ ಕುರಿತು ತಿಳಿಯುತ್ತಿದ್ದಂತೆ ದೂರವಾಣಿ ಮೂಲಕ ಮಾಹಿತಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ.