ಬೆಳ್ತಂಗಡಿ : ಇಲ್ಲಿನ ಉಜಿರೆಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜಿನ ರಾಷ್ಟ್ರೀಯ ಸ್ವಯಂ ಸೇವಾ ಯೋಜನಾ ಘಟಕದ ವತಿಯಿಂದ ಧರ್ಮಸ್ಥಳದಿಂದ ಉಜಿರೆಯವರೆಗೆ ಫಿಟ್ ಇಂಡಿಯಾ ಫ್ರೀಡಂ ರನ್ 3.0 ಮ್ಯಾರಥಾನ್ ಶನಿವಾರ ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ, ಬೆಳಿಗ್ಗೆ 6 ಗಂಟೆಗೆ ಧರ್ಮಸ್ಥಳದ ಮುಖ್ಯ ದ್ವಾರದ ಬಳಿ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ್ ಶೆಟ್ಟಿ ಈ ಜಾಗೃತಿ ಓಟಕ್ಕೆ ಚಾಲನೆ ನೀಡಿದರು.
ಸತತ 9 ಕಿಲೋಮೀಟರ್ ವರೆಗೆ ನಡೆದ ಈ ಓಟದಲ್ಲಿ ಕಾಲೇಜಿನ ತೃತೀಯ ವರ್ಷದ ವಿದ್ಯಾರ್ಥಿ ಜಿತೇಂದ್ರ 27 ನಿಮಿಷದೊಳಗೆ ಓಟವನ್ನು ಮುಗಿಸಿ ಪುರುಷರ ವಿಭಾಗದಲ್ಲಿ ಮತ್ತು ಮಹಿಳೆಯರ ವಿಭಾಗದಲ್ಲಿ ಪ್ರಥಮ ವರ್ಷದ ಶ್ರೇಯಾ ರಾವ್ ಪ್ರಥಮ ಬಹುಮಾನ ಪಡೆದರು.
ಕಾಲೇಜಿನ ಶಿಕ್ಷಕ ವೃಂದ ಶಿಕ್ಷಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಸೇರಿ ಸುಮಾರು 200 ಸ್ಪರ್ದಿಗಳು ಓಟದಲ್ಲಿ ಭಾಗವಹಿಸಿದ್ದರು.
ಶಾಂತಿವನ ಟ್ರಸ್ಟ್ ನ ಕಾರ್ಯದರ್ಶಿ ಸೀತಾರಾಮ ತೋಳ್ಪಡಿತ್ತಾಯ, ಶಾಂತಿವನದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ್ ಶೆಟ್ಟಿ, ರಾಷ್ಟ್ರೀಯ ಸ್ವಯಂಸೇವಾ ಯೋಜನಾ ಘಟಕದ ಅಧಿಕಾರಿಗಳಾದ ಜೋಶ್ನಾ ,ಉಪೇಂದ್ರ, ಧರ್ಮೇಂದ್ರ ಮುಂತಾದವರು ಕಾರ್ಯಕ್ರಮದಲ್ಲಿ ಇದ್ದರು.