ಉಜಿರೆ: “ಹಿಂದಿ ಭಾಷೆಯು ದೇಶದ ಏಕತೆ ಮತ್ತು ಅಖಂಡತೆಯ ಸೇತುವಿನಂತೆ ನಮ್ಮನ್ನೆಲ್ಲ ಬೆಸೆಯುವ ಭಾಷೆಯಾಗಿದೆ” ಎಂದು ಉಜಿರೆ ಎಸ್.ಡಿ.ಎಂ. ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಬಿ.ಎ. ಕುಮಾರ ಹೆಗ್ಡೆ ಅಭಿಪ್ರಾಯಪಟ್ಟರು.
ಕಾಲೇಜಿನ ಹಿಂದಿ ವಿಭಾಗದ ವತಿಯಿಂದ ಸೆ.14ರಂದು ಬಿ.ಎಡ್. ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಹಿಂದಿ ದಿವಸ ಸಮಾರಂಭ’ದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸ್ತುತ ಹಲವು ಭಾಷೆಗಳನ್ನು ಕಲಿಯುವುದು ಅಗತ್ಯ. ಹಿಂದಿ ಭಾಷೆಯು ದೇಶವನ್ನು ಒಂದಾಗಿ ಬೆಸೆಯುವ ಭಾಷೆಯಾಗಿದ್ದು, ಆ ಭಾಷೆಯನ್ನೂ ಕಲಿಯುವುದು ಬಹಳ ಉಪಯುಕ್ತ ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉಜಿರೆ ಶಾಖಾ ಪ್ರಬಂಧಕಿ ಪ್ರವೀಣಾ ಅವರು ಮಾತನಾಡಿ, ಪದವಿ ಪಡೆದು ಕಾಲೇಜಿನಿಂದ ಹೊರಹೋಗುವ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ಇತ್ಯಾದಿ ಕ್ಷೇತ್ರಗಳಲ್ಲಿ ಉದ್ಯೋಗಕ್ಕಾಗಿ ರಾಜ್ಯದಿಂದ ಹೊರಗೆ ಹೋಗುವಾಗ ಹಿಂದಿ ಭಾಷೆಯ ಅಗತ್ಯ ಉಂಟಾಗುತ್ತದೆ ಎಂದರು.
ಎಸ್.ಡಿ.ಎಂ. ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸಂತೋಷ್ ಸಲ್ಡಾನ, “ತುಳುನಾಡಿನವರು ಬಹುಭಾಷಾ ಪ್ರೇಮಿಗಳು. ಇಲ್ಲಿಗೆ ಹೊರಗಿನಿಂದ ಬಂದವರು ಕನ್ನಡದ ಜತೆಗೆ ತುಳು ಭಾಷೆಯನ್ನೂ ಕಲಿಯುವಂತೆ ಇಲ್ಲಿನ ಜನರು ಕನ್ನಡದ ಜತೆಗೆ ಹಿಂದಿ ಭಾಷೆಯನ್ನೂ ಕಲಿಯುತ್ತಾರೆ. ಇತರ ಭಾಷೆಗಳನ್ನೂ ಕಲಿಯುತ್ತಾರೆ” ಎಂದರು.
ಡಾ. ಬಿ.ಎ. ಕುಮಾರ ಹೆಗ್ಡೆ ಅವರು ವಿದ್ಯಾರ್ಥಿಗಳಿಗೆ ಹಿಂದಿ ದಿವಸದ ಪ್ರತಿಜ್ಞಾವಿಧಿ ಬೋಧಿಸಿದರು.
ಹಿಂದಿ ವಿಭಾಗದ ಮುಖ್ಯಸ್ಥ ಡಾ. ಮಲ್ಲಿಕಾರ್ಜುನ ಎನ್. ಸ್ವಾಗತಿಸಿದರು. ಪ್ರಾಧ್ಯಾಪಕಿ ಶ್ರುತಿ ಮಣಕೀಕರ್ ವಂದಿಸಿದರು. ವಿದ್ಯಾರ್ಥಿನಿ ಫರಹಾನಾ ಪರವೀನ್ ಕಾರ್ಯಕ್ರಮ ನಿರೂಪಿಸಿದರು.