ಮಂಗಳೂರು: ನಗರದಲ್ಲಿ ಹುಲಿ ವೇಷಧಾರಿಯ ಟೋಪಿಗೆ ಬೆಂಕಿ ಹತ್ತಿಕೊಂಡ ಘಟನೆಯೊಂದು ನಡೆದಿದೆ. ನವರಾತ್ರಿ, ದಸರಾ ಹಬ್ಬದ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹುಲಿ ವೇಷ, ಹುಲಿ ಕುಣಿತದ ಅಬ್ಬರ ಜೋರಿರುತ್ತದೆ. ಈ ವರ್ಷವೂ ಜಿಲ್ಲೆಯಾದ್ಯಂತ ಅನೇಕ ಕಡೆಗಳಲ್ಲಿ ಹುಲಿ ಕುಣಿತ ಸೇರಿದಂತೆ ವಿಜೃಂಭಣೆಯಿಂದ ದಸರಾ, ನವರಾತ್ರಿ ಆಚರಿಸಲಾಗಿದೆ. ಈ ಮಧ್ಯೆ, ಅಲ್ಲಲ್ಲಿ ಹುಲಿ ವೇಷಧಾರಿಗಳಿಗೆ ಆವೇಷ ಬಂದ ಘಟನೆಗಳೂ ವರದಿಯಾಗಿದೆ. ಇದರ ಜೊತೆಗೆ ಮತ್ತೊಂದು ಘಟನೆ ನಡೆದಿದೆ.
ಮಂಗಳೂರಿನ ಕೆಎಸ್ ರಾವ್ ರಸ್ತೆಯಲ್ಲಿ ವಿವಿಧ ಕಸರತ್ತು ಪ್ರದರ್ಶಿಸುತ್ತಿದ್ದ ಹುಲಿವೇಷಧಾರಿಗಳ ತಂಡ ಮೆರವಣಿಗೆ ಹೋಗುತ್ತಿದ್ದಾಗ ವೇಷಧಾರಿಯೊಬ್ಬರು ಬೆಂಕಿ ಸಾಹಸ ಮಾಡಲು ಮುಂದಾಗಿದ್ದಾರೆ. ಹುಲಿ ವೇಷಧಾರಿ ಬಾಯಿಯಿಂದ ಬೆಂಕಿ ಉಗುಳುವ ಸಾಹಸ ಮಾಡುತ್ತಿದ್ದಂತೆಯೇ ಅವರ ಟೋಪಿಗೆ ಧಗ್ಗನೆ ಬೆಂಕಿಹೊತ್ತಿಕೊಂಡಿದೆ. ತಕ್ಷಣ ಅವರು ಟೋಪಿಯನ್ನು ಕಿತ್ತೆಸೆದು ಮೈಗೆ ಬೆಂಕಿ ತಗುಲದಂತೆ ನೋಡಿಕೊಂಡಿದ್ದಾರೆ. ಹುಲಿ ವೇಷಧಾರಿಯ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.