ಮಂಗಳೂರು: ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ಅಪಚಾರ, ಹಿಂದು ಕಾರ್ಯಕರ್ತರಿಗೆ ನೋವು ಉಂಟಾದ ಸಂದರ್ಭ ಅವರೆಲ್ಲರ ಪರವಾಗಿ ನಾನಿದ್ದೇನೆ ಎಂದು ಗಟ್ಟಿ ಧ್ವನಿಯಲ್ಲಿ ಹೇಳುವ ಸಮರ್ಥ ಕಾರ್ಯಕರ್ತನ ಅಗತ್ಯ ಪುತ್ತೂರು ಕ್ಷೇತ್ರಕ್ಕಿದೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು.
ಪುತ್ತೂರಿನಲ್ಲಿ ಬುಧವಾರ ತಮ್ಮ ಬೆಂಬಲಿಗರ ಸಭೆಯಲ್ಲಿ ಅವರು ಮಾತನಾಡಿದರು. ಬಿಜೆಪಿಯಿಂದ ಟಿಕೆಟ್ ಘೋಷಣೆಯಾದ ಅಭ್ಯರ್ಥಿ ನನಗೆ ಕರೆ ಮಾಡಿದ್ದರು. ಜನಪ್ರತಿನಿಧಿಯಾಗಿ ಅವರು ಪ್ರಾಮಾಣಿಕ ಸೇವೆ ನೀಡಿದ್ದಾರೆ. ಅವರ ಆಯ್ಕೆ ಬಗ್ಗೆ ವರಿಷ್ಠರು, ಸಂಘ ಪರಿವಾರದ ಮುಖಂಡರಲ್ಲಿ ಪ್ರಶ್ನೆ ಮಾಡುವುದಿಲ್ಲ. ಆದರೆ ಅನೇಕ ಸಂದರ್ಭ ಅಮಾಯಕ ಹಿಂದೂ ಕಾರ್ಯಕರ್ತರ ಮೇಲೆ ವಿವಿಧ ಕೇಸು ಹಾಕಿ ಅವರನ್ನು ಹಿಂಸಿಸುವ ಕಾರ್ಯ ನಡೆದಿದೆ. ಈ ನಿಟ್ಟಿನಲ್ಲಿ ಆ ಪ್ರಕರಣಗಳಿಂದ ಅವರಿಗೆಲ್ಲ ಮುಕ್ತಿ ನೀಡುವ ಸಮರ್ಥ ನಾಯಕತ್ವ ಈ ಕ್ಷೇತ್ರಕ್ಕೆ ಅಗತ್ಯವಿದೆ.
ವಿಧಾನ ಸೌಧದಲ್ಲಿ ನೈಜ ಹಿಂದೂ ಧ್ವನಿ ಮೊಳಗಿಸುವ ಸಮರ್ಥ ನಾಯಕ ಆಯ್ಕೆಯಾಗಬೇಕಿದೆ. ಗ್ರಾಮ ಗ್ರಾಮದಲ್ಲಿ ಭಗವಧ್ವಜ ಹಾರಾಡಬೇಕು. ಗೋಮಾತೆ ರಾಷ್ಟ್ರೀಯ ಪ್ರಾಣಿಯಾಗಬೇಕು. ನೀವು (ಕಾರ್ಯಕರ್ತರು) ಜನಪ್ರತಿನಿಧಿಯಾಗಿ ನಾನು ಆಯ್ಕೆಯಾಗಬೇಕು ಎಂಬ ಆಗ್ರಹ ಮತ್ತು ನೋವಿನ ಕೂಗನ್ನು ನಾನು ಕಂಡಿದ್ದೇನೆ. 10-12 ವರ್ಷಗಳ ಹಿಂದೆ ಶನಿಪೂಜೆ ಸಂದರ್ಭ ನಡೆದ ಎನ್ ಕೌಂಟರ್ ವೇಳೆ ನೀವೆಲ್ಲಾ ಬೆಂಬಲವಾಗಿ ನಿಂತಿರುವುದನ್ನು ನಾನು ಮರೆತಿಲ್ಲ. ಈ ನಿಟ್ಟಿನಲ್ಲಿ ನಿಮ್ಮೆಲ್ಲರ ಒಪ್ಪಿಗೆ, ಸಹಕಾರದ ಮೇಲೆ ಮುಂದಿನ 2 ದಿನಗಳಲ್ಲಿ ಭವಿಷ್ಯದ ನಿರ್ಧಾರ ಕೈಗೊಳ್ಳಲಾಗುವುದು. ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಎಂದು ನಿರ್ಧಾರ ಮಾಡಿದಲ್ಲಿ ಸಹಸ್ರ ಸಹಸ್ರ ಸಂಖ್ಯೆಯ ಕಾರ್ಯಕರ್ತರು ಅದನ್ನು ಒಪ್ಪಿ ಬೆಂಬಲ ನೀಡುತ್ತಾರೆ ಎಂಬ ಭರವಸೆ ಇದೆ ಎಂದು ಹೇಳಿದರು. ಈ ವೇಳೆಯಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಬೆಂಬಲಿಗರು ಅರುಣ್ ಪುತ್ತಿಲ ಅವರಿಗೆ ಜೈಕಾರ ಕೂಗಿದರು.
ಹಿಂದುತ್ವದ ಹೆಸರಿನಲ್ಲಿ ಲಾಭ: ಸಭೆಯಲ್ಲಿ ಮಾತಾಡಿದ ಹಿರಿಯ ಹಿಂದು ಮುಖಂಡರೊಬ್ಬರು, ಕೆಲ ನಾಯಕರು ಹಿಂದುತ್ವದ ಹೆಸರು ಹೇಳಿ ಲಾಭ ಮಾಡಿಕೊಂಡಿದ್ದಾರೆ. ಆದರೆ ಇಂದು ಅರುಣ್ ಕುಮಾರ್ ಪುತ್ತಿಲ ಅವರ ಸಭೆಗೆ ಸೇರಿದವರು ಯಾವುದೇ ಲಾಭಕ್ಕೋಸ್ಕರ ಅಲ್ಲ ದೇಶದ ಗೌರವ, ತಾಲೂಕಿನ ಗೌರವ ಕಾಯಬೇಕು ಎಂಬ ಮಹತ್ತರ ಉದ್ದೇಶದಿಂದ ಇಲ್ಲಿ ಜತೆಗೂಡಿದ್ದಾರೆ. ಈ ಸಂದೇಶ ತಲುಪಬೇಕಾದಲ್ಲಿಗೆ ತಲುಪಬೇಕಿದೆ. ಜಾತಿ ಆಧಾರದಲ್ಲಿ ನಾವಿಲ್ಲಿ ಸೇರಿಲ್ಲ. ಏನೇ ಆದರೂ ನೈಜ ಹಿಂದುತ್ವದ ಶಕ್ತಿ ಅರುಣ್ ಪುತ್ತಿಲ ಅವರಿಗೆ ಬೆಂಬಲ ನೀಡಬೇಕಿದೆ. ನಮ್ಮ ಹಿಂದೂಗಳ ನಾಯಕ ಅರುಣ್ ಪುತ್ತಿಲ ಎಂಬುದು ಅಮಿತ್ ಶಾ, ಮೋದಿ ಅವರಂತಹ ದೆಹಲಿ ನಾಯಕರಿಗೆ ಮುಟ್ಟಬೇಕಿದೆ. ಟಿಕೇಟ್ ಘೋಷಿಸಿದ ವೇಳೆ ಕೂಲಂಕಷವಾಗಿ ಪರಿಶೀಲನೆ ನಡೆಸಿ ಟಿಕೇಟ್ ನೀಡಿದ್ದೇವೆ ಎಂದು ಹೇಳಿದ್ದಾರೆ. ಆದರೆ ಈ ಬಗ್ಗೆ ನಮಗೆ ಅಸಮಾಧಾನವಿದೆ. ಪ್ರಾಮಾಣಿಕ ಹಿಂದೂ ಕಾರ್ಯಕರ್ತರಿಗೆ ಆದ ನೋವು ತೋಡಿಕೊಳ್ಳಲು ಇಲ್ಲಿ ನಾವು ಸೇರಿದ್ದೇವೆ ಎಂದು ಅವರು ತಿಳಿಸಿದರು.
ಹಿಂದುತ್ವದ ಬೇರು ತುಂಡರಿಸುವ ಯತ್ನ: ಉಳಿದೆಲ್ಲ ಪ್ರದೇಶಗಳಿಗಿಂತ ಹೆಚ್ಚಾಗಿ ಹಿಂದುತ್ವ ಅಂಶ ಗಟ್ಟಿ ಇರುವ ಪ್ರದೇಶದಲ್ಲಿ ಅಭ್ಯರ್ಥಿ ಆಯ್ಕೆಯಲ್ಲಿ ವಿಚಿತ್ರ ಪ್ರಯೋಗ ನಡೆದಿದೆ. ಕಾರ್ಯಕರ್ತರ ಮೂಲ ಬೇರನ್ನೆ ಕಿತ್ತು ತೆಗೆಯುವ ಕೆಲಸವಾಗುತ್ತಿದೆ. ಅದು ನಮಗೆ ನೋವು ತಂದಿದೆ. ಪುತ್ತೂರಿನಲ್ಲಿ ಅಸಹ್ಯ ಜಾತಿ ರಾಜಕೀಯದ ಸ್ಥಿತಿ ಎದುರಾಗಿದೆ. ಇದನ್ನು ನಾವು ವಿರೋಧಿಸಿ ಹಿಂದೂ ಶಕ್ತಿಯ ಹೆಸರಿನಲ್ಲಿ ಹೋರಾಟ ನಡೆಸಬೇಕಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.