ವಿಜಯಪುರ: ಪಕ್ಷದ ನಾಯಕರ ತೀವ್ರ ವಿರೋಧದ ನಡುವೆಯೂ ಹಾಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಈ ಬಾರಿಯೂ ಬಿಜೆಪಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಜೆಪಿ ಹೈಕಮಾಂಡ್ ಮಂಗಳವಾರ ಬಿಡುಗಡೆ ಮಾಡಿದ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಮುದ್ದೇಬಿಹಾಳದಿಂದ ಎ.ಎಸ್.ಪಾಟೀಲ್ ನಡಹಳ್ಳಿ, ಸಿಂದಗಿಯಿಂದ ರಮೇಶ್ ಭೂಸನೂರ ಮತ್ತು ಬಬಲೇಶ್ವರದಿಂದ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಅವರ ಹೆಸರು ಕಾಣಿಸಿಕೊಂಡಿದೆ.
ಮಾಜಿ ಶಾಸಕ ಅಪ್ಪು ಪಟ್ಟಣಶೆಟ್ಟಿ ಅವರಿಗೆ ಟಿಕೆಟ್ ನೀಡುವಂತೆ ಬಿಜೆಪಿ ಒಂದು ಬಣ ತೀವ್ರ ಲಾಬಿ ನಡೆಸಿತ್ತು. ಬಣಜಿಗ ಸಮುದಾಯದ ಮುಖಂಡರು ಕೂಡ ಪಟ್ಟಣಶೆಟ್ಟಿ ಅವರಿಗೆ ಟಿಕೆಟ್ ನೀಡುವಂತೆ ಬಿಜೆಪಿ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದರು.
ಯತ್ನಾಳ್ ಅವರು ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಜಿಲ್ಲೆಯ ಬಿಜೆಪಿ ನಾಯಕರ ಒಂದು ವಿಭಾಗ ಆರೋಪಿಸಿತ್ತು.
ಆಶ್ಚರ್ಯಕರ ಸಂಗತಿಯೆಂದರೆ, ಯಡಿಯೂರಪ್ಪ, ವಿಜಯೇಂದ್ರ ಸೇರಿದಂತೆ ಹಲವು ಮುಖಂಡರ ವಿರುದ್ಧ ಯತ್ನಾಳ್ ಬಹಿರಂಗ ಸಮರ ಸಾರಿದ್ದರು. ಆದರೆ ಟಿಕೇಟ್ ಪಡೆಯಲು ಇದೆಲ್ಲ ನನಗೆ ಅಡ್ಡಿಯಾಗುವುದೇ ಇಲ್ಲ ಎಂಬುದನ್ನು ಯತ್ನಾಳ್ ಸಾಬೀತು ಮಾಡಿದ್ದಾರೆ.
ಏತನ್ಮಧ್ಯೆ, ತಮಗೆ ಟಿಕೆಟ್ ನಿರಾಕರಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪಟ್ಟಣಶೆಟ್ಟಿ, ದಶಕಗಳಿಂದ ಪಕ್ಷ ನಿಷ್ಠಾವಂತರಾಗಿದ್ದವರಿಗೆ ಟಿಕೆಟ್ ನೀಡುವ ಬಗ್ಗೆ ಪಕ್ಷ ಯೋಚಿಸಿಲ್ಲ ಎಂದು ಹೇಳಿದ್ದಾರೆ. . “ಈ ಹಿಂದೆ ಪಕ್ಷದಿಂದ ಉಚ್ಛಾಟಿಸಲ್ಪಟ್ಟ ಯತ್ನಾಳ್ ಅವರಿಗೆ ಮತ್ತೆ ಟಿಕೆಟ್ ನೀಡಲಾಗಿದೆ, ಆದರೆ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಎಂದಿಗೂ ಭಾಗಿಯಾಗದ ನನಗೆ ಟಿಕೇಟ್ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.