ವೇಣೂರು: ೨೦೨೪ರ ಫೆಬ್ರವರಿಯಲ್ಲಿ ನಡೆಯಲಿರುವ ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಪೂರ್ವಭಾವಿಯ ಕಾರ್ಯಕ್ರಮಗಳಿಗೆ ಜು.೯ರಿಂದ ಚಾಲನೆ ದೊರೆಯಲಿದ್ದು, ಲಕ್ಷಾಂತರ ಮಂದಿ ಸೇರುವ ಈ ಮಹಾಮಜ್ಜನ ವೈಭವಕ್ಕೆ ದಿನಗಣನೆ ಆರಂಭವಾಗಿದೆ.
ಜು. ೯ರಂದು ಪೂರ್ವಾಹ್ನ ೧೧.೩೦ರಿಂದ ಕಾರ್ಯಾಲಯ ಮತ್ತು ಮಹಾಮಸ್ತಕಾಭಿಷೇಕದ ವೆಬ್ಸೈಟ್ ಅನಾವರಣಗೊಳ್ಳಲಿದೆ. ಮೂಡಬಿದಿರೆ ಶ್ರೀ ಜೈನ ಮಠದ ಡಾ| ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿಯವರು ಪಾವನ ಸಾನಿಧ್ಯ ಮತ್ತು ಆಶೀರ್ವಚನ ನೀಡಲಿದ್ದಾರೆ.
ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರು ಅಧ್ಯಕ್ಷತೆ ವಹಿಸಲಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ಮಹಾಮಸ್ತಕಾಭಿಷೇಕದ ವೆಬ್ಸೈಟನ್ನು ಅನಾವರಣಗೊಳಿಸಲಿದ್ದಾರೆ ಎಂದು ಮಹಾಮಸ್ತಕಾಭಿಷೇಕ ಮಹೋತ್ಸವ ಸಮಿತಿಯ ಪ್ರ. ಕಾರ್ಯದರ್ಶಿ ವಿ. ಪ್ರವೀಣ್ಕುಮಾರ್ ಇಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.