ವೇಣೂರು: ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ದ.ಕ. ಜಿಲ್ಲಾ ಘಟಕದ ೨೦೨೩-೨೦೨೫ರ ಸಾಲಿನ ನೂತನ ಅಧ್ಯಕ್ಷರಾಗಿ ವೇಣೂರು ಗ್ರಾ.ಪಂ.ನ ಅಭಿವೃದ್ಧಿ ಅಧಿಕಾರಿ ನಾಗೇಶ್ ಎಂ. ಆಯ್ಕೆಯಾಗಿದ್ದಾರೆ.
ಡಿ. ೩೦ರಂದು ಮಂಗಳೂರಿನ ತಾ.ಪಂ. ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ದ.ಕ. ಜಿಲ್ಲೆಯ ೧೯೦ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮತದಾನವಿತ್ತು. ಇದರಲ್ಲಿ ೧೭೬ ಮಂದಿ ಪಿಡಿಒಗಳು ಮತದಾನದ ಹಕ್ಕನ್ನು ಚಲಾಯಿಸಿದ್ದರು. ನಾಗೇಶ್ ಎಂ. ೧೦೧ ಮತಗಳನ್ನು ಪಡೆಯುವ ಮೂಲಕ ಜಯ ಗಳಿಸಿ ಅಧ್ಯಕ್ಷರಾಗಿ ಆಯ್ಕೆಯಾದರೆ, ಎದುರಾಳಿ ಅರುಣ್ ಪ್ರದೀಪ್ ಡಿಸೋಜ ಅವರು ೭೫ ಮತಗಳನ್ನು ಪಡೆದಿದ್ದರು.
ಉಪಾಧ್ಯಕ್ಷರಾಗಿ ಬಂಟ್ವಾಳ ಸಜಿಪ ಮುನ್ನೂರು ಗ್ರಾ.ಪಂ.ನ ಪಿಡಿಒ ಲಕ್ಷ್ಮಣ್ ಹೆಚ್. ಕೆ., ಖಜಾಂಜಿಯಾಗಿ ಕೋಟ ಶ್ರೀನಿವಾಸ ಪೂಜಾರಿಯವರ ಆಪ್ತ ಸಹಾಯಕ ಪರಮೇಶ್ವರ್, ರಾಜ್ಯ ಪರಿಷತ್ ಆಗಿ ಉಳ್ಳಾಲದ ಬೆಳ್ಮ ಗ್ರಾ.ಪಂ.ನ ಪಿಡಿಒ ರಮೇಶ್ ನಾಯ್ಕ್ ಚುನಾವಣೆ ಮೂಲಕ ಬಹುಮತಗಳಿಂದ ಆಯ್ಕೆಯಾಗಿದ್ದಾರೆ.
ಉಳಿದಂತೆ ಅವಿರೋಧವಾಗಿ ರೋಹಿಣಿ ಕೊಳ್ನಾಡು ಉಪಾಧ್ಯಕ್ಷೆಯಾಗಿ, ಸಂಘಟನಾ ಕಾರ್ಯದರ್ಶಿಯಾಗಿ ಅವಿನಾಶ್ ಬಿ.ಆರ್. ಒಳಮೊಗ್ರು ಪುತ್ತೂರು, ಸಂಘಟನಾ ಕಾರ್ಯದರ್ಶಿಯಾಗಿ ಸಂಧ್ಯಾ ಅಶೋಕ್ ಬಾಳ್ತಿಲ, ಕ್ರೀಡಾ ಕಾರ್ಯದರ್ಶಿಯಾಗಿ ಕೃಷ್ಣ ನಾಯಕ್ ಅಡ್ಯಾರು ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ನಿಡ್ಪಳ್ಳಿಯ ಸಂಧ್ಯಾ ಲಕ್ಷ್ಮೀ ಆಯ್ಕೆಯಾಗಿದ್ದಾರೆ. ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ದಿಲೀಪ್ ಕುಮಾರ್ ಚುನಾವಣಾಧಿಕಾರಿಯಾಗಿ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು.